ಕೊವಿಡ್-19 ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮಾರ್ಗಸೂಚಿ
ಬೆಂಗಳೂರು, ಆಗಸ್ಟ್.07: ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತು ಸಾವಿನ ಪ್ರಮಾಣ ಏರಿಕೆಯ ನಡುವೆ ಕರ್ನಾಟಕ ರಾಜ್ಯ ಸರ್ಕಾರವು ಕೊವಿಡ್-19ನಿಂದ ಪ್ರಾಣ ಬಿಟ್ಟವರ ಅಂತ್ಯ ಸಂಸ್ಕಾರಕ್ಕೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
Recommended Video
ಕೊರೊನಾವೈರಸ್ ನಿಂದ ಪ್ರಾಣ ಬಿಟ್ಟವರ ಮೃತದೇಹವನ್ನು ರವಾನಿಸುವಾಗ ಸೂಕ್ತ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಇಲ್ಲದಿದ್ದಲ್ಲಿ ಆರೋಗ್ಯ ಸಿಬ್ಬಂದಿ ಅಥವಾ ಅಥವಾ ಮೃತರ ಕುಟುಂಬ ಸದಸ್ಯರಿಗೆ ಕೋವಿಡ್-19 ಸೋಂಕು ಅಂಟಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ.
ಕೊವಿಡ್-19 ತಪಾಸಣೆ: ಏಷ್ಯಾ ರಾಷ್ಟ್ರಗಳಲ್ಲಿ ಭಾರತಕ್ಕೆ ಇಂಥಾ ಸ್ಥಿತಿಯೇ?
ಮೃತದೇಹದಿಂದ ಸೋಂಕು ಹರಡುವ ಸಾಧ್ಯತೆಗಳು ವಿರಳವಾಗಿದ್ದರೂ ವೈಜ್ಞಾನಿಕ ಮಾಹಿತಿ ಕೊರತೆಯಿಂದ ಈ ಸಮಯದಲ್ಲಿ ಅಜಾಗರೂಕತೆಯಿಂದ ಕೊವಿಡ್-19 ಸೋಂಕು ಹರಡುವುದನ್ನು ತಪ್ಪಿಸಲು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಇದರ ಜೊತೆಗೆ ಆರೋಗ್ಯ ಇಲಾಖೆಯ ಪ್ರಕಟಣೆಯಲ್ಲಿ ಮೃತರ ಘನತೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯದ ಬಗ್ಗೆಯೂ ಉಲ್ಲೇಖಿಸಿದೆ.
ಮೃತದೇಹ ನಿರ್ವಹಣೆ ಬಗ್ಗೆ 23 ಪುಟಗಳ ಹೊಸ ಪ್ರಕಟಣೆ
ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರವು 23 ಪುಟಗಳ ನಿರ್ವಹಣಾ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಹೊಸ ಪ್ರಕಟಣೆಯನ್ನು ಹೊರಡುಸಿದೆ.
