ಖಡಕ್ ಅಧಿಕಾರಿ ಮಧುಕರ್ ಶೆಟ್ಟಿ ಸಾವು-ಬದುಕಿನ ನಡುವೆ ಹೋರಾಟ
ಬೆಂಗಳೂರು, ಡಿಸೆಂಬರ್ 27: ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ ಎನಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅನಾರೋಗ್ಯದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಎಚ್1ಎನ್1ನಿಂದ ಬಳಲುತ್ತಿರುವ ಮಧುಕರ್ ಶೆಟ್ಟಿ ಕಳೆದ ಒಂದು ವಾರದಿಂದ ಹೈದರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದುಮ ವೆಂಟಿಲೇಟರ್ ಅಳವಡಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಹಂದಿ ಜ್ವರ: ಏನು ಮಾಡಬೇಕು? ಏನು ಮಾಡಬಾರದು?
ಮಧುಕರ್ ಶೆಟ್ಟಿ ಅವರ ಹೃದಯದ ಕವಾಟಕ್ಕೆ ತೀವ್ರ ಹಾನಿಯಾಗಿದೆ. ಹೀಗಾಗಿ ಇತರೆ ಅಂಗಗಳಿಗೆ ರಕ್ತ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಈ ಕಾರಣದಿಂದಾಗಿ ತುರ್ತು ಹೃದಯ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಎಚ್1ಎನ್1 ಸೋಂಕಿನಿಂದಾಗಿ ಅವರಿಗೆ ನ್ಯೂಮೋನಿಯಾ ಕೂಡ ಉಂಟಾಗಿದೆ. ಶ್ವಾಸಕೋಶ ಮತ್ತು ಜೀರ್ಣಾಂಗಗಳಿಗೂ ಹಾನಿಯಾಗಿದೆ ಎನ್ನಲಾಗಿದೆ.
1999ರ ಬ್ಯಾಚ್ ಅಧಿಕಾರಿ
1999ರ ಬ್ಯಾಚ್ನ ಕರ್ನಾಟಕ ಕೇಡರ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ, ಉಡುಪಿ ಜಿಲ್ಲೆಯವರು. ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಮಗನಾದ ಅವರು, ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್ ಯು) ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.
ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪೂರೈಸಿದ್ದಾರೆ. 2017ರ ಮಾರ್ಚ್ನಿಂದ ಹೈದರಾಬಾದ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ ಸರ್ಕಾರದ ನಿಯೋಜನೆ ಮೇರೆಗೆ 2008-09ರಲ್ಲಿ ಕೊಸೋವಾದಲ್ಲಿ ವಿಶ್ವಸಂಸ್ಥೆಯ ಯುದ್ಧಪರಾಧ ತನಿಖಾದಳದಲ್ಲಿ ಕರ್ತವ್ಯ ನಿರ್ವಹಿಸಿದ್ದರು.
|
ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹ
ಅವರ ಆರೋಗ್ಯದ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮಾಹಿತಿ ಪಡೆಯುತ್ತಿದ್ದಾರೆ. ತೆಲಂಗಾಣದ ಪೊಲೀಸ್ ಮಹಾನಿರ್ದೇಶಕರು ಮತ್ತು ಮುಖ್ಯ ಕಾರ್ಯದರ್ಶಿ ಅವರ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಕರ್ನಾಟಕದಿಂದ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ ಅವರನ್ನು ಚಿಕಿತ್ಸೆ ಮೇಲ್ವಿಚಾರಣೆಗಾಗಿ ಹೈದರಾಬಾದ್ಗೆ ಕಳುಹಿಸಲಾಗಿದೆ.
|
ಸಂತೋಷ್ ಹೆಗ್ಡೆ ಜೊತೆ ಮುನಿಸು
ಲೋಕಾಯುಕ್ತ ಸಂಸ್ಥೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾಗ, ಲೋಕಾಯುಕ್ತ ಅಧಿಕಾರಿ ಸಂತೋಷ್ ಹೆಗ್ಡೆ ಮತ್ತು ಮಧುಕರ್ ಶೆಟ್ಟಿ ಅವರ ನಡುವೆ ಉದ್ಭವಿಸಿದ್ದ ಮನಸ್ತಾಪ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸಂತೋಷ್ ಹೆಗ್ಡೆ ವಿರುದ್ ಬಹಿರಂಗವಾಗಿಯೇ ತಮ್ಮ ಸಿಟ್ಟು ತೋರಿಸಿಕೊಂಡಿದ್ದ ಅವರು, ರಜೆ ಹಾಕಿ ಉನ್ನತ ವಿದ್ಯಾಭ್ಯಾಸ ಪಡೆಯಲು 2011ರಲ್ಲಿ ಅಮೆರಿಕಕ್ಕೆ ತೆರಳಿದ್ದರು.
ಊರಿಗೆ ಶೆಟ್ಟಿ ಹೆಸರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಚಾಮರಾಜನಗರ ಮತ್ತು ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ವೀರಪ್ಪನ್ ಬಂಧನಕ್ಕಾಗಿ ರಚಿಸಲಾಗಿದ್ದ ಟಾಸ್ಕ್ ಫೋರ್ಸ್ನಲ್ಲಿ ಎಸ್ಪಿಯಾಗಿದ್ದರು. ಅಲ್ಲದೆ, ರಾಜ್ಯಪಾಲರ ಕಚೇರಿ, ಬೆಂಗಳೂರು ನಗರ ಸಂಚಾರ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಒತ್ತುವರಿಯಾಗಿದ್ದ ಜಮೀನನ್ನು ಜಿಲ್ಲಾಧಿಕಾರಿ ಹರ್ಷಗುಪ್ತ ಅವರೊಂದಿಗೆ ಸೇರಿ ಬಿಡಿಸಿ ದಲಿತರಿಗೆ ನೀಡಿದ್ದರು. ಆ ಊರಿಗೆ ಗುಪ್ತಶೆಟ್ಟಿಹಳ್ಳಿ ಎಂದು ಜನರು ಮರುನಾಮಕರಣ ಮಾಡಿದ್ದರು.
ಅತ್ಯುತ್ತಮ ಮತ್ತು ಪ್ರಮಾಣಿಕ
ಐಪಿಎಸ್ ಸೇರಿಕೊಂಡ ಅಧಿಕಾರಿಗಳಲ್ಲಿ ಮಧುಕರ್ ಶೆಟ್ಟಿ ಅತ್ಯುತ್ತಮ ಮತ್ತು ಪ್ರಾಮಾಣಿಕ ಅಧಿಕಾರಿ. ಭೇದಭಾವವಿಲ್ಲದೆ ಸೇವೆ ಸಲ್ಲಿಸಲು ಬದ್ಧರಾಗಿದ್ದ ಅವರು, ಕರ್ನಾಟಕದ ಪ್ರಭಾವಶಾಲಿ ರಾಜಕಾರಣಿಗಳ ಅಸಹನೀಯತೆಯ ಕಾರಣದಿಂದಾಗಿ ಕೇಂದ್ರ ಸೇವೆಯಲ್ಲಿ ಉಳಿಯುವಂತಾಗಿದ್ದು ನಮ್ಮ ದುರದೃಷ್ಟ ಎಂದು ಶಂಕರ್ ಬಿದರಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.