ಪರಿಷತ್ ಚುನಾವಣೆ: ಬಿಜೆಪಿಯ 2 ಮಹತ್ವದ ನಿರ್ಧಾರಕ್ಕೆ ಪಕ್ಷದಲ್ಲೇ ಅಪಸ್ವರ
ಎರಡು ಕ್ಷೇತ್ರದ ಉಪ ಚುನಾವಣೆ ಮುಗಿದ ನಂತರ ಮತ್ತೊಂದು ಮಿನಿ ಸಮರವೆಂದೇ ಪರಿಗಣಿಸಲಾಗುತ್ತಿರುವ ವಿಧಾನ ಪರಿಷತ್ತಿನ 25 ಸ್ಥಾನಕ್ಕೆ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಇದೇ ಬರುವ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಹಾಲೀ ಶಾಸಕರ ಸೇವಾ ಅವಧಿ ಮುಗಿಯುತ್ತಿರುವುದರಿಂದ ತೆರವಾಗುತ್ತಿರುವ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ದಿನಾಂಕ ಪ್ರಕಟಿಸುತ್ತಿದ್ದಂತೆಯೇ, ಮೂರೂ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚಾಗುತ್ತಿದೆ.
Breaking; ವಿಧಾನ ಪರಿಷತ್ 25 ಸ್ಥಾನಕ್ಕೆ ಚುನಾವಣೆ ಘೋಷಣೆ
ಕಾಂಗ್ರೆಸ್ಸಿನ ಕೆಲವು ಹಾಲೀ ವಿಧಾನ ಪರಿಷತ್ ಸದಸ್ಯರು ಮತ್ತೆ ಮೇಲ್ಮನೆಗೆ ಹೋಗಲು ಉತ್ಸುಕರಾಗದೇ ಇರುವುದರಿಂದ, ಹೊಸ ಆಕಾಂಕ್ಷಿಗಳ ಹೆಸರು ಕೇಳಿ ಬರುತ್ತಿದೆ. ಕಾಂಗ್ರೆಸ್ಸಿನ ಹದಿಮೂರು, ಬಿಜೆಪಿಯ ಆರು, ಜೆಡಿಎಸ್ಸಿನ ನಾಲ್ಕು ಮತ್ತು ಇಬ್ಬರು ಪಕ್ಷೇತರ ಶಾಸಕರ ಸೇವಾ ಅವಧಿ ಜನವರಿ 5, 2022ರಂದು ಮುಕ್ತಾಯಗೊಳ್ಳಲಿದೆ.
ಹಾಲೀ ಹೊಂದಿರುವ ಆರು ಕ್ಷೇತ್ರಕ್ಕಿಂತ ಹೆಚ್ಚು ಸ್ಥಾನವನ್ನು ಗೆಲ್ಲುವ ಅವಕಾಶವಿರುವ ಬಿಜೆಪಿ, ಎರಡು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದಕ್ಕೆ ಪಕ್ಷದೊಳಗೆಯೇ ಅಪಸ್ವರ ಜೋರಾಗಿ ಕೇಳಿ ಬರುತ್ತಿದೆ.
ಪರಿಷತ್ ಚುನಾವಣೆ; ದೇವೇಗೌಡರ ಮೊಮ್ಮಗ ಕಣಕ್ಕೆ?
ದ್ವಿಕ್ಷೇತ್ರಗಳಲ್ಲಿ ಎರಡೂ ಕಡೆ ಸ್ಪರ್ಧೆ ಮಾಡದೇ ಇರುವ ಬಿಜೆಪಿ ನಿರ್ಧಾರ
ಬೀದರ್ 1, ಕಲಬುರಗಿ 1, ವಿಜಯಪುರ 2, ಬೆಳಗಾವಿ 2, ಉತ್ತರ ಕನ್ನಡ 1, ಧಾರವಾಡ 2, ರಾಯಚೂರು 1, ಬಳ್ಳಾರಿ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಚಿಕ್ಕಮಗಳೂರು 1, ಹಾಸನ 1, ತುಮಕೂರು 1, ಮಂಡ್ಯ 1, ಬೆಂಗಳೂರು 1, ಬೆಂಗಳೂರು ಗ್ರಾಮಾಂತರ 1, ಕೋಲಾರ 1, ಕೊಡಗು 1, ಮೈಸೂರು 2 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ, ವಿಜಯಪುರ, ಬೆಳಗಾವಿ, ಧಾರವಾಡ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಯಲ್ಲಿ ದ್ವಿಕ್ಷೇತ್ರ ಸ್ಪರ್ಧೆ ಇರಲಿದೆ. ದ್ವಿಕ್ಷೇತ್ರಗಳಲ್ಲಿ ಎರಡೂ ಕಡೆ ಸ್ಪರ್ಧೆ ಮಾಡದೇ ಇರುವ ನಿರ್ಧಾರಕ್ಕೆ ಬಿಜೆಪಿ ಬಂದಿದೆ.
