ಪಕ್ಷಾಂತರ ನಿಷೇಧ ಕಾನೂನು ಬಲಪಡಿಸಲು "ಸಾರ್ವಜನಿಕರಿಗೆ ಸುವರ್ಣಾವಕಾಶ!"
ಬೆಂಗಳೂರು, ಮೇ 22: ಇಡೀ ಜಗತ್ತು ಕೊರೊನಾ ವೈರಸ್ ಆತಂಕದಲ್ಲಿದ್ದಾಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಧ್ಯಪ್ರದೇಶದಲ್ಲಿ ತನ್ನ ಸರ್ಕಾರ ರಚನೆ ಕಸರತ್ತು ನಡೆಸಿತ್ತು. ಇದರಿಂದಾಗಿ ದೇಶದಲ್ಲಿ ಮಾರಕ ಕೊರೊನಾ ವೈಸರ್ ಹರಡುವುದನ್ನು ತಡೆಯುವತ್ತ ಕೇಂದ್ರ ಸರ್ಕಾರ ಗಮನ ಕೊಡಲಿಲ್ಲ. ಅದರ ಫಲಿತಾಂಶ ಈಗ ನಮ್ಮ ಕಣ್ಣ ಮುಂದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.
Recommended Video
ಏನೇ ಆದರೂ ಜನಪ್ರತಿನಿಧಿಗಳು ಮಾಡುವ ಪಕ್ಷಾಂತರದ ಪರಿಣಾಮವನ್ನು ಅನುಭವಿಸುವುದು ಮಾತ್ರ ಪ್ರಜೆಗಳು ಎಂದರೂ ತಪ್ಪಾಗಲಿಕ್ಕಿಲ್ಲ. ಪಕ್ಷಾಂತರ ಎಂಬುದು ನಮ್ಮ ದೇಶಕ್ಕೆ ಹೊಸದೇನೂ ಅಲ್ಲ, ಅದು ದೇಶ ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಂಡಾಗಿನಿಂದಲೂ ಇದೆ. ಆದರೆ ಬಿಜೆಪಿಯ ಆಪರೇಷನ್ ಕಮಲದಿಂದ ಅದು ಬೇರೆಯ ರೂಪವನ್ನು ಪಡೆದುಕೊಂಡಿತು ಎನ್ನುತ್ತಾರೆ ವಿಧಾನಸಭೆಯ ಮಾಜಿ ಸ್ಪೀಕರ್ ಒಬ್ಬರು.
ಇದೀಗ ಪಕ್ಷಾಂತರ ನಿಷೇಧ ಕಾನೂನು ಬಲಪಡಿಸುವ ಬಗ್ಗೆ ಲೋಕಸಭೆ ತೀರ್ಮಾನಿಸಿದೆ. ಹೀಗಾಗಿ ಸಾರ್ವಜನಿಕರು ಹಾಗೂ ತಜ್ಞರು ತಮ್ಮ ಅಭಿಪ್ರಾಯ ಹಂಚಿಕೊಳ್ಳುವಂತೆ ಮನವಿ ಮಾಡಲಾಗಿದೆ. ನಿಮ್ಮ ಅಭಿಪ್ರಾಯಗಳನ್ನು ಶಾಸನಸಭೆಗೆ ತಿಳಿಸಲು ಸುವರ್ಣಾವಕಾಶ ಇದಾಗಿದ್ದು, ನೀವು ಮಾಡಬೇಕಾಗಿರುವುದು ಇಷ್ಟೇ!
ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ
ಪಕ್ಷಾಂತರ ನಿಷೇಧ ಕಾಯಿದೆಯನ್ನು ಮತ್ತಷ್ಟು ಗಟ್ಟಿಗೊಳಿಸಲು, ಸಂವಿಧಾನದ 10ನೇ ಶೆಡ್ಯೂಲ್ ಬಗ್ಗೆ ಪರಿಶೀಲನೆ ಮಾಡಲು ಸಮಿತಿ ರಚನೆ ಮಾಡಲಾಗಿದೆ. ಪಕ್ಷಾಂತರ ನಿಷೇಧ ಕಾಯಿದೆಗೆ ಸಂಬಂಧಿಸಿದಂತೆ ಭಾರತ ಸಂವಿಧಾನದ ಹತ್ತನೇ ಅನುಸೂಚಿಯಲ್ಲಿ ರಚಿಸಲಾಗಿರುವ ನಿಯಮಾವಳಿ ರೂಪಿಸಲು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಕರ್ನಾಟಕ ವಿಧಾನಸಭಾ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಮನವಿ ಮಾಡಿದ್ದಾರೆ.
ಸಾರ್ವಜನಿಕರು ಹಾಗೂ ಕಾನೂನು ತಜ್ಞರು ತಮ್ಮ ಅಭಿಪ್ರಾಯ ತಿಳಿಸುವಂತೆ ಕರ್ನಾಟಕ ವಿಧಾನಸಭೆ ಸಚಿವಾಲಯ ಮನವಿ ಮಾಡಿಕೊಂಡಿದೆ.
ಎಲ್ಲಿಗೆ? ಹೇಗೆ ಅಭಿಪ್ರಾಯ ತಿಳಿಸಬೇಕು?
10ನೇ ಶೆಡ್ಯೂಲ್ ಕುರಿತು ಪರಿಶೀಲನಾ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮುನ್ನ, ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.
ತಮ್ಮ ಅಭಿಪ್ರಾಯವನ್ನು ಕೊಡ ಬಯಸುವವರು ಇ-ಮೇಲ್ : [email protected] ಅಥವಾ ಫ್ಯಾಕ್ಸ್ ಸಂಖ್ಯೆ : 080 - 2225 8301ಗೆ ಅಭಿಪ್ರಾಯ ಫ್ಯಾಕ್ಸ್ ಮಾಡಬಹುದಾಗಿದೆ.
ಜೊತೆಗೆ ಎಂ ಕೆ ವಿಶಾಲಾಕ್ಷಿ, ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, ಕೊಠಡಿ ಸಂಖ್ಯೆ : 121, ಮೊದಲನೆಯ ಮಹಡಿ, ವಿಧಾನಸೌಧ, ಬೆಂಗಳೂರು - 560 001 ಈ ವಿಳಾಸಕ್ಕೆ ಜೂನ್ 10ರ ಸಂಜೆ 5 ಗಂಟೆಯೊಳಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬಹುದಾಗಿದೆ.
ಮಾಜಿ ಸ್ಪೀಕರ್ಗಳ ಸಭೆ
ಸಾರ್ವಜನಿಕರ ಅಭಿಪ್ರಾಯದೊಂದಿಗೆ ರಾಜ್ಯ ವಿಧಾನಸಭೆಯ ಮಾಜಿ ಅಧ್ಯಕ್ಷರುಗಳ ಅಭಿಪ್ರಾಯ ಪಡೆಯಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಬೆ ಕರೆದಿದ್ದಾರೆ. ಇದೇ ಗುರುವಾರ (ಮೇ 28, 2020)ರಂದು ಬೆಳಗ್ಗೆ 10.30ಕ್ಕೆ ಸಭೆ ಆರಂಭವಾಗಲಿದೆ.
ವಿಧಾನಸೌಧದಲ್ಲಿ ನಡೆಯುವ ಸಭೆಗೆ ಆಗಮಿಸಿ ಸಲಹೆ, ಸೂಚನೆಗಳನ್ನು ಕೊಡುವಂತೆ ಮಾಜಿ ಸ್ಪೀಕರ್ಗಳಾದ ರಮೇಶ್ ಕುಮಾರ್, ಕೆ.ಜೆ. ಬೋಪಯ್ಯ, ಕೆ.ಆರ್. ಪೇಟೆ ಕೃಷ್ಣ ಅವರು ಸೇರಿದಂತೆ ಮಾಜಿ ಸ್ಪೀಕರ್ಗಳು, ಸಂಸದೀಯ ಪಟುಗಳು, ಕಾನೂನು ತಜ್ಞರನ್ನು ಆಹ್ವಾನಿಸಲಾಗಿದೆ.
ಪಕ್ಷಾಂತರಿಗಳಿಗೆ ಸಹಾಯವಾದ ಕಾನೂನು
ದಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಅಧಿಕಾರದಲ್ಲಿದ್ದಾಗ ಸಂವಿಧಾನಕ್ಕೆ 52ನೆಯ ತಿದ್ದುಪಡಿ ಮಾಡಿ 10ನೇ ಶೆಡ್ಯೂಲ್ನಲ್ಲಿ ಸೇರಿಸಲು ತೀರ್ಮಾನ ಮಾಡಲಾಗಿತ್ತು. ಆದರೆ ಅದಕ್ಕೆ ಹಿರಿಯ ಸಮಾಜವಾದಿ ಮಧು ಲಿಮಯೆ ಹಾಗೂ ಸಂವಿಧಾನ ತಜ್ಞರಾಗಿದ್ದ ನಾನಿ ಪಾಲ್ಖಿವಾಲ ತೀವ್ರವಾಗಿ ವಿರೋಧಿಸಿದ್ದರು.
52ನೇ ತಿದ್ದುಪಡಿ ಮೂಲಕ 10ನೇ ಶೆಡ್ಯೂಲ್ಗೆ ತಿದ್ದುಪಡಿ ತಂದರೆ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗುತ್ತದೆ ಎಂದು ವಾದಿಸಿದ್ದರು. ಅದರಿಂದಾಗಿ ಅಂದಿನ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ಮೂರನೇ ಒಂದರಷ್ಟು ಸದಸ್ಯರ ಪಕ್ಷಾಂತರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇದು ಮುಂದಿನ ದಿನಗಳಲ್ಲಿ ಪಕ್ಷಾಂತರಿಗಳಿಗೆ ಸಹಾಯವಾಯಿತು.
ಮುಂದೆ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾಂತರಿಗೆ ಮಣೆ ಹಾಕಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಇದೀಗ ರಾಜಕೀಯ ಪಕ್ಷಗಳ ಭವಿಷ್ಯಕ್ಕೆ ಪಕ್ಷಾಂತರ ಮಾಡುವವರು ಮುಳುವಾಗಿದೆ.