ಕರ್ನಾಟಕದಲ್ಲಿ 2500 ರೂ. ಒಂದು ಕೊವಿಡ್-19 ನೆಗೆಟಿವ್ ಸರ್ಟಿಫಿಕೇಟ್!
ಬೆಂಗಳೂರು, ಅಕ್ಟೋಬರ್.28: ಕರ್ನಾಟಕದಲ್ಲಿ 2500 ರೂಪಾಯಿ ಕೊಟ್ಟರೆ ಕೊರೊನಾವೈರಸ್ ಸೋಂಕು ತಗುಲಿಲ್ಲ ಎಂಬ ಪ್ರಮಾಣಪತ್ರವು ನಿಮ್ಮ ಕೈ ಸೇರಲಿದೆ. ಸಾಂಕ್ರಾಮಿಕ ಪಿಡುಗಿನ ನಡುವೆ ಇಂಥದೊಂದು ಭಾರಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಯಲ್ಲಿಯೇ ಒಬ್ಬ ವೈದ್ಯ ಸೇರಿದಂತೆ ಮೂವರು ಮಹಿಳಾ ವೈದ್ಯಕೀಯ ಸಿಬ್ಬಂದಿ ನಕಲಿ ಕೊವಿಡ್-19 ಸರ್ಟಿಫಿಕೇಟ್ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
2500 ರೂಪಾಯಿಗೆ ನಕಲಿ ಕೊವಿಡ್ ನೆಗಿಟಿವ್ ಪ್ರಮಾಣ ಪತ್ರ!
ಬೆಂಗಳೂರಿನಲ್ಲಿ 2500 ರೂಪಾಯಿ ನೀಡಿದರೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಿ, ಸೋಂಕು ತಗುಲಿಲ್ಲ ಎಂದು ಸುಳ್ಳು ಪ್ರಮಾಣಪತ್ರವನ್ನು ಸೃಷ್ಟಿಸಿ ನೀಡುತ್ತಿದ್ದರು. ಈ ಹಗರಣದಲ್ಲಿ ಬಿಬಿಎಂಪಿ ಅಧೀನದ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ವೈದ್ಯಯೂ ಕೂಡಾ ಸೇರಿಕೊಂಡಿದ್ದಾರೆ.
ವೈದ್ಯೆ, ಆಶಾ ಕಾರ್ಯಕರ್ತೆ, ಲ್ಯಾಬ್ ಟೆಕ್ನಿಶಿಯನ್ ಅಮಾನತು
ಬೆಂಗಳೂರಿನ ಸ್ಥಳೀಯ ವೈದ್ಯೆ ಶೈಲಜಾ ಎಂಬುವವರ ನೆರವಿನಿಂದ ಕೊವಿಡ್-19 ನಕಲಿ ಪ್ರಮಾಣಪತ್ರವನ್ನು ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈ ಸಂಬಂಧ ವೈದ್ಯೆ ಶೈಲಜಾ, ಆಶಾ ಕಾರ್ಯಕರ್ತೆ ಶಾಂತಿ ಮತ್ತು ಪ್ರಯೋಗಾಲಯದ ತಂತ್ರಜ್ಞೆ ಮಹಾಲಕ್ಷ್ಮಿ ಎಂಬುವವರನ್ನು ಅಮಾನತುಗೊಳಿಸಲಾಗಿದೆ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. ಪ್ರತಿಯೊಂದು ಪ್ರಮಾಣಪತ್ರ ಸೃಷ್ಟಿಗೆ ಕನಿಷ್ಠ 2500 ರೂಪಾಯಿ ಪಡೆದುಕೊಳ್ಳುತ್ತಿದ್ದರು ಎಂದು ಬಿಬಿಎಂಪಿ ತಿಳಿಸಿದೆ.
ವೈದ್ಯೆ ಶೈಲಜಾರನ್ನು ಗುತ್ತಿಗೆ ಆಧಾರದಲ್ಲಿ ನೇಮಕ
ಕೊರೊನಾವೈರಸ್ ಸೋಂಕಿನ ತಪಾಸಣೆ ವೇಗ ಹೆಚ್ಚಿಸುವ ಉದ್ದೇಶದಿಂದ ಹಲವೆಡೆ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿತ್ತು. ಅದರಂತೆ ವೈದ್ಯೆ ಶೈಲಜಾರನ್ನು ಕೂಡಾ ಗುತ್ತಿಗೆ ಆಧಾರದ ಮೇಲೆ ನೇಮಕಗೊಳಿಸಲಾಗಿತ್ತು. ಇದೀಗ ಡಾ.ಶೈಲಜಾ ಜೊತೆಗೆ ಮಾಡಿಕೊಂಡಿದ್ದ ಗುತ್ತಿಗೆ ಒಪ್ಪಂದವನ್ನೂ ರದ್ದುಗೊಳಿಸಲಾಗುವುದು ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಮೂವರು ಆರೋಪಿಗಳ ವಿರುದ್ಧ ಅಪರಾಧ ಪ್ರಕರಣ
ಕೊರೊನಾವೈರಸ್ ಸೋಂಕು ತಪಾಸಣೆಯಲ್ಲಿ ತಪ್ಪಾಗಿದೆ ಎಂದು ಕಾರಣ ಹೇಳುವುದಕ್ಕಾಗಿ ರಾಪಿಡ್ ಆಂಟಿಜೆನಿಕ್ ಪರೀಕ್ಷೆ ವಿಧಾನವನ್ನು ಇಲ್ಲಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಸಿಕ್ಕಿಬಿದ್ದಲ್ಲಿ ಸ್ವಾಬ್ ಪರೀಕ್ಷೆಯಲ್ಲಿ ದೋಷವಾಗಿದೆ ಎಂದು ಕಾರಣ ಹೇಳುತ್ತಿದ್ದರು. ಆದರೆ ಮೂವರು ನಡೆಸಿರುವ ಅಕ್ರಮ ದಂಧೆಯನ್ನು ಖಾಸಗಿ ವಾಹಿನಿ ವರದಿಗಾರನು ದೃಶ್ಯ ಸಮೇತವಾಗಿ ಸೆರೆ ಹಿಡಿದಿದ್ದಾರೆ. ಇನ್ನು, ಆರೋಪಿಗಳ ವಿರುದ್ಧ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಮೂವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಹರಡುವಿಕೆ ಪ್ರಮಾಣ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 3691 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 809638ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಂದೇ ದಿನ ಮಹಾಮಾರಿ ಕೊರೊನಾವೈರಸ್ ಸೋಂಕಿಗೆ 44 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 10991ಕ್ಕೆ ಏರಿಕೆಯಾಗಿದೆ. ಕೊರೊನಾವೈರಸ್ ಒಟ್ಟು 809638 ಸೋಂಕಿತ ಪ್ರಕರಣಗಳ ಪೈಕಿ 727298 ಸೋಂಕಿತರು ಗುಣಮುಖರಾಗಿದ್ದಾರೆ. 71330 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 7740 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
24 ಗಂಟೆಗಳಲ್ಲಿ 66701 ಜನರಿಗೆ ತಪಾಸಣೆ
ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 14385 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 52316 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 66701 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 75,14,194 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.
Recommended Video