ವಿಧಾನ ಪರಿಷತ್ ಚುನಾವಣೆ: ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಜೆಡಿಎಸ್!
ಬೆಂಗಳೂರು. ಜೂ. 18: ರಾಷ್ಟ್ರೀಯ ಪಕ್ಷಗಳ ಮಾದರಿಯಲ್ಲಿಯೇ ಜೆಡಿಎಸ್ ಕೂಡ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ವಿಧಾನ ಪರಿಷತ್ ಟಿಕೆಟ್ ಕೊಟ್ಟಿದೆ. ಜೆಡಿಎಸ್ನಿಂದ ವಿಧಾನ ಪರಿಷತ್ ಪ್ರವೇಶ ಬಯಸಿ ಸುಮಾರು 29 ಜನರು ಅರ್ಜಿ ಸಲ್ಲಿಸಿದ್ದರು. ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದರಿಂದ ಆಯ್ಕೆ ಹೊಣೆಯನ್ನು ಜೆಡಿಎಸ್ ವರಿಷ್ಠ ದೇವೇಗೌಡರಿಗೆ ವಹಿಸಲಾಗಿತ್ತು. ಇದೀಗ ಅಚ್ಚರಿ ಎಂಬಂತೆ ಕೋಲಾರ ಭಾಗದ ಕಾರ್ಯರ್ತರೊಬ್ಬರಿಗೆ ಜೆಡಿಎಸ್ ಟಿಕೆಟ್ ಕೊಡಲಾಗಿದ್ದು, ನಾಮಪತ್ರ ಸಲ್ಲಿಸಿದ್ದಾರೆ.
ಈಗಾಗಾಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕೂಡ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡುವ ಭರವಸೆ ಕೊಟ್ಟಿದ್ದವರು. ಬಿಜೆಪಿ ಅಳೆದು ತೂಗಿ ಒಬ್ಬ ಕಾರ್ಯಕರ್ತರರಿಗೆ ಟಿಕೆಟ್ ಕೊಟ್ಟಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದ ಮೂವರಿಗೆ ಟಿಕೆಟ್ ಕೊಟ್ಟಿದೆ. ಕಾಂಗ್ರೆಸ್ ಪಕ್ಷ ಮತ್ತೆ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟಿದೆ. ಹೀಗಾಗಿ ಹೈಕಮಾಂಡ್ ಅಭ್ಯರ್ಥಿಯಾಗಿ ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ವಿಧಾನ ಪರಿಷತ್ ಪ್ರವೇಶಿಸಲಿದ್ದಾರೆ. ಇದೀಗ ಬಿಜೆಪಿ ಜೊತೆಗೆ ಜೆಡಿಎಸ್ ಕೂಡ ಕಾರ್ಯಕರ್ತರಿಗೆ ಮಣೆ ಹಾಕಿದೆ.
ಕಾರ್ಯಕರ್ತನಿಗೆ ಟಿಕೆಟ್
ಚಿಕ್ಕಬಳ್ಳಾಪುರ- ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆ ಮತ್ತಷ್ಟು ಶಕ್ತಿ ಸಿಗುವಂತೆ ಮಾಡಲು ಆ ಭಾಗದ ಸಾಮಾನ್ಯ ಕಾರ್ಯಕರ್ತನಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದ್ದೇವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ. ನಮ್ಮ ಅಭ್ಯರ್ಥಿ ಕೋಲಾರ ಮೂಲದ ಸಾಮಾನ್ಯ ಕಾರ್ಯಕರ್ತ. ಕೋಲಾರ ಭಾಗದಲ್ಲಿ ಪಕ್ಷದ ಹಿತದೃಷ್ಟಿಯಿಂದ ಅವರಿಗೆ ಟಿಕೆಟ್ ನೀಡಲಾಗಿದೆ ಎಂದಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ
ನಮ್ಮ ಪಕ್ಷದಿಂದ ಗೋವಿಂದರಾಜು ನಾಮಪತ್ರ ಸಲ್ಲಿಸಿದ್ದು, ಪಕ್ಷದ ಹಿತದೃಷ್ಟಿಯಿಂದ ಅವರಿಗೆ ನಾವು ಟಿಕೆಟ್ ನೀಡಿದ್ದೇವೆ ಎಂದು ಎಚ್ಡಿಕೆ ಹೇಳಿದ್ದಾರೆ.
ನಾನೊಬ್ಬ ಸಾಮಾನ್ಯ ಪ್ರಜೆ
ಇನ್ನು ಅಚ್ಚರಿ ಎಂಬಂತೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಗೋವಿಂದರಾಜು ಅವರು, ನಾನೊಬ್ಬ ಸಾಮಾನ್ಯ ಪ್ರಜೆ. ನನಗೆ ಯಾವ ರಾಜಕೀಯ ಹಿನ್ನೆಲೆಯೂ ಇಲ್ಲ, ಯಾರ ಪ್ರಭಾವವೂ ಇಲ್ಲ ಎಂದಿದ್ದಾರೆ.
