ಅನಿರ್ಧಿಷ್ಟಾವಧಿಗೆ ವಿಧಾನಸಭೆ ಕಲಾಪ ಮುಂದೂಡಿಕೆ: ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ!
ಬೆಂಗಳೂರು, ಸೆ. 24: ಗದ್ದಲದ ಮಧ್ಯೆ ವಿಧಾನಸಭೆ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಶಾಂತವಾಗಿ ಗಂಭೀರ ಚರ್ಚೆ ನಡೆಯುತ್ತಿದ್ದ ಸದನದಲ್ಲಿ, ಒಮ್ಮೆಲೇ ಗದ್ದಲ ಉಂಟಾಗಿತ್ತು. ವಿಧಾನ ಮಂಡಲ ಅಧಿವೇಶನ ವಿಸ್ತರಣೆ ಮಾಡಿ ಎಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಸತ್ಯಾಗ್ರಹ ಆರಂಭಿಸಿದ್ದರು. ಜೊತೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲು ಕಾಲಾವಕಾಶ ಬೇಕು. ಅದಕ್ಕಾಗಿ ಸದನವನ್ನು ಇನ್ನೊಂದು ವಾರ ನಡೆಸಿ ಎಂದು ಆಗ್ರಹಿಸಿದರು. ಆದರೆ ಸರ್ಕಾರ ಒಪ್ಪದಿದ್ದಾಗ ಸದನದಲ್ಲಿ ಗದ್ದಲ ಹೆಚ್ಚಾಯಿತು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿರೋಧಿಸಿ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಧರಣಿ ಶುರು ಮಾಡಿದ್ದರು. ಚರ್ಚೆಯಿಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಬಾರದು ಎಂದು ಪಟ್ಟು ಹಿಡಿದಿದ್ದರು. ಇದೇ ಸಂದರ್ಭದಲ್ಲಿ ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿಗೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ತೆರಳಿ ಬಿತ್ತಿಪತ್ರ ಪ್ರದರ್ಶನ ಮಾಡಿದರು. ಸದನ ಹಿಡಿತಕ್ಕೆ ಸಿಗದಿದ್ದಾಗ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ಸ್ಪೀಕರ್ ಆದೇಶ ಮಾಡಿದರು.
ವಿಧಾನಸಭೆ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾದ ಬಳಿಕ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭವಾಯಿತು. ಅದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು 'ಅತ್ಯುತ್ತಮ ಶಾಸಕ' ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಪ್ರತಿಪಕ್ಷದ ಅನುಪಸ್ಥಿತಿಯಲ್ಲಿ ಜಂಟಿ ಅಧಿವೇಶನ ನಡೆಯಿತು. ವಿಧಾನಸಭೆಯ ಶುಕ್ರವಾರದ ಕಲಾಪದ ಸಂಪೂರ್ಣ ಚಿತ್ರಣ ಮುಂದಿದೆ.
ಶಿಕ್ಷಣ ನೀತಿ ವಿರೋಧಿಸಿ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು!
ಜಂಟಿ ಅಧಿವೇಶನಕ್ಕೂ ಮೊದಲು, ವಿಧಾನಸಭೆಯಲ್ಲಿ ಇನ್ನೊಂದು ವಾರ ಅಧಿವೇಶನ ಮುಂದುವರೆಸುವಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಸತ್ಯಾಗ್ರಹ ಮಾಡಿದರು. ಇದೇ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನವನ್ನು ವಿಸ್ತರಣೆ ಮಾಡುವಂತೆ ಆಗ್ರಹಿಸಿದರು. "ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ. ನಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗದ ಕಾರಣ ನಮ್ಮ ಶಾಸಕರು ಧರಣಿ ಮಾಡುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆಯಾಗಬೇಕು. ಅದು ನ್ಯಾಷನಲ್ ಎಜುಕೇಷನ್ ಪಾಲಿಸಿ ಅಲ್ಲ, ನಾಗಪುರ ಎಜುಕೇಷನ್ ಪಾಲಿಸಿ" ಎಂದು ಸಿದ್ದರಾಮಯ್ಯ ಆರೋಪಿಸಿದರು. ಸಿದ್ದರಾಮಯ್ಯ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು
ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು!
"ಹೊಸ ಶಿಕ್ಷಣ ನೀತಿಯನ್ನು ನೀವು ಏನಾದರೂ ಕರೆದುಕೊಳ್ಳಿ, ನಮಗೆ ಬೇಜಾರಿಲ್ಲ. ಆದರೆ ನಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗಬೇಕಿದೆ. ಹೀಗಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತೇವೆ" ಎಂದುಸಿದ್ದರಾಮಯ್ಯರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟರು.
