ರಾಹುಲ್ ಉಲ್ಲೇಖಿಸುತ್ತಿದ್ದ 2 ಉದ್ಯಮಿಗಳು ಇನ್ವೆಸ್ಟ್ ಕರ್ನಾಟಕದಲ್ಲಿ
ಖಾಸಗಿ ಬಸ್ಸುಗಳ ನಗರ ಪ್ರವೇಶ ನಿರ್ಬಂಧಕ್ಕೆ ಸರಕಾರದ ಮೇಲೆ ಪ್ರಯಾಣಿಕರ ಹಿಡಿಶಾಪ, ಖಾಸಗಿ ಕಂಪೆನಿಯಲ್ಲೂ ಮೀಸಲಾತಿ ನೀಡಬೇಕು ಎನ್ನುವ ಪ್ರತಿಭಟನೆಯ ನಡುವೆ ಮೊದಲ ದಿನದ ಇನ್ವೆಸ್ಟ್ ಕರ್ನಾಟಕ 2016 ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ರತನ್ ಟಾಟಾ, ಅಜೀಂ ಪ್ರೇಂಜಿ, ನಾರಾಯಣಮೂರ್ತಿ, ಕುಮಾರಮಂಗಲಂ ಬಿರ್ಲಾ, ಕಿರಣ್ ಮಜುಂದಾರ್ ಶಾ, ಸಜ್ಜನ್ ಜಿಂದಾಲ್ ಸೇರಿದಂತೆ ದೇಶದ ಹಲವು ವಾಣಿಜ್ಯೋದ್ಯಮಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದು ವಿಶೇಷ. (ಇನ್ವೆಸ್ಟ್ ಕರ್ನಾಟಕಕ್ಕೆ ಉದ್ಯಮಿಗಳ ದಂಡು)
ಇದಕ್ಕಿಂತ ಹೆಚ್ಚಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ರೈತರ ಅಥವಾ ಬಡವರ ಪರವಾಗಿಲ್ಲ, ಮೋದಿ ಇಬ್ಬರು ಉದ್ಯಮಿಗಳ ಪರವಾಗಿದ್ದಾರೆಂದು ಹತ್ತಾರು ಬಾರಿ ಟೀಕಿಸಿದ್ದರು.
ರಾಹುಲ್ ಗಾಂಧಿ ಉಲ್ಲೇಖಿಸುತ್ತಿದ್ದ ಆ ಇಬ್ಬರು ಉದ್ಯಮಿಗಳನ್ನು ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರ ಇನ್ವೆಸ್ಟ್ ಕರ್ನಾಟಕ ಸಮಾವೇಶದ ಉದ್ಘಾಟನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದು ಮತ್ತೊಂದು ವಿಶೇಷ.
ಬಂಡವಾಳ ಹೂಡಿಕೆಯಲ್ಲಿ ಕಗ್ಗಂಟಾಗಿರುವ ಭೂಸ್ವಾಧೀನ ವಿಚಾರದಲ್ಲಿ, ಭೂಮಿಯನ್ನು ಮಾರಾಟ ಮಾಡುವುದೇ ಉತ್ತಮ ಎನ್ನುವ ಕೆಲವು ಉದ್ಯಮಿಗಳ ಒತ್ತಾಯಕ್ಕೆ, ಮುಖ್ಯಮಂತ್ರಿಗಳು ರಾಜ್ಯದ ಕೈಗಾರಿಕಾ ನೀತಿಯನ್ನು ಅಚ್ಚುಕಟ್ಟಾಗಿ ವಿವರಿಸಿದ್ದು ಸಮಾವೇಶದ ಮೊದಲ ದಿನದ ಹೈಲೆಟ್ಸ್ ನಲ್ಲೊಂದು.
ಮೋದಿ ವಿರುದ್ದ ಹರಿಹಾಯಲು ರಾಹುಲ್ ಉಲ್ಲೇಖಿಸುತ್ತಿದ್ದ ಇಬ್ಬರು ಉದ್ಯಮಿಗಳು ಸಮಾವೇಶದಲ್ಲಿ, ಮುಂದೆ ಓದಿ..
