ವಿಧಾನ ಪರಿಷತ್ ಚುನಾವಣೆ: ಅಚ್ಚರಿ ತಂದ ಯಡಿಯೂರಪ್ಪ ಹೇಳಿಕೆ
ವಿಧಾನ ಪರಿಷತ್ತಿನ 25 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ನಿರೀಕ್ಷಿತ ಮಾಡಿದ್ದಕ್ಕಿಂತ ಕಮ್ಮಿ ಸೀಟು ಬಂದಿದ್ದರೆ, ಕಾಂಗ್ರೆಸ್ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸೀಟನ್ನು ಗೆದ್ದು ಶಕ್ತಿ ಪ್ರದರ್ಶನ ಮಾಡಿದೆ. ಇನ್ನು, ಜೆಡಿಎಸ್ ಹೀನಾಯ ಪ್ರದರ್ಶನ ಇಲ್ಲೂ ಮುಂದುವರಿದಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಹನ್ನೊಂದು , ಜೆಡಿಎಸ್ ಎರಡು ಮತ್ತು ಪಕ್ಷೇತರರು ಒಂದೊಂದು ಸ್ಥಾನದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಗೆದ್ದ ಪಕ್ಷೇತರ ಅಭ್ಯರ್ಥಿಯಾಗಿರುವ ಲಖನ್ ಜಾರಕಿಹೊಳಿಯವರು ಯಾವ ಪಕ್ಷಕ್ಕೆ ನಿಯತ್ತು ತೋರಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ವಿಧಾನ ಪರಿಷತ್ ಚುನಾವಣೆ ಬಿಜೆಪಿಗೆ ಹೇಗೆ ಮುಖ್ಯವೋ, ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಬಿಜೆಪಿ ಕಣಕ್ಕಿಳಿಸಿದ ಅಭ್ಯರ್ಥಿಗಳಲ್ಲಿ ಯಡಿಯೂರಪ್ಪನವರ ಬೆಂಬಲಿಗರೂ ಇದ್ದರು. ಚುನಾವಣೆಗೆ ಉತ್ತಮ ಪ್ರಚಾರವನ್ನೂ ಬಿಎಸ್ವೈ ಮಾಡಿದ್ದರು.
ವಿಧಾನ ಪರಿಷತ್ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪನವರು ಫಲಿತಾಂಶ ಮತ್ತು ಜೆಡಿಎಸ್ ಜೊತೆಗಿನ ಮುಂದಿನ ದಿನಗಳಲ್ಲಿ ಹೊಂದಾಣಿಕೆಯ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಬಿಎಸ್ವೈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣ ಬರೆಯುವ ಸಾಧ್ಯತೆಯಿಲ್ಲದಿಲ್ಲ.
ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಹನ್ನೆರಡು
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ, "ವಿಧಾನ ಪರಿಷತ್ತಿನ 25ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾವು 20 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆವು. ಹದಿನೈದು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎನ್ನುವ ವಿಶ್ವಾಸವನ್ನು ಇಟ್ಟುಕೊಂಡಿದ್ದೆವು. ಆದರೆ, ತುಮಕೂರು ಮತ್ತು ಬೆಳಗಾವಿಯಲ್ಲಿ ನಮಗೆ ಅನಿರೀಕ್ಷಿತವಾಗಿ ಹಿನ್ನಡೆಯಾಗಿದೆ. ಹೀಗಾಗಿ ಹನ್ನೆರಡು ಕ್ಷೇತ್ರಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ"ಎಂದು ಬಿಎಸ್ವೈ ಹೇಳಿದರು.
ನಮ್ಮ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ
"ಒಟ್ಟಾರೆಯಾಗಿ ಮೇಲ್ಮನೆಯಲ್ಲಿ ಸ್ಪಷ್ಟ ಬಹುಮತಕ್ಕೆ ಹನ್ನೆರಡು ಸ್ಥಾನದ ಕೊರತೆಯಿತ್ತು, ಅದು ಈಗ ನೀಗಿದೆ. ಹಾಗಾಗಿ, ಇನ್ನು ಮುಂದೆ ಯಾರ ಮೇಲೂ ಅವಲಂಬಿತರಾಗದೇ, ಜನಪರ ಕೆಲಸ ಮಾಡಲು ಸಾಧ್ಯ ಮಾಡಿದ ಮತದಾರರಿಗೆ, ನಮ್ಮ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಆಶೀರ್ವಾದದಿಂದ ವಿಧಾನ ಪರಿಷತ್ತಿನಲ್ಲಿ ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಾ"ಎಂದು ಯಡಿಯೂರಪ್ಪನವರು ಮತದಾರರಿಗೆ ಧನ್ಯವಾದ ಹೇಳಿದರು.
