ವಿಶ್ವಸಂಸ್ಥೆ ವರದಿ: ರಾಜ್ಯಾದ್ಯಂತ ಹೈಅಲರ್ಟ್ ಘೋಷಣೆ!
ಬೆಂಗಳೂರು, ಜು. 27: ಕೊರೊನಾವೈರಸ್ ಸಂಕಷ್ಟದ ಮಧ್ಯೆ ರಾಜ್ಯದ ಮೇಲೆ ಭಯೋತ್ಪಾದಕರ ಕರಿನೆರಳು ಬಿದ್ದಿದೆ. ದಕ್ಷಿಣ ಭಾರತದಲ್ಲಿ ವಿವಿಧ ಭಯೋತ್ಪಾದನಾ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ವಿಶ್ವಸಂಸ್ಥೆ ವರದಿ ಬಿಡುಗಡೆ ಮಾಡಿದೆ. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ವಿಶ್ವಸಂಸ್ಥೆಯ ವರದಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.
Recommended Video
ಕರ್ನಾಟಕ ಮತ್ತು ಕೇರಳದಲ್ಲಿ ಐಸಿಸ್ ಭಯೋತ್ಪಾದಕ ಸಂಘಟನೆ ಸಕ್ರಿಯವಾಗಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿ ಸರ್ಕಾರದ ಗಮನಕ್ಕೆ ಬಂದಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಎಟಿಎಸ್ ತಂಡದ ಜೊತೆ ಸೇರಿಕೊಂಡು ಕಾರ್ಯಾಚರಣೆ ಮಾಡುತ್ತೇವೆ ಎಂದರು. ಈಗಾಗಲೇ ತಮಿಳುನಾಡು ಮತ್ತು ಕೇರಳ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಈ ಕುರಿತು ಮಾಧ್ಯಮಗಳ ಮುಂದೆ ಎಲ್ಲಾ ಮಾಹಿತಿ ಹಂಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದರು.
ಉಗ್ರ ಸಂಘಟನೆ ಸೇರಿದವರಲ್ಲಿ ಕರ್ನಾಟಕ, ಕೇರಳದವರೇ ಹೆಚ್ಚು!
ಭಯೋತ್ಪಾದನಾ ವಿದ್ವಂಸಕ ಕೃತ್ಯಗಳ ಬಗ್ಗೆ ವಿಶ್ವಸಂಸ್ಥೆ ವರದಿ ಬೆನ್ನಲ್ಲೆ ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಆಂತರಿಕ ಭದ್ರತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಡಿಜಿ, ಐಪಿಜಿ ಪ್ರವೀಣ್ ಸೂದ್ ಅವರಿಗೆ ಸೂಚಿಸಿದ್ದಾರೆ.
ಬೆಂಗಳೂರು ಟಾರ್ಗೆಟ್!
ಕರ್ನಾಟಕದಲ್ಲಿ ಬೆಂಗಳೂರು ಭಯೋತ್ಪಾದಕ ಟಾರ್ಗೆಟ್ ಎಂದು ತಿಳಿದು ಬಂದಿದೆ. ಹೀಗಾಗಿ ಬೆಂಗಳೂರಿನಲ್ಲಿ ಹೈಅಲರ್ಟ್ ಘೊಷಣೆ ಮಾಡಲಾಗಿದೆ. ಸೂಕ್ತ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ತನಿಖಾ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂಬ ಮಾಹಿತಿಯಿದೆ.
ಬೆಂಗಳೂರಿಗೆ ಕೇರಳ ಹಾಗೂ ತಮಿಳುನಾಡು ಸಮೀಪದಲ್ಲಿರುವುದರಿಂದ ಮೂರು ರಾಜ್ಯಗಳು ಸೇರಿ ಕಾರ್ಯಾಚರಣೆ ಮಾಡುತ್ತೇವೆ. ಇದುವರೆಗೆ ಭಯೋತ್ಪಾದಕರು ಪ್ರಯತ್ನಪಟ್ಟರೂ ಸಹ ಯಾವುದೇ ಭಯೋತ್ಪಾದನಾ ಚಟುವಟಿಕೆಗೆ ಅವಕಾಶ ಕೊಟ್ಟಿಲ್ಲ. ಉಗ್ರ ಚಟುವಟಿಕೆಗಳ ತಡೆಗೆ ನಿರಂತರವಾಗಿ ನಾವು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ಮಾಡುತ್ತಿದ್ದಾರೆ. ನಮಗೂ ಅವಕಾಶ ಸಿಕ್ಕರೆ ನಾವು ಭಾಗವಹಿಸಿ ಈ ಕುರಿತು ಚರ್ಚೆ ನಡೆಸುತ್ತೇವೆ ಎಂದರು.