ಸಿದ್ದು ಸರಕಾರದ ಆಮಂತ್ರಣ
ಸಿದ್ದರಾಮಯ್ಯ ಸರಕಾರದ ಆಮಂತ್ರಣಕ್ಕೆ ಮುಂಬೈ ಮತ್ತು ಅಹಮದಾಬಾದ್ ನಿಂದ ಆಗಮಿಸಿದ ಇಬ್ಬರು ಉದ್ಯಮಿಗಳು, ಉದ್ಘಾಟನಾ ಸಮಾವೇಶದ ವೇದಿಕೆ ಮತ್ತು ನಂತರದ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದರು.
ಗೌತಮ್ ಅದಾನಿ
ರಾಹುಲ್ ಗಾಂಧಿ ಪದೇ ಪದೇ ಅದಾನಿ ಗ್ರೂಪ್ ಮಾಲೀಕರಾದ ಗೌತಮ್ ಅದಾನಿ ಹೆಸರನ್ನು ಮೋದಿ ವಿರುದ್ದ ಟೀಕಿಸಲು ಬಳಸುತ್ತಿದ್ದರು. ಉಡುಪಿ ಪವರ್ ಪ್ಲ್ಯಾಂಟ್ ಸೇರಿದಂತೆ ಉದ್ಯಮ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿರುವ ಅದಾನಿ, ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಭಾಗವಹಿಸಿದ್ದರು.
ರಿಲಯನ್ಸ್ ಗ್ರೂಪ್
ರಿಲಯನ್ಸ್ ಗ್ರೂಪಿನ ಮಾಲೀಕ ಅನಿಲ್ ಅಂಬಾನಿ ಕೂಡಾ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅದಾನಿ ಮತ್ತು ಅಂಬಾನಿ ಉದ್ಯಮಿಗಳ ಮೇಲೆ ಮೋದಿಗೆ ವಿಶೇಷ ಪ್ರೇಮ ಎಂದು ರಾಹುಲ್ ಗಾಂಧಿ ಹಲವಾರು ಬಾರಿ ವ್ಯಂಗ್ಯವಾಡಿದ್ದರು. ಈ ಇಬ್ಬರೂ ಉದ್ಯಮಿಗಳು ಸಿದ್ದು ಸರಕಾರದ ಆಮಂತ್ರಣದ ಮೇರೆಗೆ ಆಗಮಿಸಿದ್ದರು.
ಮೋದಿಯದ್ದು ಸೂಟುಬೂಟು ಸರಕಾರ
ಮೋದಿಯದ್ದು ಬರೀ ಮಾತು, ಅವರದ್ದು ಸೂಟುಬೂಟಿನ ಸರಕಾರ. ರೈತರ ಮತ್ತು ಬಡವರ ಬಗ್ಗೆ ಮೋದಿಗೆ ಕಾಳಜಿಯಿಲ್ಲ, ಇಬ್ಬರು ಉದ್ಯಮಿಗಳು ಇನ್ನಷ್ಟು ಶ್ರೀಮಂತರಾಗಲು ಮೋದಿ ಸಹಾಯ ಮಾಡುತ್ತಿದ್ದಾರೆಂದು ರಾಹುಲ್ ಆರೋಪಿಸುತ್ತಿದ್ದರು.
ಅದಾನಿ, ಅಂಬಾನಿ
ರಾಜಕೀಯ ಬೇರೆ, ಅಭಿವೃದ್ದಿ ಬೇರೆ ಎನ್ನುವ ಹಾಗೇ, ಈ ವಿಚಾರದಲ್ಲಿ ಮುತ್ಸದ್ದಿತನ ತೋರಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಉದ್ಯಮಿಗಳಿಗೆ ಆಮಂತ್ರಣ ಕಳುಹಿಸಿದ್ದರು. ಕೇಂದ್ರದಿಂದ ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ಅನಂತಕುಮಾರ್ ಮುಂತಾದ ಸಚಿವರು ಸಮಾವೇಶದಲ್ಲಿ ಭಾಗವಹಿಸಿದ್ದರು.