ವಿಧಾನ ಪರಿಷತ್: ಒಂದು ಸ್ಥಾನ, ಇಪ್ಪತ್ತೊಂಭತ್ತು ಆಕಾಂಕ್ಷಿಗಳು
ಬೆಂಗಳೂರು, ಜೂ. 15: ಇರುವುದು ಒಂದು ಸ್ಥಾನ. ಆದರೆ ಅದಕ್ಕೆ ಪೈಪೋಟಿ ನಡೆಸಿರುವವರು ಬರೊಬ್ಬರಿ ಇಪ್ಪತ್ತೊಂಬತ್ತು ಮಂದಿ. ಹೀಗಿದ್ದಾಗ ಅಂತಿಮ ನಿರ್ಣಯ ಕೈಗೊಳ್ಳುವುದು ಸಾಧ್ಯವಾಗದೇ ಸಭೆಯನ್ನು ಮುಂದೂಡಲಾಯಿತು.
Recommended Video
ಇದು ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭನವದಲ್ಲಿ ಇವತ್ತು ನಡೆದ ಬೆಳವಣಿಗೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಲು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಾಲಾಗಿತ್ತು. ಅದರೊಂದಿಗೆ ಪಕ್ಷದ ಶಾಸಕರು ಹಾಗೂ ಪರಿಷತ್ ಸದಸ್ಯರೊಂದಿಗೆ ಚರ್ಚಿಸಿ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಅಂತಿಮಗೊಳಿಸಲು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಿರ್ಧಾರ ಮಾಡಿದ್ದರು.
ಪರಿಷತ್ ಚುನಾವಣೆ: ಇಲ್ಲಿದೆ ಕೇಂದ್ರಕ್ಕೆ ಕಳುಹಿಸಿದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ!
ಒಂದು ಸ್ಥಾನ, ಇಪ್ಪತ್ತೊಂಬತ್ತು ಆಕಾಂಕ್ಷಿಗಳು: ಆದರೆ ಜೆಡಿಎಸ್ ನಾಯಕರು ಸಭೆ ಸೇರಿದ ಬಳಿಕ ಗೊತ್ತಾಗಿದ್ದು ಒಂದು ಸ್ಥಾನಕ್ಕೆ ಪಕ್ಷದಲ್ಲಿ 29 ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆಂದು. ಹೀಗಾಗಿ ಜೆಡಿಎಸ್ ನಾಯಕರು ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಸಿದರೂ, ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಅಧಿಕಾರವನ್ನು ಪಕ್ಷದ ವರಿಷ್ಠ ದೇವೇಗೌಡರಿಗೆ ಕೊಡಲಾಗಿದೆ.
ಸಭೆಯ ಬಳಿಕ ಮಾಹಿತಿ ಕೊಟ್ಟಿರುವ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು, ಜೆಡಿಎಸ್ ವರಿಷ್ಠ ದೇವೇಗೌಡರ ಯಾವುದೇ ತೀರ್ಮಾನಕ್ಕೆ ನಾವು ಬದ್ಧರಾಗಿ ಇರುತ್ತೇವೆ. ಇಪ್ಪತ್ತೊಂಬತ್ತು ಜನ ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆ. ಎಲ್ಲವನ್ನೂ ಪರಿಶೀಲಿಸಿ, ದೇವೇಗೌಡರು ತೀರ್ಮಾನ ತೆಗೆದುಕೊಳ್ತಾರೆ ಎಂದಿದ್ದಾರೆ. ಆದರೆ ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅಥವಾ ಪರಿಷತ್ ಮಾಜಿ ಸದಸ್ಯ ಶರವಣ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ದೇವೇಗೌಡರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.