ನಾನು ಇಲ್ಲಿವರೆಗೆ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದೆ. ನನ್ನ ಆದಾಯದ ಒಂದಷ್ಟು ತೆಗೆದು ಇಟ್ಟಿದ್ದೆ. ಕುಮಾರಣ್ಣನ ಜೊತೆ ನನ್ನ ಸಂಬಂಧ ಚೆನ್ನಾಗಿತ್ತು. ಅವರ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದೇನೆ. ಕೋಲಾರ ಭಾಗದಲ್ಲಿ ಪಕ್ಷ ಕಟ್ಟುವುದಕ್ಕೆ ನೆರವಾಗುತ್ತದೆ ಎಂದು ನನಗೆ ಟಿಕೇಟ್ ಕೊಟ್ಟಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಪೈಪೋಟಿ ನಡೆಸಿದ್ದ ಪ್ರಭಾವಿಗಳು
ಜೆಡಿಎಸ್ ಪಕ್ಷದಿಂದ ಮತ್ತೊಮ್ಮೆ ವಿಧಾನಸಭೆ ಪ್ರವೇಶಕ್ಕೆ ಮಾಜಿ ಪರಿಷತ್ ಸದಸ್ಯ ಟಿ.ಎ. ಶರವಣ ತೀವ್ರ ಪ್ರಯತ್ನ ನಡೆಸಿದ್ದರು. ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಶರವಣ ಅವರಿಗೆ ಜೆಡಿಎಸ್ ಟಿಕೆಟ್ ಪಕ್ಕಾ ಎಂಬಂತಾಗಿತ್ತು.
ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳು ಘೋಷಣೆ
ಜೊತೆಗೆ ಮಾಜಿ ರಾಜ್ಯಸಭಾ ಸದಸ್ಯ, ಜೆಡಿಎಸ್ ಆಪ್ತ ಕುಪೇಂದ್ರ ರೆಡ್ಡಿ ಅವರು ಕೂಡ ವಿಧಾನ ಪರಿಷತ್ ಪ್ರವೇಶಕ್ಕೆ ಪರಯತ್ನ ನಡೆಸಿದ್ದರು. ಕಳೆದ ಬಾರಿ ಜೆಡಿಎಸ್ನಿಂದ ರಾಜ್ಯಸಭೆ ಪ್ರವೇಶಿಸಿದ್ದ ಅವರು, ಈ ಬಾರಿ ದೇವೇಗೌಡರು ರಾಜ್ಯಸಭೆ ಪ್ರವೇಶಿಸುವಂತೆ ಅನುಕೂಲವಾಗಲು ಸಹಕರಿಸಿದ್ದರು. ಇದೀಗ ಎಲ್ಲರನ್ನು ಬಿಟ್ಟು ಸಾಮಾನ್ಯ ಕಾರ್ಯಕರ್ತರಿಗೆ ಜೆಡಿಎಸ್ ನಾಯಕರು ಅವಕಾಶ ಕೊಟ್ಟಿದ್ದಾರೆ.
ಯುದ್ಧದ ಸಮಯ ಅಲ್ಲ
ಇದೇ ಸಂದರ್ಭದಲ್ಲಿ ಭಾರತ ಚೀನಾ ಗಡಿಯಲ್ಲಿನ ಘರ್ಷಣೆ ಕುರಿತು ಮಾತನಾಡಿರುವ ಮಾಜಿ ಸಿಎಂ ಎಚ್ಡಿಕೆ, ಕಳೆದ ಹಲವು ದಿನಗಳಿಂದ ಗಡಿ ಭಾಗದಲ್ಲಿ ಭಾರತ- ಚೀನಾ ನಡುವೆ ಸಂಘರ್ಷ ಆಗುತ್ತಿದೆ. ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ.
ಭಾರತಕ್ಕೆ ಇದು ಸಂಕಷ್ಟದ ಸಮಯ. ಕೊರೊನಾ ದಿಂದ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಇದು ಯುದ್ಧ ಮಾಡುವ ಸಮಯ ಅಲ್ಲ. ಮಾತುಕತೆ ಮುಖಾಂತರ ಶಾಂತಿ ಕಾಪಾಡಬೇಕಿದೆ. ಇದು ನನ್ನ ಸಲಹೆ ಎಂದಿದ್ದಾರೆ.
ಚೀನಾ ವಸ್ತುಗಳ ಬಹಿಷ್ಕಾರ
ಚೀನಾ ವಸ್ತುಗಳ ಬಹಿಷ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪ್ರಚಾರ ಮಾಡಿಕೊಂಡು ಯಾಕೆ ಬಹಿಷ್ಕಾರ ಮಾಡಬೇಕು? ಮೊದಲು ನಮ್ಮ ಸಾಮರ್ಥ್ಯ ಮೊದಲು ಹೆಚ್ಚಿಸಿಕೊಳ್ಳಬೇಕು.
ಪ್ರತಿನಿತ್ಯ ಚೀನಾ ವಸ್ತುಗಳ ಮೇಲೆ ಜನರು ಅವಲಂಬಿತರಾಗಿದ್ದಾರೆ. ಹೀಗಾಗಿ ನಮ್ಮಲ್ಲಿ ವಸ್ತುಗಳ ಉತ್ಪಾದನೆ ಮಾಡಿಕೊಳ್ಳಲು ಮೊದಲು ಗಮನ ಕೊಡಬೇಕು. ಪ್ರಚಾರಕ್ಕಾಗಿ ಬರಿ ತೋರಿಕೆ ಮಾಡುವುದರಿಂದ ಗೆಲುವು ಸಾಧ್ಯ ಇಲ್ಲ. ಇಂತಹ ವಿಚಾರದಲ್ಲಿ ಶಾಂತವಾಗಿ ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಆ ಮೂಲಕ ಚೀನಾಕ್ಕೆ ಹೊಡೆತ ಕೊಡಬೇಕು ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯ ಪಟ್ಟಿದ್ದಾರೆ.