Breaking: ವಿಧಾನ ಪರಿಷತ್ತಿಗೆ ಚುನಾವಣೆ: ಕಾಂಗ್ರೆಸ್ನಿಂದ ಇಬ್ಬರು ಹೆಸರು ಅಂತಿಮ
ಬೆಂಗಳೂರು ಮೇ 23: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಬರ ಹೆಸರನ್ನು ಅಂತಿಮಗೊಳಿಸಿದೆ.
ನಾಗರಾಜ್ ಯಾದವ್ ಮತ್ತು ಕೆ. ಅಬ್ದುಲ್ ಜಬ್ಬಾರ್ ಅವರ ಹೆಸರನ್ನು ಅಂತಿಮಗೊಳಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ಉಸ್ತುವಾರಿ ಮುಕುಲ್ ವಾಸ್ನಿಕ್ ಆದೇಶ ಹೊರಡಿಸಿದ್ದಾರೆ.
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ 7 ಮಂದಿ ಸದಸ್ಯರು ಅಂದರೆ, ಬಿಜೆಪಿಯ ಲಕ್ಷ್ಮಣ ಸವದಿ, ಲೆಹರ್ ಸಿಂಗ್ ಸಿರೋಯ; ಕಾಂಗ್ರೆಸ್ನ ರಾಮಪ್ಪ ತಿಮ್ಮಾಪುರ, ಅಲ್ಲ ವೀರಭದ್ರಪ್ಪ, ವೀಣಾ ಅಚ್ಚಯ್ಯ ಹಾಗೂ ಜೆಡಿಎಸ್ನಿಂದ ಎಚ್.ಎಂ. ರಮೇಶ್ಗೌಡ ಹಾಗೂ ಕೆ.ವಿ. ನಾರಾಯಣಸ್ವಾಮಿ ಅವರ ವಿಧಾನ ಪರಿಷತ್ ಸದಸ್ಯ ಸ್ಥಾನದ ಅವಧಿ ಜೂ 14ಕ್ಕೆ ಮುಕ್ತಾಯ ಆಗಲಿದೆ. ಈ ಏಳು ಸ್ಥಾನಗಳಿಗೆ ಜೂ. 3ರಂದು ಮತದಾನ ಪ್ರಕ್ರಿಯೆ ಘೋಷಿಸಲಾಗಿದೆ.
ನಾಗರಾಜ್ ಯಾದವ್ ಕೆಪಿಸಿಸಿ ವಕ್ತಾರ ಆಗಿದ್ದಾರೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತರೊಬ್ಬರಿಗೆ ಪರಿಷತ್ತಿಗೆ ಆಯ್ಕೆ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇನ್ನು ಅಬ್ದುಲ್ ಜಬ್ಬಾರ್ ಅವರು 2014ರಿಂದ 2020ರವರೆಗೆ ಕಾಂಗ್ರೆಸ್ನಿಂದ ವಿಧಾನಪರಿಷತ್ತಿನಲ್ಲಿ ನಾಮ ನಿರ್ದೇಶಿತ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಜಬ್ಬಾರ್ ಅವರಿಗೆ ಎರಡನೇ ಬಾರಿ ಅವಕಾಶ ನೀಡಲಾಗಿದೆ.