'ಹಿಂದಿ ಹೇರಿಕೆ'ಗೆ ಕರ್ನಾಟಕದಲ್ಲಿ ಕಂಡಾಪಟ್ಟೆ ಸಿಟ್ಟು; ಟೀಕೆಯಲ್ಲಿ ನಾಯಕರ ಒಗ್ಗಟ್ಟು
ಹಿಂದಿ ಮಾತನಾಡದ ರಾಜ್ಯಗಳಲ್ಲಿ ಹಿಂದಿಯನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿರುವ ವರದಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದರೆ, ಕರ್ನಾಟಕದಲ್ಲಿ ಆ ಪ್ರಮಾಣ ಏನೂ ಕಡಿಮೆ ಇಲ್ಲದೆ ಕಾವು ಪಡೆಯುತ್ತಿದೆ.
ಶಿಕ್ಷಣದಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸುವ ತೀರ್ಮಾನಕ್ಕೆ ಭಾರೀ ವಿರೋಧದ ಜತೆಗೆ ಕೇಂದ್ರ ಸರಕಾರದ್ದು ಹಿಂದಿ ಹೇರಿಕೆ ಧೋರಣೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಅದು ಕೇವಲ ಶಿಫಾರಸು ಮಾತ್ರ, ಕೇಂದ್ರ ಸರಕಾರದ ತೀರ್ಮಾನವಲ್ಲ ಎಂಬ ಸಮರ್ಥನೆ ಕೂಡ ಮತ್ತೊಂದು ಕಡೆ ಕೇಳಿಬರುತ್ತಿದೆ.
ಈಗಾಗಲೇ ಆ ಶಿಫಾರಸಿಗೆ ತಿದ್ದುಪಡಿ ತರಲಾಗಿದೆ ಎಂದು ಕೇಂದ್ರದಿಂದ ಹೇಳುತ್ತಿದ್ದರೂ ಹಿಂದಿಯನ್ನು ಒಂದು ಭಾಷೆಯಾಗಿ ಹೇರಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವು ನಾಯಕರು ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದು, ಅವುಗಳು ಇಲ್ಲಿವೆ.
ದಿನೇಶ್ ಗುಂಡೂರಾವ್, ಕೆಪಿಸಿಸಿ ಆಧ್ಯಕ್ಷ
ಒಂದು ಭಾಷೆ, ಒಂದು ಸಂಸ್ಕೃತಿಯ ಹೆಸರಲ್ಲಿ ಅನಿವಾರ್ಯವಲ್ಲದ ಹಿಂದಿ ಭಾಷೆಯನ್ನು @narendramodi ಸರ್ಕಾರ ದಕ್ಷಿಣ ಭಾರತೀಯರ ಮೇಲೆ ಹೇರುತ್ತಿರುವುದು ಖಂಡನೀಯ. ಮೋದಿ ಸರ್ಕಾರ ಹಿಂದಿ ಭಾಷಿಗರ ಸರ್ಕಾರದಂತೆ ವರ್ತಿಸುವುದನ್ನು ನಿಲ್ಲಿಸಲಿ. 'ಬಹು ಭಾಷೆ, ಬಹು ಸಂಸ್ಕೃತಿ'ಯ ವೈವಿಧ್ಯತೆಯನ್ನು ಗೌರವಿಸಲಿ. #StopHindiImposition
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿರಬೇಕ ಹೊರತು ಕಡ್ಡಾಯವಾಗಬಾರದು. ಇದು ಇನ್ನೊಂದು ಭಾಷೆಯ ಒತ್ತಾಯಪೂರ್ವಕ ಹೇರಿಕೆಯಂತಾಗಿ ಮಗುವಿನ ಕಲಿಕೆಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಿಂದಿ ಭಾಷಿಗರಲ್ಲದವರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂಬುದು ನನ್ನ ಭಾವನೆ.
ಅರುಣ್ ಜಾವಗಲ್
ಹಿಂದಿ ಕಲಿತ ಕಾರಣಕ್ಕೆ ಕರ್ನಾಟಕದ ಎಷ್ಟು ಜನರಿಗೆ ಹಿಂದಿ ರಾಜ್ಯದಲ್ಲಿ ಕೆಲಸ ಸಿಕ್ಕಿದೆ? ಕನ್ನಡ ಕಲಿಯದ ಎಷ್ಟು ಹಿಂದಿ ಭಾಷಿಕರಿಗೆ ಕರ್ನಾಟಕದಲ್ಲಿ ಕೆಲಸ ಸಿಕ್ಕಿದೆ? ಕನ್ನಡಿಗ ಹಿಂದಿ ಕಲಿಯುವ ಮೂಲಕ ಹಿಂದಿ ಭಾಷಿಕರಿಗೆ ಕರ್ನಾಟಕದಲ್ಲಿ ಕೆಲಸ ಪಡೆದುಕೊಳ್ಳಲು ಉಪಯೋಗ ಮಾಡಿಕೊಟ್ಟಿದ್ದಾನೆ ಹೊರೆತು. ಕನ್ನಡಿಗರಿಗೆ ಉಪಯೋಗವಾಗಿಲ್ಲ.
ಕುಮಾರಸ್ವಾಮಿ, ಮುಖ್ಯಮಂತ್ರಿ
ನಿನ್ನೆ @HRDMinistry ರವರು ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. 3-ಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು. #HindiImposition
ಜೆಡಿಎಸ್, ಕರ್ನಾಟಕ
ಮುಖ್ಯಮಂತ್ರಿ @hd_kumaraswamy ಯವರ ನೇತೃತ್ವದ ಕಾಂಗ್ರೆಸ್-ಜನತಾದಳ ಸಮ್ಮಿಶ್ರ ಸರ್ಕಾರ ರಾಜ್ಯದ ಶಾಲಾ ಕಲಿಕೆಯಲ್ಲಿ ಹಿಂದಿ ಹೇರಿಕೆ ಆಗುವುದಕ್ಕೆ ಯಾವುದೇ ರೀತಿಯಲ್ಲಿ ಒಪ್ಪುವುದಿಲ್ಲ. ಸರ್ಕಾರವು ಕನ್ನಡ ಅಸ್ಮಿತೆಯನ್ನು ಯಾವಾಗಲೂ ಎತ್ತಿ ಹಿಡಿಯುತ್ತದೆ ಇದಕ್ಕೆ ನಮ್ಮ ಸರ್ಕಾರವು ಯಾವಾಗಲೂ ಬದ್ಧವಾಗಿರುತ್ತದೆ. #StopHindiImposition