ಮತ ವಿಭಜನೆಯಾಗಿ ಎರಡೂ ಕ್ಷೇತ್ರ ಸೋಲುವ ಸಾಧ್ಯತೆ
ದ್ವಿಕ್ಷೇತ್ರ ಇರುವ ಕಡೆ ಇಬ್ಬರು ಅಭ್ಯರ್ಥಿಗಳನ್ನು ಹಾಕಿದರೆ, ಮತ ವಿಭಜನೆಯಾಗಿ ಎರಡೂ ಕ್ಷೇತ್ರ ಸೋಲುವ ಸಾಧ್ಯತೆಯಿದೆ. ಹಾಗಾಗಿ, ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವ ನಿರ್ಧಾರಕ್ಕೆ ಬಿಜೆಪಿಯ ರಾಜ್ಯ ನಾಯಕರು ಬಂದಿದ್ದಾರೆ ಎನ್ನುವ ಮಾಹಿತಿಯಿದೆ. ಆದರೆ, ಖಚಿತವಾಗಿ ಗೆಲ್ಲಲೇ ಬಹುದು ಎಂದು ಸಂಬಂಧ ಪಟ್ಟ ಜಿಲ್ಲೆಯ ಬಿಜೆಪಿ ಘಟಕ ಶಿಫಾರಸು ಮಾಡಿದರೆ, ಈ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಸಾಧ್ಯತೆಯೂ ಇದೆ.
ಬಿಜೆಪಿಯ ಕೋರ್ ಕಮಿಟಿ ತಮ್ಮ ನಿರ್ಧಾರವನ್ನು ಬದಲಾಯಿಸಬೇಕು
ಬಿಜೆಪಿಯ ಈ ನಿರ್ಧಾರ ಪಕ್ಷದ ಮುಖಂಡರಿಗೆ ಸಹ್ಯವಾಗಿಲ್ಲ. "ರಾಜ್ಯದಲ್ಲಿ ನಮ್ಮದೇ ಸರಕಾರ ಇರುವುದರಿಂದ ಗೆಲ್ಲುವುದು ಕಷ್ಟವೇನೂ ಅಲ್ಲ. ಆತ್ಮವಿಶ್ವಾಸದಿಂದ ಮತ್ತು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಸಾಕು. ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ ನಾವೇ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಬಿಜೆಪಿಯ ಕೋರ್ ಕಮಿಟಿ ತಮ್ಮ ನಿರ್ಧಾರವನ್ನು ಬದಲಾಯಿಸಬೇಕು"ಎಂದು ಜಿಲ್ಲಾ ಘಟಕದ ಅಧ್ಯಕ್ಷರೊಬ್ಬರು ಹೇಳಿದ್ದಾರೆ.
Recommended Video
ಒಂದೇ ಕುಟುಂಬದ ಇನ್ನೊಂದು ಸದಸ್ಯರಿಗೆ ಟಿಕೆಟ್ ನೀಡದಿರಲು ನಿರ್ಧಾರ
ಬಿಜೆಪಿ ತೆಗೆದುಕೊಂಡ ಇನ್ನೊಂದು ನಿರ್ಧಾರವೇನಂದರೆ, ಒಂದೇ ಕುಟುಂಬದ ಇನ್ನೊಂದು ಸದಸ್ಯರಿಗೆ ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎನ್ನುವ ಮಾತಿದೆ. ಸಂಸದ, ಶಾಸಕ, ಸಚಿವ ಸ್ಥಾನವನ್ನು ಹೊಂದಿರುವವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಗುವುದಿಲ್ಲ. ಆ ಮೂಲಕ, ವಂಶಪಾರಂಪರ್ಯ ರಾಜಕಾರಣಕ್ಕೆ ಸಂಪೂರ್ಣ ತಿಲಾಂಜಲಿ ಹಾಡುವ ನಿರ್ಧಾರಕ್ಕೆ ಬಿಜೆಪಿಯ ವರಿಷ್ಠರು ಬಂದಿದ್ದಾರೆ ಎನ್ನುವ ಮಾಹಿತಿಯಿದೆ.