ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ಯಡಿಯೂರಪ್ಪ
Recommended Video
ಬೆಂಗಳೂರು, ಆಗಸ್ಟ್ 01: ಒಬ್ಬಂಟಿ ಸರ್ಕಾರ ನಿಭಾಯಿಸುತ್ತಿರುವ ಸಿಎಂ ಯಡಿಯೂರಪ್ಪ ಅವರು ಇಂದು ಪೊಲೀಸ್ ಇಲಾಖೆಗೆ ಬಹು ಮೇಜರ್ ಸರ್ಜರಿ ಮಾಡಿದ್ದಾರೆ. ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.
ಇಂದು ಸಿಎಂ ಯಡಿಯೂರಪ್ಪ ಅವರು ಪೊಲೀಸ್ ಅಧಿಕಾರಿಗಳ ಜೊತೆ ಪ್ರಮುಖ ಸಭೆ ನಡೆಸಿದ ನಂತರ ವರ್ಗಾವಣೆ ಆದೇಶ ಹೊರಬಿದ್ದಿದ್ದು, ಹಲವು ಐಪಿಎಸ್ ಅಧಿಕಾರಿಗಳು ಅತ್ತಿಂದಿತ್ತ ಆಗಿದ್ದಾರೆ. ಇನ್ನೂ ಕೆಲವು ಅಧಿಕಾರಿಗಳು ಬದಲಾಗುವ ಸಾಧ್ಯತೆ ಇದೆ.
ವಿಧಾನಸೌಧದ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಸಿಎಂ ಯಡಿಯೂರಪ್ಪ
ಎಸಿಬಿಯಲ್ಲಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಸ್ಥಳ ನಿಯುಕ್ತಿ ಮಾಡಲಾಗಿಲ್ಲ. ಎಸಿಬಿಯಲ್ಲೇ ಇದ್ದ ರವಿಕಾಂತೇಗೌಡ ಅವರನ್ನೂ ವರ್ಗಾವಣೆ ಮಾಡಲಾಗಿದ್ದು ಅವರಿಗೂ ಸ್ಥಳ ನಿಯೋಜನೆ ಮಾಡಿಲ್ಲ, ಇವರು ಐಎಂಎ ಹಗರಣದ ತನಿಖೆ ಮಾಡುತ್ತಿರುವ ಎಸ್ಐಟಿ ತಂಡದ ನೇತೃತ್ವ ವಹಿಸಿದ್ದರು. ಡಿಸಿಪಿ ದೇವರಾಜ್ ಅವರೂ ವರ್ಗಾವಣೆ ಆಗಿದ್ದೂ ಅವರಿಗೂ ಸ್ಥಳ ನಿಯುಕ್ತಿ ಮಾಡಿಲ್ಲ.
ಎ.ಸುಬ್ರಹ್ಮಣ್ಯ ರಾವ್ ಅವರು ಮತ್ತೆ ಕರಾವಳಿಗೆ ತೆರಳಿದ್ದು, ಅವರನ್ನು ಮಂಗಳೂರು ಪೊಲೀಸ್ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ. ಬಿ.ದಯಾನಂದ ಅವರನ್ನು ಕೆಎಸ್ಆರ್ಪಿ ಐಜಿಪಿ ಆಗಿ ನೇಮಕ ಮಾಡಲಾಗಿದೆ.
ಎಸಿಬಿಯ ಎಡಿಜಿಪಿ ಆಗಿ ಎಂ.ಚಂದ್ರಶೇಖರ್ ಅವರನ್ನು ನೇಮಿಸಲಾಗಿದೆ. ಕಮಲ್ ಪಂತ್ ಅವರನ್ನು ಗುಪ್ತಚರ ಇಲಾಖೆಯ ಎಡಿಜಿಪಿಯನ್ನಾಗಿ ನೇಮಿಸಲಾಗಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿ ಅಮರ್ ಕುಮಾರ್ ಪಾಂಡೆ ಅವರನ್ನು ನೇಮಿಸಲಾಗಿದೆ.
ಇನ್ಮೇಲೆ ಟಿಪ್ಪು ಜಯಂತಿ ಇಲ್ಲ! ಬಿಜೆಪಿ ಸರ್ಕಾರದ ಮಹತ್ವದ ನಿರ್ಣಯ
ಬೆಂಗಳೂರು ಕ್ರೈಂ ವಿಭಾಗದ ಜಂಟಿ ಆಯುಕ್ತರಾಗಿ ಸಂದೀಪ್ ಪಾಟೀಲ್ ಅವರನ್ನು ನಿಯೋಜಿಸಲಾಗಿದೆ. ರಾಮನಗರ ಎಸ್ಪಿ ಆಗಿದ್ದ ಚೇತನ್ ಸಿಂಗ್ ರಾಥೋಡ್ ಅವರನ್ನು ಬೆಂಗಳೂರಿಗೆ ವರ್ಗ ಮಾಡಲಾಗಿದೆ. ಶಿವಮೊಗ್ಗ ಎಸ್ಪಿ ಆಗಿ ಶಾಂತರಾಜ್ ಅವರನ್ನು ನೇಮಿಸಲಾಗಿದೆ.
ಅನೂಪ್ ಶೆಟ್ಟಿ ಅವರನ್ನು ರಾಮನಗರ ಎಸ್ಪಿ ಆಗಿ ವರ್ಗ ಮಾಡಲಾಗಿದೆ. ದಾವಣಗೆರೆ ಎಸ್ಪಿ ಆಗಿ ಹನುಮಂತರಾಯಪ್ಪ ಅವರನ್ನು ನಿಯೋಜಿಸಲಾಗಿದೆ. ಇನ್ನೂ ಕೆಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದೆ.