ಶಾಸನಸಭೆ ಒಪ್ಪಿದರೆ ಮತ್ತೆ ರಾಜ್ಯದಲ್ಲಿ 'ಸಾರಾಯಿ ಭಾಗ್ಯ'
ಬೆಂಗಳೂರು, ಮಾ. 28: ಬಡವರು ದುಬಾರಿ ಮದ್ಯಕ್ಕೆ ದಾಸರಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸದನ ಒಪ್ಪಿಗೆ ನೀಡುವುದಾದರೆ ಹಳ್ಳಿಗಳಲ್ಲಿ ಸಾರಾಯಿ ನಿಷೇಧ ತೆರವು ಮಾಡಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಬ್ರೇಕ್ ಹಾಕಬೇಕು ಎಂಬ ಕೂಗು ವಿಧಾನಸಭೆಯಲ್ಲಿ ಕೇಳಿಬಂದಿದಕ್ಕೆ ಸಿಎಂ ಸಿದ್ದರಾಮಯ್ಯ ಕೊಟ್ಟ ಉತ್ತರ ಹೀಗಿತ್ತು.[ಬೀಡಿ, ಸಿಗರೇಟು, ಹೆಂಡಕ್ಕೆ ತೆರಿಗೆ ಕಟ್ಟಿಕಟ್ಟಿ ಸುಸ್ತಾಯ್ತಾ?!]
ಬಜೆಟ್ ಚರ್ಚೆಯ ವೇಳೆ ಮಾತನಾಡಿದ ಮುಖ್ಯಮಂತ್ರಿ, ಕಡಿಮೆ ದರದಲ್ಲಿ ಮದ್ಯ ಬಡವರಿಗೆ ಸಿಗುವಂತೆ ಮಾಡುವುದರಲ್ಲಿ ತಪ್ಪೇನಿಲ್ಲ. ಹಿಂದಿನ ಸರ್ಕಾರ ರಾಜ್ಯದಲ್ಲಿ ಸಾರಾಯಿ ನಿಷೇಧ ಮಾಡಿದ್ದಕ್ಕೆ ನನ್ನ ಸಹಮತ ಇರಲಿಲ್ಲ. ನಮ್ಮ ಸರ್ಕಾರವೂ ನಿಷೇಧ ಮುಂದುವರಿಸಿದೆ. ಈಗಲೂ ಎಲ್ಲರ ಒಪ್ಪಿಗೆ ಸಿಕ್ಕರೆ ಸಾರಾಯಿ ಮಾರಾಟ ಮತ್ತೆ ಆರಂಭಿಸುವ ಬಗ್ಗೆ ಯೋಚಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಹಿಂದೆ 10-12 ರೂ.ಗೆ ಸಾರಾಯಿ ಪ್ಯಾಕ್ ಸಿಗುತ್ತಿತ್ತು ಇತ್ತು. ಹಾಗಾಗಿ ನಾನು ಸಾರಾಯಿ ನಿಲ್ಲಿಸಬಾರದು ಎಂದು ಸಲಹೆ ಮಾಡಿದ್ದೆ. ಆದರೆ, ನಿಷೇಧ ಆದ ಬಳಿಕ ಜನ ಹೆಚ್ಚಿನ ಬೆಲೆಯ ಮದ್ಯವನ್ನು ಸೇವಿಸಲಾರಂಭಿಸಿದ್ದಾರೆ. ಇದರಿಂದ ಸಾಲದಲ್ಲಿಯೂ ಮುಳುಗುತ್ತಿದ್ದಾರೆ ಎಂದರು.
ಇದಕ್ಕೆ ಉತ್ತರಿಸಿದ ಕಾಂಗ್ರೆಸ್ನ ರಮೇಶ್ ಕುಮಾರ್, ಆರೋಪ ಮಾಡುವವರು ಮಾಡುತ್ತಲೇ ಇರುತ್ತಾರೆ ಜನಹಿತಕ್ಕಾಗಿ ಯಾವುದೇ ಕಾರ್ಯ ಮಾಡುವುದಕ್ಕೆ ನಮ್ಮ ಬೆಂಬಲ ಇದ್ದೇ ಇದೆ ಎಂದರು.[ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಬೆಂಗಳೂರಿಗೆ ಕೊಟ್ಟಿದ್ದೇನು?]
ಅಗ್ಗದ ಮದ್ಯವನ್ನು ಜಾರಿಗೆ ತನ್ನಿ, ಮದ್ಯದ ಅಂಗಡಿಗಳನ್ನು ಪ್ರತಿ ವರ್ಷ ಹರಾಜು ಹಾಕಿ, ಆಗ ಹೆಚ್ಚಿನ ತೆರಿಗೆ ಸಂಗ್ರಹ ಸಾಧ್ಯವಾಗುತ್ತದೆ ಎಂಬ ಸಲಹೆಗಳು ಸದನದಲ್ಲಿ ಕೇಳಿಬಂದವು.
2007ರ ಜುಲೈನಲ್ಲಿ ಅಂದಿನ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸಾರಾಯಿ ನಿಷೇಧ ಜಾರಿಗೊಳಿಸಿತ್ತು. ಸಾರಾಯಿ ನಿಷೇಧ ಮಾಡುವಂತೆ ಸಾರ್ವಜನಿಕರು ನಡೆಸಿದ ಹೋರಾಟಕ್ಕೆ ಮಣಿದು ಅಂದಿನ ಸರ್ಕಾರ ನಿರ್ಧಾರ ಕೈಗೊಂಡಿತ್ತು.