ಅಲ್-ಹಿಂದ್ ಬಂಧನ
ಕಳೆದ ಆರು ತಿಂಗಳುಗಳ ಹಿಂದೆ ಅಂದರೆ ಜನವರಿ 2020ರಲ್ಲಿ ಅಲ್-ಹಿಂದ್ ಎಂಬ ಭಯೋತ್ಪಾದಕರ ಗುಂಪನ್ನು ಪತ್ತೆಹಚ್ಚಿ, ಕ್ರಮಕೈಗೊಳ್ಳಲಾಗಿದೆ. ಆ ಗುಂಪಿನ ಹಲವರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಜೆ.ಎಂ.ಬಿ. ಎಂಬ ಮತ್ತೊಂದು ಭಯೋತ್ಪಾದಕರ ಗುಂಪನ್ನು 2018-19ರಲ್ಲಿಯೇ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಈ ಎರಡೂ ಗುಂಪುಗಳ ಪ್ರಕರಣಗಳನ್ನು ಎನ್ಐಎಗೆ ವಹಿಸಲಾಗಿದೆ ಎಂದು ಗೃಹಸಚಿವರು ತಿಳಿಸಿದ್ದಾರೆ.
ಬರುವವರ ಮೇಲೆ ನಿಗಾ
ವಿವಿಧ ರೂಪಗಳಲ್ಲಿ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ತೀವ್ರ ನಿಗಾವಹಿಸಲು ರಾಜ್ಯ ಗೃಹ ಇಲಾಖೆ ಸೂಚಿಸಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಸಂಘಟನೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಜೊತೆಗೆ ಹೆಸರು ಬದಲಿಸಿಕೊಂಡು ಚಟುವಟಿಕೆ ಆರಂಭಿಸುವ ಸಂಘಟನೆಗಳ ಮೇಲೆಯೂ ಗೃಹ ಇಲಾಖೆ ಕಟ್ಟುನಿಟ್ಟಿನ ನಿಗಾ ಇಡುವಂತೆ ಸೂಚನೆ ಕೊಟ್ಟಿದೆ.
ಇತ್ತೀಚೆಗೆ ನಡೆದ ದಕ್ಷಿಣ ಭಾರತದ ರಾಜ್ಯಗಳ ಡಿ.ಜಿ.ಪಿ. ಸಮ್ಮೇಳನದಲ್ಲಿ ಚರ್ಚಿಸಿ, ಎಲ್ಲಾ ರಾಜ್ಯಗಳ ಸಹಯೋಗದಲ್ಲಿ ಯೋತ್ಪಾದನಾ ಚಟುವಟಿಕೆಗಳ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.
ವರದಿ ಕೊಡಲು ಸೂಚನೆ
ಇನ್ನು ವಿಶ್ವಸಂಸ್ಥೆ ವರದಿ ಬೆನ್ನಲ್ಲೆ ರಾಜ್ಯದ ಆಂತರಿಕ ಭದ್ರತೆಯ ಬಗ್ಗೆ ಸಮಗ್ರ ವರದಿ ಕೊಡುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಡಿಜಿ, ಐಪಿಜಿ ಪ್ರವೀಣ್ ಸೂದ್ ಅವರಿಗೆ ಸೂಚಿಸಿದ್ದಾರೆ.
ಆಂತರಿಕ ಭದ್ರೆತೆಯನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯ ಗೃಹ ಇಲಾಖೆ ವರದಿ ಕೇಳಿದೆ. ಯು.ಎನ್. ವರದಿಯಲ್ಲಿ ದಕ್ಷಿಣ ಭಾರತದಲ್ಲಿನ ಭಯೋತ್ಪಾದಕ ಸಂಘಟನೆಗಳ ಬಗ್ಗೆ ತಿಳಿಸಿದ್ದಾರೆ. ವರದಿಯನ್ವಯ ರಾಜ್ಯ ಗೃಹ ಇಲಾಖೆ ಕೇಂದ್ರದ ವಿವಿಧ ತನಿಖಾ ಸಂಸ್ಥೆಗಳೊಂದಿಗೆ ಹಾಗೂ ಗಡಿಗೆ ಹೊಂದಿಕೊಂಡಂತಿರುವ ರಾಜ್ಯಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ. ಜೊತೆಗೆ ಸಂಶಯಾಸ್ಪದ ಚಟುವಟಿಕೆಗಳನ್ನು ನಡೆಸುತ್ತಿರುವವರ ಬಗ್ಗೆ, ಅವರಿಗೆ ಬೆಂಬಲ ಕೊಡುವವರ ಬಗ್ಗೆ ತೀವ್ರ ನಿಗಾ ಇಡಲಾಗಿದೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.