ಪರಿಷತ್ ಚುನಾವಣೆ: ಇವರೇನಾದರೂ ಅಭ್ಯರ್ಥಿಯಾದರೆ, ಜೆಡಿಎಸ್ ಇಮೇಜಿಗೆ ಭರ್ಜರಿ ಟಾನಿಕ್
ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಸದ್ಯದ ರಾಜಕೀಯವನ್ನು ಅವಲೋಕಿಸಿದಾಗ, ರಾಜ್ಯಸಭಾ ಚುನಾವಣೆಯ ಹಾಗೆ, ಅವಿರೋಧ ಆಯ್ಕೆಯಾಗುವುದು ಅನುಮಾನ. ಯಾಕೆಂದರೆ, ಡಜನ್ ಗಟ್ಟಲೆ ಆಕಾಂಕ್ಷಿಗಳು.
ಮೇಲ್ಮನೆಯ ಏಳು ಸ್ಥಾನಗಳಿಗೆ, ಇದೇ ಜೂನ್ 29ರಂದು ಚುನಾವಣೆ ನಡೆಯಲಿದ್ದು, ಜೂನ್ 18ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ವಾಪಸ್ ಪಡೆಯಲು ಜೂನ್ 22 ಕೊನೆಯ ದಿನವಾಗಿದೆ. ಹಾಗಾಗಿ, ಒಂದು ವೇಳೆ ಅವಿರೋಧ ಆಯ್ಕೆಯಾದರೆ, ಜೂನ್ 22ರಂದೇ ಫಲಿತಾಂಶ ಏನೆಂದು ಗೊತ್ತಾಗಲಿದೆ.
ವಿಶ್ವನಾಥ್ ಅವರಿಗೆ ಎಂಎಲ್ಸಿ ಟಿಕೆಟ್ ಸಿಗುತ್ತದೆ; ನಾರಾಯಣಗೌಡ
ಸದ್ಯದ ಬಲಾಬಲದ ಪ್ರಕಾರ ಬಿಜೆಪಿ ನಾಲ್ಕು, ಕಾಂಗ್ರೆಸ್ ಎರಡು ಮತ್ತು ಜೆಡಿಎಸ್ ಒಂದು ಕ್ಷೇತ್ರದಲ್ಲಿ ನಿರಾಯಾಸವಾಗಿ ಗೆಲ್ಲಬಹುದಾಗಿದೆ. ಸ್ಥಾನ ಲಭ್ಯವಿರುವುದು ಏಳಾದರೂ, ಆಕಾಂಕ್ಷಿಗಳು ನೂರೆಂಟು.
ಇಂದು ವೈಎಸ್ವಿ ದತ್ತ ಎಸ್ಎಸ್ಎಲ್ಸಿ ಪಾಠದ ಕೊನೆಯ ಕ್ಲಾಸ್
ಜೆಡಿಎಸ್ಸಿನ ಒಂದು ಸ್ಥಾನಕ್ಕೆ ಪೈಪೋಟಿ ಜೋರಾಗಿಯೇ ಇದೆ. ಅದರಲ್ಲಿ ಮೇಷ್ಟ್ರು ಎಂದೇ ಹೆಸರಾಗಿರುವ ವೈ.ಎಸ್.ವಿ. ದತ್ತ ಅವರು ಹೆಸರು ಕೂಡಾ ಒಂದು. ಅವರಿಗೆ, ಗೌಡ್ರ ಆಶೀರ್ವಾದ ಸಿಗುವ ಸಾಧ್ಯತೆ ಇಲ್ಲದಿಲ್ಲ. ಅದಕ್ಕೆ ಕಾರಣ ಹೀಗಿದೆ:
ಕಡೂರು ಕ್ಷೇತ್ರದಲ್ಲಿ ದತ್ತ ಪರಾಭವ
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಡೂರು ಕ್ಷೇತ್ರದಲ್ಲಿ ದತ್ತ ಪರಾಭವಗೊಂಡಾಗ, ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರೂ ಬೇಸರ ವ್ಯಕ್ತ ಪಡಿಸಿದ್ದರು. ಅದಕ್ಕೆ ಕಾರಣ, ದತ್ತ ಅವರನ್ನು ಪಕ್ಷಾತೀತವಾಗಿ ಎಲ್ಲರೂ ಗೌರವಿಸುವುದು ಮತ್ತು ಅವರ ಸರಳತೆ. ಜೊತೆಗೆ, ಯಾವುದೇ ವಿಚಾರವನ್ನು ಮಂಡಿಸಲು ಹೊರಟಾಗ ಅದರ ಮೇಲೆ ಅವರಿಗಿರುವ ಹಿಡಿತ.
