ಅರಣ್ಯ ಖಾತೆ ವಿವಾದ; ಆನಂದ್ ಸಿಂಗ್ ವಿರುದ್ಧದ ಪಿಐಎಲ್ ವಜಾ
ಬೆಂಗಳೂರು, ಫೆಬ್ರವರಿ 25 : ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ, ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ ಸಲ್ಲಿಕೆಯಾಗಿದ್ದ ಪಿಐಎಲ್ ವಜಾಗೊಂಡಿದೆ. ಆನಂದ್ಗೆ ಅರಣ್ಯ ಖಾತೆಯ ಉಸ್ತುವಾರಿ ವಹಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಮಂಗಳವಾರ ಆನಂದ್ ಸಿಂಗ್ ವಿರುದ್ಧ ಸಲ್ಲಿಕೆಯಾಗಿದ್ದ ಪಿಐಎಲ್ ಅನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ವಕೀಲ ವಿಜಯ್ ಕುಮಾರ್ ಎಂಬುವವರು ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿರುವುದು ಸರಿಯಲ್ಲ ಎಂದು ಪಿಐಎಲ್ ಸಲ್ಲಿಸಿದ್ದರು.
ಆನಂದ್ ಸಿಂಗ್ ಪ್ರಕರಣವನ್ನು ಮುಚ್ಚಿಹಾಕಲ್ಲವೆಂದ ಸಚಿವ ಸೋಮಶೇಖರ್
ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿರುವುದಕ್ಕೆ ಪ್ರತಿಪಕ್ಷಗಳು ಸಹ ವಿರೋಧ ವ್ಯಕ್ತಪಡಿಸಿದ್ದವು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿವಿಧ ಕಾಂಗ್ರೆಸ್ ನಾಯಕರು ಆನಂದ್ ಸಿಂಗ್ ರಾಜೀನಾಮೆ ಪಡೆಯಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರು.
ಸರ್ಕಾರ ಕುರಿ ಕಾಯಲು ತೋಳವನ್ನು ಬಿಟ್ಟಂತೆ ಆಗಿದೆ
ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿ ಆನಂದ್ ಸಿಂಗ್ ಸಂಪುಟಕ್ಕೆ ಸೇರಿಸಿಕೊಂಡಾಗ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಿದ್ದರು. ಬಳಿಕ ಖಾತೆಯನ್ನು ಬದಲಾವಣೆ ಮಾಡಿ ಬಿ. ಸಿ. ಪಾಟೀಲ್ ಅವರ ಬಳಿ ಇದ್ದ ಅರಣ್ಯ ಖಾತೆಯನ್ನು ಆನಂದ್ ಸಿಂಗ್ಗೆ ನೀಡಲಾಗಿತ್ತು.
ಕುರಿ ಕಾಯೋ ತೋಳ ಅಂದ್ರೆ ಸಂಬಳ ಬೇಡ ಅಂತು: ಸಿದ್ದರಾಮಯ್ಯ
ಪಿಐಎಲ್ನಲ್ಲಿ ಮನವಿ ಏನಾಗಿತ್ತು?
ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ ಪ್ರಸ್ತುತ 16 ಪ್ರಕರಣಗಳಿವೆ. ಲೋಕಾಯುಕ್ತ ದಾಖಲು ಮಾಡಿರುವ ಪ್ರಕರಣಗಳಿಗೆ ಹೈಕೋರ್ಟ್ನಿಂದ ತಡೆಯಾಜ್ಞೆ ಮಾತ್ರ ಸಿಕ್ಕಿದೆ. ಯಾವುದೇ ಪ್ರಕರಣದಲ್ಲಿ ಅವರು ಖುಲಾಸೆಗೊಂಡಿಲ್ಲ. ಸಿಬಿಐ ದಾಖಲು ಮಾಡಿರುವ ಪಕರಣದಲ್ಲಿ ಅವರು ಜೈಲುವಾಸ ಅನುಭವಿಸಿ ಬಂದಿದ್ದಾರೆ. ಹೀಗಿರುವಾಗ ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿರುವುದು ಸರಿಯಲ್ಲ ಎಂದು ವಕೀಲ ವಿಜಯ್ ಕುಮಾರ್ ಮನವಿ ಮಾಡಿದ್ದರು.
ಸಿದ್ದರಾಮಯ್ಯ ಸಹ ವಿರೋಧಿಸಿದ್ದರು
ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿರುವುದಕ್ಕೆ ಕಾಂಗ್ರೆಸ್ ಸಹ ವಿರೋಧ ವ್ಯಕ್ತಪಡಿಸಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಕುರಿತು ಪ್ರತಿಕ್ರಿಯೆ ನೀಡಿದ್ದರು. "ಆನಂದ್ ಸಿಂಗ್ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲಾಗಿದೆ. ಅರಣ್ಯ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಇವೆ. ಅಂತಹವರಿಗೆ ಅರಣ್ಯ ಇಲಾಖೆ ಕೊಟ್ಟರೆ ಏನಾಗುತ್ತದೆ?" ಎಂದು ಪ್ರಶ್ನೆ ಮಾಡಿದ್ದರು.
ಆನಂದ್ ಸಿಂಗ್ ಹೇಳಿದ್ದೇನು?
ಅರಣ್ಯ ಖಾತೆ ಬಗ್ಗೆ ಉಂಟಾಗಿದ್ದ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದ ಆನಂದ್ ಸಿಂಗ್, "ನಮ್ಮದು ಗಣಿ ಕುಟುಂಬ. ಗಣಿ ಅಂದ ಮೇಲೆ ಅರಣ್ಯ ಉಲ್ಲಂಘನೆ ಪ್ರಕರಣಗಳು ಸಹಜ. ವಾಹನ ಇದ್ದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಇದ್ದಂತೆ" ಎಂದು ಹೇಳಿದ್ದರು.
ವರದಿ ಕೇಳಿದ್ದ ಹೈಕಮಾಂಡ್
ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಹೈಕಮಾಂಡ್ ಈ ಕುರಿತು ರಾಜ್ಯ ಬಿಜೆಪಿ ಘಟಕದಿಂದ ವರದಿ ಕೇಳಿತ್ತು. ಈಗ ಹೈಕೋರ್ಟ್ ಪಿಐಎಲ್ ವಜಾಗೊಳಿಸಿದ್ದು, ಆನಂದ್ ಸಿಂಗ್ ನಿರಾಳರಾಗಿದ್ದಾರೆ.