ಸಿಎಂ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ, ಸದನದ ಬಾವಿಗಳಿದು ಕಾಂಗ್ರೆಸ್ ಸದಸ್ಯರು ಹೋರಾಟ ಆರಂಭಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧವೂ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಘೋಷಣೆ ಹಾಕಿದರು. ಅದು ಬಿಜೆಪಿ ಸದಸ್ಯರು ಕೆರಳುವಂತೆ ಮಾಡಿತು.
ಒಳ್ಳೆಯದೇ ಆಯ್ತಲ್ಲ ಸಿದ್ದರಾಮಯ್ಯನವರೇ ಎಂದ ಸ್ಪೀಕರ್!
ನೂತನ ಶಿಕ್ಷಣ ನೀತಿಯನ್ನು ಆರ್ಎಸ್ಎಸ್ ಶಿಕ್ಷಣ ನೀತಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸುತ್ತಿದ್ದಂತೆಯೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, "ಹಾಗಾದರೆ ಒಳ್ಳೆಯದೇ ಆಯ್ತಲ್ಲ ಸಿದ್ದರಾಮಯ್ಯನವರೇ, ಆರ್ಎಸ್ಎಸ್ ಯಾವಾಗಲೂ ಒಳ್ಳೆಯದನ್ನೇ ಹೇಳಿ ಕೊಡುತ್ತದೆ" ಎಂದರು.
ಆಗ ಮುಖ್ಯಮಂತ್ರಿ ಬೊಮ್ಮಾಯಿ ಮಾತು ಮುಂದುವರೆಸಿ, "ರಾಷ್ಟ್ರದ ಭವಿಷ್ಯ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ನೀವು ಬೇಕಾದರೆ ಆರ್ಎಸ್ಎಸ್ ನೀತಿ ಎಂದೇ ಕರೆಯಿರಿ, ನಾವು ಅದಕ್ಕೆ ಚಿಂತೆ ಮಾಡಲ್ಲ" ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟರು.
ಬೊಮ್ಮಾಯಿ ಎದುರು ಬಿತ್ತಿಪತ್ರ ಪ್ರದರ್ಶಿಸಿದ ಡಿಕೆಶಿ!
ಹೀಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯೆ ವಾಗ್ಯುದ್ಧ ನಡೆಯುತ್ತಿರುವಾಗಲೇ ಕಾಂಗ್ರೆಸ್ ಸದಸ್ಯರು ಆರ್ಎಸ್ಎಸ್ ವಿರುದ್ಧ ದಿಕ್ಕಾರ ಹಾಕಿದರು. ಆಗ ಬಿಜೆಪಿ ಸದಸ್ಯರು ಆರ್ಎಸ್ಎಸ್ ಜಿಂದಾಬಾದ್ ಎಂದು ಘೋಷಣೆ ಹಾಕಿದರು.
ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರು ಘೊಷಣೆ ಹಾಕುತ್ತಿರುವಾಗಲೇ ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ತೆರಳಿದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ಬಿತ್ತಿಪತ್ರ ಪ್ರದರ್ಶನ ಮಾಡಿದರು.
Recommended Video
ಅನಿರ್ಧಿಷ್ಟಾವಧಿಗೆ ವಿಧಾನಸಭೆ ಕಲಾಪ ಮುಂದೂಡಿದ ಕಾಗೇರಿ!
ಇದೇ ವೇಳೆ ಗದ್ದಲದಲ್ಲಿಯೇ ಆರೋಗ್ಯ ಸಚಿವ ಡಾ. ಸುಧಾಕರ್, "ಕೊವೀಡ್ ನಿರ್ವಹಣೆ ಕುರಿತು ಸದನದಲ್ಲಿ ಉತ್ತರ ಮಂಡಿಸುತ್ತಿದ್ದೇನೆ. ಕಾಂಗ್ರೆಸ್ ಸದಸ್ಯರು ಸರ್ಕಾರದ ಉತ್ತರವನ್ನು ಕೇಳುತ್ತಿಲ್ಲ. ಹೀಗಾಗಿ ನಾನು ನನ್ನ ಉತ್ತರವನ್ನು ಮಂಡಿಸುತ್ತಿದ್ದೇನೆ." ಎಂದು ಲಿಖಿತ ಉತ್ತರವನ್ನು ಮಂಡಿಸಿದರು.
ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಗದ್ದಲ ಹೆಚ್ಚಾಗಿ, ಸದನ ಸಭಾಧ್ಯಕ್ಷರ ಹಿಡಿತಕ್ಕೆ ಸಿಗಲಿಲ್ಲ. ಆ ಸಂದರ್ಭದಲ್ಲಿ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಆದೇಶ ಮಾಡಿದರು.