ಒಂದು ಕಾಲದಲ್ಲಿ ದೇವೇಗೌಡ್ರ ಮಾನಸ ಪುತ್ರ
ಒಂದು ಕಾಲದಲ್ಲಿ ದೇವೇಗೌಡ್ರ ಮಾನಸ ಪುತ್ರ ಎಂದೇ ಕರೆಯಲ್ಪಡುತ್ತಿದ್ದ ದತ್ತ, ಹೇಗೆ ರಾಜಕೀಯದಲ್ಲಿ ಉತ್ತಮ ಅನುಭವವನ್ನು ಹೊಂದಿದ್ದಾರೋ, ಸಾರ್ವಜನಿಕ ಜೀವನದಲ್ಲೂ ಅಷ್ಟೇ ಜನಪ್ರಿಯ ವ್ಯಕ್ತಿ. ಇಂತವರು ಅಸೆಂಬ್ಲಿಯಲ್ಲಿ ಇರಬೇಕೆಂದು ಬಯಸುವವರಲ್ಲಿ ವಿರೋಧಿಗಳೂ ಇದ್ದಾರೆ. ಅಸೆಂಬ್ಲಿ ಚುನಾವಣೆಯಲ್ಲಿ ಹಿನ್ನಡೆಯಾದ ನಂತರ, ರಾಜಕಾರಣದಿಂದ ಸ್ವಲ್ಪ ಹಿಂದಕ್ಕೆ ಸರಿದಿದ್ದ, ದತ್ತ, ಅವರ ಹೆಸರು ಈಗ ಮತ್ತೆ ಮುನ್ನಲೆಗೆ ಬಂದಿದೆ.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಫೇಸ್ ಬುಕ್ ಮೂಲಕ ಪಾಠ
ಕೊರೊನಾ ಹಾವಳಿಯಿಂದ ಊರೆಲ್ಲಾ ಲಾಕ್ ಡೌನ್ ಆಗಿದ್ದಾಗ ಶಿಕ್ಷಣದ ವಿಚಾರಕ್ಕೆ ಬಂದಾಗ, ದತ್ತ ತೆಗೆದುಕೊಂಡ ನಿರ್ಧಾರ ವ್ಯಾಪಕ ಪ್ರಶಂಸೆಗೊಳಗಾಗಿತ್ತು. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಫೇಸ್ ಬುಕ್ ಮೂಲಕ ಪಾಠ ಮಾಡಿದ್ದರು. ಇದು ಯಾವ ಮಟ್ಟಿಗೆ ಯಶಸ್ಸನ್ನು ಪಡೆದಿತ್ತು ಅಂದರೆ, ಲಕ್ಷಲಕ್ಷ ವಿದ್ಯಾರ್ಥಿಗಳು ದತ್ತ ಮೇಷ್ಟ್ರ ಪಾಠವನ್ನು ಆಲಿಸಿದ್ದರು. ಇದು ರಾಷ್ಟ್ರೀಯ ಮಟ್ಟದಲ್ಲೂ ಬಹಳ ಸುದ್ದಿಯನ್ನು ಮಾಡಿತ್ತು.
ದೇವೇಗೌಡ್ರ ಆಶೀರ್ವಾದ ಇವರಿಗೆ ದಕ್ಕುತ್ತಾ?
ಜೆಡಿಎಸ್ಸಿಗೆ ಸದ್ಯ ಪಕ್ಷದ ಸಿದ್ದಾಂತವನ್ನು ಬಲವಾಗಿ ಸಾರ್ವಜನಿಕರ ಮುಂದಿಡುವ ಉತ್ತಮ ವಾಗ್ಮಿ ಬೇಕಾಗಿದೆ. ಸಾರ್ವಜನಿಕವಾಗಿ ದತ್ತ ಅವರಿಗಿರುವ ಹೆಸರು, ರಾಜಕೀಯ ಅನುಭವ, ಅಸೆಂಬ್ಲಿಯಲ್ಲಿ ಪಕ್ಷವನ್ನು ಮುನ್ನಡೆಸುವ ಇನ್ನೊಬ್ಬ ನಾಯಕರ ಅವಶ್ಯಕತೆಯಿದೆ. ಎಲ್ಲದಕ್ಕಿಂತ ಹೆಚ್ಚಾಗಿ, ಗೌಡ್ರಿಗೆ ಅತ್ಯಂತ ಆಪ್ತರಾಗಿರುವ ವೈ.ಎಸ್.ವಿ ದತ್ತ ಅವರನ್ನು ತಮ್ಮ ಅಭ್ಯರ್ಥಿ ಎಂದು ಘೋಷಿಸಿದರೆ, ಪಕ್ಷಕ್ಕೇ ಉತ್ತಮ ಹೆಸರು ಎನ್ನುವುದನ್ನು ಅರಿಯಲು ಗೌಡ್ರಿಗೆ ರಾಜಕೀಯ ಹೇಳಿಕೊಡಬೇಕೇ?