ಅರುಣ್ ಜೇಟ್ಲಿ ನಿಧನ : ಕಂಬನಿ ಮಿಡಿದ ಕರ್ನಾಟಕದ ನಾಯಕರು
ಬೆಂಗಳೂರು, ಆಗಸ್ಟ್ 24 : ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ವಿಧಿವಶರಾಗಿದ್ದಾರೆ. ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಶನಿವಾರ ಮಧ್ಯಾಹ್ನ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅರುಣ್ ಜೇಟ್ಲಿ (66) ವಿಧಿವಶರಾದರು. ಆಗಸ್ಟ್ 9ರಿಂದ ಏಮ್ಸ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಅರುಣ್ ಜೇಟ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಮೋದಿ, ಶಾ ಜೋಡಿಗೆ ಜೇಟ್ಲಿ ಅತ್ಯಾಪ್ತರಾಗಿದ್ದು ಹೇಗೆ?
ಹಿರಿಯ ಬಿಜೆಪಿ ನಾಯಕನ ಸಾವಿಗೆ ಕರ್ನಾಟಕದ ಹಲವಾರು ನಾಯಕರು ಕಂಬನಿ ಮಿಡಿದಿದ್ದಾರೆ. ಬೇರೆ-ಬೇರೆ ಪಕ್ಷಗಳಲ್ಲಿಯೂ ಅರುಣ್ ಜೇಟ್ಲಿ ಉತ್ತಮ ಸ್ನೇಹಿತರನ್ನು ಹೊಂದಿದ್ದರು. ಬಿಜೆಪಿ ಪಕ್ಷದ ಟ್ರಬಲ್ ಶೂಟರ್ ಕಳೆದುಕೊಂಡಿದೆ.
ಪ್ರಧಾನಿ ಹುದ್ದೆಗೆ ಮೋದಿ ಹೆಸರು ಸೂಚಿಸಿದ್ದ ಜೇಟ್ಲಿ ಎಂಬ ಟ್ರಬಲ್ ಶೂಟರ್
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಭಾನುವಾರ ದೆಹಲಿಗೆ ತೆರಳಲಿದ್ದು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದೇನೆ" ಎಂದು ಅವರು ಹೇಳಿದರು.
ಅರುಣ್ ಜೇಟ್ಲಿ ಬದುಕಿನ ಅಪರೂಪದ ಚಿತ್ರಗಳು
ಅರುಣ್ ಜೇಟ್ಲಿ ಅವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸಹ ವಿದೇಶ ಪ್ರವಾಸದಲ್ಲಿ ಇದ್ದು, ಅವರು ದೇಶಕ್ಕೆ ಮರಳಿದ ಬಳಿಕ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.
ಯಡಿಯೂರಪ್ಪ ಸಂತಾಪ
"ಈ ದೇಶ ಕಂಡ ಅಪ್ರತಿಮ ನಾಯಕನನ್ನು ಕಳೆದುಕೊಂಡು ನಮ್ಮ ಪಕ್ಷ ಬಡವಾಗಿದೆ. ಅವರು ಅಪರೂಪದ ರಾಜಕಾರಣಿ ಆಗಿದ್ದರು. ಪ್ರತಿಪಕ್ಷಗಳೂ ಮೆಚ್ಚುವಂತೆ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ನಾನು ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದೆ. ಅವರ ಮೇಲೆ ಅಪಾರ ಗೌರವ ಇಟ್ಟುಕೊಂಡಿರುವವನು ನಾನು" ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಅಗಲಿಕೆ ಬಣ್ಣಿಸಲು ಪದಗಳಿಲ್ಲ
"ಅರುಣ್ ಜೇಟ್ಲಿ ಅವರ ಅಗಲಿಗೆ ಬಣ್ಣಿಸಲು ಪದಗಳಿಲ್ಲ. ನಮಗೆ ಗುರುವಾಗಿದ್ದರು, ಮಾರ್ಗದರ್ಶಕ ಮತ್ತು ನೈತಿಕ ಶಕ್ತಿ ತುಂಬುವವರಾಗಿದ್ದರು. ಯಾವುದೇ ಸಂದರ್ಭದಲ್ಲಿಯೂ ಯಾರಿಗಾದರೂ ಸಹಾಯ ಮಾಡಲು ಸಿದ್ಧವಾಗಿರುತ್ತಿದ್ದರು" ಎಂದು ರಾಜ್ಯಸಭಾ ಸದಸ್ಯೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
ದುಃಖ ಭರಿಸುವ ಶಕ್ತಿ ಕೊಡಲಿ
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, "ಅರುಣ್ ಜೇಟ್ಲಿ ವಿಧಿವಶರಾಗಿರುವ ಸುದ್ದಿ ಕೇಳಿ ಬೇಸರವಾಯಿತು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ" ಎಂದು ಟ್ವೀಟ್ ಮಾಡಿದ್ದಾರೆ.
ನಳೀನ್ ಕುಮಾರ್ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ. "ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅಗಲಿದ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಸಂತಾಪ ಸೂಚಿಸಿದ್ದಾರೆ.
ಪ್ರೀತಂ ಗೌಡ ಸಂತಾಪ
"ಭಾರತ ದೇಶ ಕಂಡ ಧೀಮಂತ ನಾಯಕ, ಮಾಜಿ ಕೇಂದ್ರ ಸಚಿವರಾಗಿದ್ದ ಶ್ರೀ ಅರುಣ್ ಜೇಟ್ಲಿ ರವರು ಇನ್ನಿಲ್ಲ ಎನ್ನುವ ಸುದ್ದಿ ಅತೀವ ನೋವು ತಂದಿದೆ. ಭಗವಂತ ಅವರ ಆತ್ಮಕ್ಕೆ ಚಿರ ಶಾಂತಿ ನೀಡಲಿ. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಆ ದೇವರು ಕರುಣಿಸಲಿ" ಎಂದು ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಸಂತಾಪ ಸೂಚಿಸಿದ್ದಾರೆ.
ಈಶ್ವರ ಖಂಡ್ರೆ ಸಂತಾಪ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಉತ್ತಮ ಸಂಸದೀಯಪಟುವಾಗಿದ್ದ ಅರುಣ್ ಜೇಟ್ಲಿ ಅವರು ಹಣಕಾಸು, ರಕ್ಷಣೆ, ವಾಣಿಜ್ಯ, ಕೈಗಾರಿಕೆ, ಕಾನೂನು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು" ಎಂದು ಹೇಳಿದ್ದಾರೆ.