ಜೆಡಿಎಸ್ ಪಕ್ಷವನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ
"ಜೆಡಿಎಸ್ ಅನೇಕ ಸಂದರ್ಭದಲ್ಲಿ ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಕಾರ ಕೊಟ್ಟುಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಕೂಡಾ ಅವರೆಲ್ಲರ ಪ್ರೀತಿ, ವಿಶ್ವಾಸವನ್ನು ಪಡೆದುಕೊಂಡು ಬರುತ್ತೇವೆ. ನಮಗೆ ಬಹುಮತ ಬಂದಿದೆ ಎಂದು ಜೆಡಿಎಸ್ ಪಕ್ಷವನ್ನು ನಿರ್ಲ್ಯಕ್ಷ ಮಾಡುವ ಪ್ರಶ್ನೆಯೇ ಇಲ್ಲ"ಎಂದು ಯಡಿಯೂರಪ್ಪನವರು ಹೇಳುವ ಮೂಲಕ, ಮುಂದಿನ ದಿನಗಳಲ್ಲಿ ಜೆಡಿಎಸ್ ಜೊತೆ ಯಾವ ರೀತಿ ಸಂಬಂಧವನ್ನು ಇಟ್ಟುಕೊಳ್ಳುವ ಚಿಂತನೆ ನಡೆಯುತ್ತಿದೆ ಎನ್ನುವುದರ ಸುಳಿವನ್ನು ನೀಡಿದ್ದಾರೆ.
ಬೊಮ್ಮಾಯಿ ಕೂಡಾ ಗೆಲ್ಲಲು ಶತಪ್ರಯತ್ನ ಮಾಡಿದ್ದರು
ಹಾನಗಲ್ ಮತ್ತು ಸಿಂಧಗಿ ಉಪ ಚುನಾವಣೆಯ ಪೈಕಿ ಹಾನಗಲ್ ನಲ್ಲಿ ಬಿಜೆಪಿ ಸೋಲುಂಡಿತ್ತು. ಸಿಎಂ ತವರು ಜಿಲ್ಲೆ ಹಾವೇರಿ ವ್ಯಾಪ್ತಿಗೆ ಈ ಕ್ಷೇತ್ರ ಬರುತ್ತಿರುವುದರಿಂದ ಬೊಮ್ಮಾಯಿ ಕೂಡಾ ಗೆಲ್ಲಲು ಶತಪ್ರಯತ್ನ ಮಾಡಿದ್ದರು. ಯಡಿಯೂರಪ್ಪನವರು ಹಾನಗಲ್ ಕ್ಷೇತ್ರಕ್ಕೆ ಸಂಸದ ಶಿವಕುಮಾರ್ ಉದಾಸಿಯವರ ಪತ್ನಿಗೆ ಟಿಕೆಟ್ ನೀಡಲು ಶಿಫಾರಸು ಮಾಡಿದ್ದರು.
ಆದರೆ, ಕುಟುಂಬ ರಾಜಕಾರಣಕ್ಕೆ ನೋ ಎಂದಿದ್ದ ಬಿಜೆಪಿ ವರಿಷ್ಠರು ಬೇರೊಬ್ಬರಿಗೆ ಟಿಕೆಟ್ ನೀಡಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಬಿಎಸ್ವೈ ಒಲ್ಲದ ಮನಸ್ಸಿನಿಂದಲೇ ಪ್ರಚಾರದಲ್ಲಿ ಭಾಗವಹಿಸಿದ್ದರು. ಹಾನಗಲ್ ಸೋಲನ್ನು ಸೀರಿಯಸ್ಸಾಗಿ ತೆಗೆದುಕೊಂಡ ವರಿಷ್ಠರು, ಪರಿಷತ್ ಚುನಾವಣೆಯಲ್ಲಿ ಬಿಎಸ್ವೈ ಆಪ್ತರಿಗೆ ಹೆಚ್ಚಿನ ಟಿಕೆಟ್ ನೀಡಿದ್ದರು. ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಸ್ಪರ್ಧಿಸಿದ್ದರಿಂದ ಬಿಜೆಪಿಗೆ ಹಿನ್ನಡೆಯಾಗಬಹುದು ಎನ್ನುವುದನ್ನು ಮೊದಲೇ ನಿರೀಕ್ಷಿಸಲಾಗಿತ್ತು.