ಕರ್ನಾಟಕದಲ್ಲಿ ಶೇ.54ರಷ್ಟು ವೈದ್ಯಕೀಯ ಆಮ್ಲಜನಕ ಪೂರೈಕೆ ಇಳಿಮುಖ
ಬೆಂಗಳೂರು, ಜೂನ್ 11: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ನಿರಂತರ ಇಳಿಮುಖವಾಗುತ್ತಿದೆ. ಇದರ ಮಧ್ಯೆ ರಾಜ್ಯದ ಕೊವಿಡ್-19 ಕೇಂದ್ರಗಳಿಗೆ ಹಂಚಿಕೆಯಾಗುತ್ತಿರುವ ವೈದ್ಯಕೀಯ ಆಮ್ಲಜನಕದ ಪ್ರಾಣದಲ್ಲೂ ಶೇ.54ರಷ್ಟು ಕುಸಿತ ಕಂಡು ಬಂದಿದೆ. ದಿನವೊಂದಕ್ಕೆ 1,200 ಮೆಟ್ರಿಕ್ ಟನ್ ಬದಲಿಗೆ 552 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸಲಾಗುತ್ತಿದೆ.
ರಾಜ್ಯದ ಕೊವಿಡ್-19 ಆಸ್ಪತ್ರೆಗಳಲ್ಲಿ ದಿನವೊಂದಕ್ಕೆ ಬಳಸುವ ವೈದ್ಯಕೀಯ ಆಮ್ಲಜನಕದ ಪ್ರಮಾಣದಲ್ಲೂ ಶೇ.35ರಷ್ಟು ಇಳಿಕೆಯಾಗಿದೆ. ಗರಿಷ್ಠ 830 ಮಟ್ರಿಕ್ ಟನ್ ಬದಲಿಗೆ 529 ಮೆಟ್ರಿಕ್ ಟನ್ ಆಮ್ಲಜನಕವನ್ನು ಬಳಸಲಾಗುತ್ತಿದೆ.
ಕೊವಿಶೀಲ್ಡ್ ಮತ್ತು ಸ್ಪುಟ್ನಿಕ್-ವಿ ಲಸಿಕೆಗಿಂತ ಕೊವ್ಯಾಕ್ಸಿನ್ ದುಬಾರಿ ಯಾಕೆ?
ಜೂನ್ 9ರ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕಕ್ಕೆ ಪೂರೈಸುವ ವೈದ್ಯಕೀಯ ಆಮ್ಲಜನಕ ಹಂಚಿಕೆ ಪ್ರಮಾಣದ ಪರಿಷ್ಕರಣೆಗೆ ಸಂಬಂಧಿಸಿದಂತೆ ನೋಡೆಲ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿಗೆ ನೀಡುವ 180 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 552 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಲಾಗುತ್ತಿದೆ.
ಕರ್ನಾಟಕದಲ್ಲಿ ಆಮ್ಲಜನಕದ ಅವಶ್ಯಕತೆ ಎಷ್ಟಿದೆ?
ರಾಜ್ಯದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಲ್ಲಿ ರೋಗಿಗಳು ಅತಿಹೆಚ್ಚು ಉಸಿರಾಟ ಸಮಸ್ಯೆಗಳನ್ನು ಎದುರಿಸಿದರು. ಈ ಹಂತದಲ್ಲಿ ಮೇ ತಿಂಗಳ ವೇಳೆಗೆ ಕರ್ನಾಟಕಕ್ಕೆ ಒಂದು ದಿನಕ್ಕೆ 830 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿತ್ತು. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ 285 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯವಿತ್ತು.
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದ ಸಂದರ್ಭದಲ್ಲಿ ಅತಿಹೆಚ್ಚು ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಆಮ್ಲಜನಕ ಅತ್ಯಗತ್ಯವಾಗಿತ್ತು. ಹೈಕೋರ್ಟ್ ಸೂಚನೆ ನೀಡಿದ ನಂತರದಲ್ಲಿ 1,200 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು ಮಾಡಲಾಯಿತು. ಇದರ ಹೊರತಾಗಿಯೂ, ರಾಜ್ಯದಲ್ಲಿ ಪೂರೈಕೆದಾರರು ಪ್ರತಿನಿತ್ಯ 850 ಮೆಟ್ರಿಕ್ ಟನ್ ಆಮ್ಲಜನಕ ಪಡೆಯಲಾಗಿತ್ತು.
ಹೈಕೋರ್ಟ್ ಸೂಚನೆಗೂ ಮೊದಲು ರಾಜ್ಯ ಸರ್ಕಾರವು ಆಸ್ಪತ್ರೆಗಳಿಗೆ ಪ್ರತಿನಿತ್ಯ 765 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ ಮಾಡಲಾಗುತ್ತಿತ್ತು. ಈ ಪೈಕಿ ಬೆಂಗಳೂರಿನ ಆಸ್ಪತ್ರೆಗಳಿಗೆ 252 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜು ಮಾಡಲಾಗುತ್ತಿತ್ತು. ಏಪ್ರಿಲ್ 26 ರಿಂದ ಮೇ 7ರ ಅವಧಿಯಲ್ಲಿ ಚಾಮರಾಜನಗರ, ಕಲಬುರಗಿ ಮತ್ತು ಕೋಲಾರ ಜಿಲ್ಲೆಯಲ್ಲಿ ಕೊವಿಡ್-19 ರೋಗಿಗಳು ಆಮ್ಲಜನಕ ಕೊರತೆಯಿಂದಲೇ ಪ್ರಾಣ ಬಿಟ್ಟ ಪ್ರಕರಣಗಳು ಹೆಚ್ಚಾಗಿದ್ದವು.