ಮೃತದೇಹಗಳ ಕಡ್ಡಾಯ ತಪಾಸಣೆಗೆ ಒತ್ತಾಯಿಸುವಂತಿಲ್ಲ
ಕೊರೊನಾವೈರಸ್ ಸೋಂಕಿನ ತಪಾಸಣೆಯನ್ನು ಪ್ರತಿಯೊಂದು ಮೃತದೇಹಕ್ಕೂ ಮಾಡುವ ಅಗತ್ಯವಿಲ್ಲ. ಶೀತಜ್ವರದಂತಹ ಸೋಂಕಿತ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ಮೃತಪಟ್ಟಲ್ಲಿ ಮಾತ್ರ ಅಂಥ ಮೃತದೇಹವನ್ನು ಕೊವಿಡ್-19 ಸೋಂಕಿನ ತಪಾಸಣೆಗೆ ಒಳಪಡಿಸಬೇಕು. ಸ್ವ್ಯಾಬ್ ಸಂಗ್ರಹಿಸಿದ ಕೂಡಲೇ ಮೃತದೇಹವನ್ನು ಕುಟುಂಬ ಸದಸ್ಯರು ಅಥವಾ ಸಂಬಂಧಿಕರಿಗೆ ಗೌರವಯುತವಾಗಿ ಹಸ್ತಾಂತರಿಸಬೇಕು. ಅಂತ್ಯ ಸಂಸ್ಕಾರದ ವೇಳೆಯಲ್ಲಿ ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎನ್ನುವುದರ ಕುರಿತು ಕರಪತ್ರವನ್ನು ಒದಗಿಸಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಶವಾಗಾರಕ್ಕೆ ತೆರಳುವಾಗ ಪಿಪಿಇ ಕಿಟ್ ಧರಿಸಬೇಕು
ಮೃತದೇಹದ ಅಂತ್ಯ ಸಂಸ್ಕಾರಕ್ಕಾಗಿ ಶವಾಗಾರಕ್ಕೆ ತೆರಳುವ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು, ಶವಾಗಾರ ಸಿಬ್ಬಂದಿ ನೇರವಾಗಿ ಸಂಪರ್ಕ ಹೊಂದುವಂತಿಲ್ಲ. ಬದಲಿಗೆ ಕಡ್ಡಾಯವಾಗಿ ಸಂಪೂರ್ಣ ಸುರಕ್ಷತಾ ಸಾಧನ(ಪಿಪಿಇ ಕಿಟ್)ವನ್ನು ಧರಿಸಬೇಕು. ಕುಟುಂಬ ಸದಸ್ಯರು ಶವವನ್ನು ದಹನ ಮಾಡಲು ಅಥವಾ ಹೂಳಲು ಸಾಧ್ಯವಾಗದಿದ್ದರೆ, ಸ್ಥಳೀಯ ಆರೋಗ್ಯ ಪ್ರಾಧಿಕಾರವು ಕುಟುಂಬದ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಗೌರವಾನ್ವಿತ ಅಂತ್ಯ ಸಂಸ್ಕಾರವನ್ನು ನೆರವೇರಿಸಬೇಕು.
ಮರಣೋತ್ತರ ಪರೀಕ್ಷೆಗಳು ಅನಗತ್ಯವಾಗಿ ಇರಬಾರದು
ಭಾರತೀಯ ವೈದ್ಯಕೀಯ ಮತ್ತು ಸಂಶೋಧನಾ ಸಮಿತಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕೋವಿಡ್ -19 ಸಾವಿನ ಪ್ರಕರಣಗಳ ಬಗ್ಗೆ ಸೂಕ್ತವಾಗಿ ದಾಖಲಿಸಬೇಕು. ಕೋವಿಡ್ -19 ಮೃತ ದೇಹಗಳನ್ನು ಅನಗತ್ಯ ವೇಳೆಯಲ್ಲಿ ಪರೀಕ್ಷೆಗೊಳಪಡಿಸಬಾರದು. ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಮರಣೋತ್ತರ ಪರೀಕ್ಷೆ ನಡೆಸುವ ಅಗತ್ಯವಿರುವುದಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ ಸಂಖ್ಯೆ
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 6670 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 164924ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದೆ. ರಾಜ್ಯದಲ್ಲಿ ಒಂದೇ ದಿನ ಮಹಾಮಾರಿಗೆ 101 ಮಂದಿ ಪ್ರಾಣ ಬಿಟ್ಟಿದ್ದು, ಕೊವಿಡ್-19ಗೆ ಬಲಿಯಾದವರ ಸಂಖ್ಯೆಯು 2998ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 3951 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 84232 ಮಂದಿ ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ರಾಜ್ಯದಲ್ಲಿ 77686 ಸಕ್ರಿಯ ಪ್ರಕರಣಗಳಿವೆ.