ಬಿಎಸ್ವೈ ಸರ್ಕಾರಕ್ಕೆ ಹಿನ್ನಡೆ: ಶಾಸಕರು, ಸಚಿವರ ವಿರುದ್ಧದ ಪ್ರಕರಣ ಕೈಬಿಡುವ ನಿರ್ಧಾರಕ್ಕೆ ತಡೆ
ಬೆಂಗಳೂರು, ಡಿಸೆಂಬರ್ 21: ರಾಜ್ಯದ ಬಿಜೆಪಿ ಶಾಸಕರು ಮತ್ತು ಸಚಿವರ ವಿರುದ್ಧದ ವಿವಿಧ ಅಪರಾಧ ಪ್ರಕರಣಗಳನ್ನು ಕೈಬಿಡುವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಚುನಾಯಿತ ಜನಪ್ರತಿನಿಧಿಗಳು ಮತ್ತು ಸಚಿವರ ವಿರುದ್ಧದ 61 ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ಕೈಬಿಡುವ ಸಂಬಂಧ ಆಗಸ್ಟ್ 31ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಸೋಮವಾರ ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಒಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. '2020ರ ಆಗಸ್ಟ್ 31ರಂದು ಹೊರಡಿಸಿದ ಆದೇಶಕ್ಕೆ ಅನುಗುಣವಾಗಿ ಮುಂದಿನ ಯಾವ ಹೆಜ್ಜೆ ತೆಗೆದುಕೊಳ್ಳುವಂತೆ ನಾವು ನಿರ್ದೇಶಿಸುತ್ತಿದ್ದೇವೆ' ಎಂದು ಪೀಠ ಹೇಳಿತು.
ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ
ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ 321ನೇ ಸೆಕ್ಷನ್ ಅಡಿಯಲ್ಲಿ 61 ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ಹಿಂದಕ್ಕೆ ಪಡೆದುಕೊಳ್ಳಲು ಆಗಸ್ಟ್ 31ರಂದು ರಾಜ್ಯ ಸರ್ಕಾರ ಅನುಮತಿ ಮಂಜೂರು ಮಾಡಿತ್ತು. ಇದನ್ನು 'ಪೀಪಲ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್' ಹೈಕೋರ್ಟ್ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದೆ. ಮುಂದೆ ಓದಿ.
ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಅವಕಾಶ
ಈ ಸಂಬಂಧ ಆಕ್ಷೇಪಣೆಗಳಿದ್ದರೆ 2021ರ ಜನವರಿ 22ರ ಒಳಗೆ ತನ್ನ ಹೇಳಿಕೆಗಳನ್ನು ದಾಖಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು 2021ರ ಜನವರಿ 29ಕ್ಕೆ ನಿಗದಿಗೊಳಿಸಿದೆ. ಈ ನಿರ್ಧಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಡಿಜಿ, ಐಜಿಪಿ ಕಚೇರಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಕಾನೂನು ಇಲಾಖೆಗಳು ವಿರೋಧ ವ್ಯಕ್ತಪಡಿಸಿದ್ದವು.
ಕರ್ತವ್ಯದ ವ್ಯಾಪ್ತಿಯಲ್ಲಿ ನಿರ್ಣಯ
ಹಿಂದಿನ ವಿಚಾರಣೆಯಲ್ಲಿ ಆದೇಶ ನೀಡಿದ್ದ ಹೈಕೋರ್ಟ್, 'ತನಿಖೆಯಿಂದ ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಳ್ಳುವ ಅಂತಹ ನಿರ್ಧಾರಕ್ಕೆ ಯಾವ ನ್ಯಾಯಾಲಯವೂ ಒಳಪಡುವುದಿಲ್ಲ. ಸಿಆರ್ಪಿಸಿಯ 321ನೇ ಸೆಕ್ಷನ್ ಅಡಿ ಕೂಡ ಅರ್ಜಿ ಸಲ್ಲಿಸಿದಾಗ ಮೇಲ್ನೋಟದಲ್ಲಿ ಅದು ಕಂಡುಬಂದರೂ ಅಥವಾ ಕಾಣಿಸದಿದ್ದರೂ ನ್ಯಾಯಾಲಯ ತನ್ನ ಕರ್ತವ್ಯದ ವ್ಯಾಪ್ತಿಯಲ್ಲಿ ನಿರ್ಣಯಿಸುತ್ತದೆ' ಎಂದು ಹೇಳಿತ್ತು.
ವಿವಾಹಿತೆ ಎಂಬ ಕಾರಣಕ್ಕೆ ಮಗಳಿಗೆ ಅನುಕಂಪದ ನೇಮಕಾತಿ ನಿರಾಕರಿಸುವಂತಿಲ್ಲ: ಹೈಕೋರ್ಟ್
ಪ್ರತಾಪ್ ಸಿಂಹ ಪ್ರಕರಣ
ಮೈಸೂರು ಸಂಸದ ಪ್ರತಾಪ್ ಸಿಂಹ, ಸಚಿವರಾದ ಸಿ.ಟಿ. ರವಿ, ಬಿಸಿ ಪಾಟೀಲ್, ಜೆ.ಸಿ ಮಾಧುಸ್ವಾಮಿ, ಶಾಸಕ ರೇಣುಕಾಚಾರ್ಯ ಸೇರಿದಂತೆ ಅನೇಕ ನಾಯಕರು ಮತ್ತು ಅವರ ಬೆಂಬಲಿಗರ ವಿರುದ್ಧದ ಕೇಸ್ಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ನಿರ್ಧರಿಸಲಾಗಿತ್ತು. 2017ರಲ್ಲಿ ಹುಣಸೂರಿನಲ್ಲಿ ಹನುಮ ಜಯಂತಿ ವೇಳೆ ನಿಷೇಧಾಜ್ಞೆ ಇದ್ದರೂ ಮೈಸೂರು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮೇಲೆ ಪ್ರತಾಪ್ ಸಿಂಹ ವೇಗವಾಗಿ ಕಾರು ನುಗ್ಗಿಸಿದ್ದ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ರೇಣುಕಾಚಾರ್ಯ ಬೆಂಬಲಿಗರು
ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ರೇಣುಕಾಚಾರ್ಯ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊನ್ನಾಳಿಯಲ್ಲಿ ಸಂಘರ್ಷ ನಡೆದಿತ್ತು. ಆಗ ರೇಣುಕಾಚಾರ್ಯ ಬೆಂಬಲಿಗರು ಇಬ್ಬರಿಗೆ ಚಾಕುವಿನಿಂದ ಇರಿದಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಸಹ ಕೈಬಿಡಲು ಸರ್ಕಾರ ನಿರ್ಧರಿಸಿತ್ತು.