Breaking news; ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಿ ಆದೇಶ
ಬೆಂಗಳೂರು, ಸೆಪ್ಟೆಂಬರ್ 09; ವ್ಯಾಪಾರಿಗಳ, ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದ ಕರ್ನಾಟಕ ಸರ್ಕಾರ ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಿ ಆದೇಶ ಹೊರಡಿಸಿದೆ. ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಾದರೆ ಮತ್ತೆ ಕರ್ಫ್ಯೂ ಜಾರಿಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಗುರುವಾರ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಲಾಗಿದೆ.
ಕರ್ಫ್ಯೂ ತೆಗೆಯಿರಿ ಎಂದವನಿಗೆ ದಕ್ಷಿಣ ಕನ್ನಡ ಡಿಸಿ ಕೊಟ್ಟ ಉತ್ತರವೇನು? ಆಡಿಯೋ ವೈರಲ್
ಕರ್ನಾಟಕದಲ್ಲಿನ ಪಾಸಿಟಿವಿಟಿ ದರ ಶೇ 0.63 ಆಗಿದೆ. ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದ್ದ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ 2ಕ್ಕಿಂತ ಕಡಿಮೆಯಾಗಿದೆ. ಆದ್ದರಿಂದ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಿ ಆದೇಶ ಹೊರಡಿಸಲಾಗಿದೆ.
ಉಡುಪಿ; ವಾರಂತ್ಯದ ಕರ್ಫ್ಯೂಗೆ ವಿರೋಧ, ತಿರುಗಿಬಿದ್ದ ಶಾಸಕರು!
ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ರಾಜ್ಯದಲ್ಲಿ 24 ಗಂಟೆಯಲ್ಲಿ 1074 ಹೊಸ ಪ್ರಕರಣಗಳು ದಾಖಲಾಗಿವೆ, 4 ಜನರು ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಘೋಷಣೆ
ಬೆಂಗಳೂರು ನಗರ 343, ಉಡುಪಿ 126, ದಕ್ಷಿಣ ಕನ್ನಡ 176 ಬಿಟ್ಟರೆ ಯಾವುದೇ ಜಿಲ್ಲೆಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಮೂರಂಕಿ ದಾಟಿಲ್ಲ. ಚಿಕ್ಕಮಗಳೂರು 68, ಹಾಸನ 81, ಕೊಡಗು 59, ಮೈಸೂರು 48, ಶಿವಮೊಗ್ಗ 39 ಹೊಸ ಪ್ರಕರಣಗಳು 24 ಗಂಟೆಯಲ್ಲಿ ದಾಖಲಾಗಿವೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದ್ದಕ್ಕೆ ಬಿಜೆಪಿ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ವಾಣಿಜ್ಯ ಚಟುವಟಿಕೆಗಳಿಗೆ ಅಡಚಣೆಯಾಗಿದೆ. ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಿ ಎಂದು ಆಗ್ರಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಪಾಸಿಟಿವಿಟಿ ದರ ಕಡಿಮೆಯಾದರೆ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಲಾಗುತ್ತದೆ. ಆದರೆ ಇದಕ್ಕೆ ಸರ್ಕಾರದ ಒಪ್ಪಿಗೆ ಬೇಕು ಎಂದು ಹೇಳಿದ್ದರು. ಈಗ ಸರ್ಕಾರವೇ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಿ ಆದೇಶ ಹೊರಡಿಸಿದೆ.
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಯು. ಟಿ. ಖಾದರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. "ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು" ಎಂದು ಆಗ್ರಹಿಸಿದ್ದರು.
"ವಾರಾಂತ್ಯದಲ್ಲಿ ಮಾಂಸ, ತರಕಾರಿ, ದಿನಸಿ ಅಂಗಡಿಗಳು ತೆರೆದಿರುತ್ತದೆ. ಆದರೆ ಮೊಬೈಲ್, ಬಟ್ಟೆಯಂಗಡಿ ಇನ್ನಿತರ ಅಂಗಡಿಗಳು ತೆರೆಯೋಕೆ ಅವಕಾಶ ಇಲ್ಲ. ಇದರಿಂದ ಸಣ್ಣ ಮಟ್ಟದ ವ್ಯಾಪಾರಿಗಳು ಬದಕುವುದು ಸಾಧ್ಯವಿಲ್ಲದಂತಾಗಿದೆ. ಸರ್ಕಾರ ಮಾಡಿರುವ ವಾರಾಂತ್ಯದ ಕರ್ಫ್ಯೂ ಲಾಜಿಕ್ ಏನು? ಅಂತಾ ಸ್ಪಷ್ಟಪಡಿಸಬೇಕು" ಎಂದು ಹೇಳಿದ್ದರು.
"ಜಿಲ್ಲೆಯಲ್ಲಿ ಬೇರೆ ದಿನ ಎಲ್ಲಾ ಚಟುವಟಿಕೆಗಳಿಗೆ ಅವಕಾಶವಿದೆ. ಆದರೆ ವಾರಾಂತ್ಯದಲ್ಲಿ ಅವಕಾಶ ಇಲ್ಲ. ಇದರಿಂದ ಯಾವುದೇ ವ್ಯತ್ಯಾಸ ಇಲ್ಲ. ವಾರಾಂತ್ಯದಲ್ಲಿ ಕಾರ್ಯಕ್ರಮ ಮಾಡುತ್ತಿದ್ದವರು ಈಗ ವಾರದ ದಿನದಲ್ಲಿ ಮಾಡುತ್ತಿದ್ದಾರೆ. ಸರ್ಕಾರದ ಈ ಆದೇಶ ಹಾಸ್ಯಾಸ್ಪದವಾಗಿದೆ" ಎಂದು ಲೇವಡಿ ಮಾಡಿದ್ದರು.
ಉಡುಪಿಯಲ್ಲೂ ವಿರೋಧ; ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ವಾರಾಂತ್ಯದ ಕರ್ಫ್ಯೂ ತೆರವು ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿದ್ದರು. "ವಾರಾಂತ್ಯದ ಕರ್ಪ್ಯೂ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ರಾಜ್ಯ ಸರ್ಕಾರ ಉಡುಪಿಯನ್ನು ಸೇರಿಸಿದ್ದನ್ನು ರದ್ದುಮಾಡಬೇಕು" ಎಂದು ಆಗ್ರಹಿಸಿದ್ದರು.
Recommended Video
"ಕೋವಿಡ್ ಲಾಕ್ಡೌನ್ ಬಳಿಕ ಈಗ ಸ್ವಲ್ಪ ವ್ಯವಹಾರ ವ್ಯಾಪಾರಗಳು ಚೇತರಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಕರ್ಫ್ಯೂ ಜಾರಿ ಮಾಡಿದರೆ ಸಮಸ್ಯೆ ಉಂಟಾಗಲಿದೆ. ಉಡುಪಿ ಜಿಲ್ಲೆ ಗಡಿ ಜಿಲ್ಲೆ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ಗಡಿ ಜಿಲ್ಲೆ. ಹಾಗಾಗಿ ಉಡುಪಿಯಲ್ಲಿ ವಾರಾಂತ್ಯದ ಕರ್ಪ್ಯೂ ಬೇಡ" ಎಂದು ಹೇಳಿದ್ದರು.