'ಮಹದಾಯಿ ತೀರ್ಪು ಸ್ವಲ್ಪ ಸಮಾಧಾನ, ಸ್ವಲ್ಪ ಬೇಸರ ತಂದಿದೆ'
ಬೆಂಗಳೂರು, ಆಗಸ್ಟ್ 14 : ಮಹದಾಯಿ ನ್ಯಾಯಾಧಿಕರಣ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕ ಸರ್ಕಾರ ಪ್ರಶ್ನಿಸುವ ಸಾಧ್ಯತೆ ಇದೆ. ನ್ಯಾಯಾಧಿಕರಣದ ತೀರ್ಪು ಪ್ರಕಟವಾಗಿದ್ದು ಕರ್ನಾಟಕಕ್ಕೆ 13.5 ಟಿಎಂಸಿ ನೀರು ಲಭ್ಯವಾಗಿದೆ.
ಮಂಗಳವಾರ ಮಹದಾಯಿ ನ್ಯಾಯಾಧಿಕರಣ ಮಹದಾಯಿ ವಿವಾದದ ಅಂತಿಮ ತೀರ್ಪು ನೀಡಿದೆ. ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕದ ಪರ ವಕೀಲ ಮೋಹನ್ ಕಾತರಕಿ ಅವರು, 'ಪೂರ್ಣವಾಗಿ ನಾನು ತೀರ್ಪು ಓದಿಲ್ಲ. ಈ ತೀರ್ಪು ಸ್ವಲ್ಪ ಸಮಾಧಾನ, ಸ್ವಲ್ಪ ಬೇಸರ ತಂದಿದೆ' ಎಂದು ಹೇಳಿದರು.
ಮಹದಾಯಿ ತೀರ್ಪು ಪ್ರಕಟ: ಉ.ಕರ್ನಾಟಕ ಹೋರಾಟಗಾರರಿಗೆ ಸಂದ ಜಯ
'ತೀರ್ಪಿನ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ. ಸಂಪೂರ್ಣವಾಗಿ ಅಧ್ಯಯನ ನಡೆಸಿದ ಬಳಿಕ ಕರ್ನಾಟಕ ಸರ್ಕಾರದ ಜೊತೆ ಚರ್ಚೆ ನಡೆಸಿ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಬೇಕೆ?, ಬೇಡವೇ? ಎಂದು ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದರು.
ಒಂದು 'ಟಿ.ಎಂ.ಸಿ' ನೀರಿನ ಪ್ರಮಾಣ ಎಂದರೆ ಎಷ್ಟಾಗುತ್ತೆ?
'ಮಹದಾಯಿ ನ್ಯಾಯಾಧಿಕರಣದ ತೀರ್ಪು 12 ಸಂಪುಟಗಳನ್ನು ಒಳಗೊಂಡಿದೆ. ತೀರ್ಪಿನ ಅಧ್ಯಯನದ ಬಳಿಕ ಮೇಲ್ಮನವಿ ಸಲ್ಲಿಸುವುದು ಅಥವ ನ್ಯಾಯಾಧಿಕರಣದ ಮುಂದೆ ವಿವರಣೆ ನೀಡುವಂತೆ ಮನವಿ ಸಲ್ಲಿಸುವುದೋ ಎಂದು ತೀರ್ಮಾನ ಮಾಡುತ್ತೇವೆ' ಎಂದು ತಿಳಿಸಿದರು.
ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರತಿ ಇನ್ನೂ ಲಭ್ಯವಾಗಿಲ್ಲ. ಆದರೆ, ತೀರ್ಪಿನ ಪ್ರಮುಖ ಅಂಶಗಳು ಈಗಾಗಲೇ ಬಹಿರಂಗವಾಗಿದೆ. ಕರ್ನಾಟಕ್ಕೆ 13.05 ಟಿಎಂಸಿ ನೀರು ಹಂಚಿಕೆಯಾಗಿದೆ. 13 ಟಿಎಂಸಿಯಲ್ಲಿ 5.5 ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ, 8 ಟಿಎಂಸಿ ನೀರನ್ನು ನೀರಾವರಿಗಾಗಿ ಬಳಸಬಹುದು.