ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಬಿಜೆಪಿಯಲ್ಲಿ 'ಮೂಕಹಕ್ಕಿ'ಯಾದ ಕಥೆ
ರಾಜಕೀಯದಲ್ಲಿ ಪಳಗಿದವರಿಗೆ ಕೆಲವೊಂದು ಒಳಗುಟ್ಟು, ಚುನಾವಣೆ, ಉಪಚುನಾವಣೆಯಲ್ಲಿ ಏನಾಗಬಹುದು ಎನ್ನುವ ಅರಿವಿರುತ್ತದೆ. ಅವರ ಸಲಹೆಯನ್ನು ತಿರಸ್ಕರಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಬಿಜೆಪಿಯ ಹಿರಿಯ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಉದಾಹರಣೆಯಾಗಬಲ್ಲರು.
ಹುಣಸೂರು ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಣಕ್ಕೆ ಇಳಿಯಬೇಡಿ, ಕ್ಷೇತ್ರದಲ್ಲಿ ನಿಮಗೆ ಪೂರಕವಾದ ವಾತಾವರಣ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪರಿಪರಿಯಾಗಿ ಹೇಳಿದ್ದರೂ, ವಿಶ್ವನಾಥ್ ಹಠಕ್ಕೆ ಬಿದ್ದು ಕಣಕ್ಕಿಳಿದಿದ್ದರು.
ಹೈಕೋರ್ಟ್ ತೀರ್ಪು: ಮುಂದಿನ ನಡೆಯ ಗುಟ್ಟು ಬಿಟ್ಟುಕೊಟ್ಟ ಎಚ್. ವಿಶ್ವನಾಥ್!
ಚುನಾವಣೆಯ ಫಲಿತಾಂಶ ಯಡಿಯೂರಪ್ಪನವರ ನಿರೀಕ್ಷೆಯಂತೆ ಬಂತು. ಕಾಂಗ್ರೆಸ್ಸಿನ ಎಚ್.ಮಂಜುನಾಥ್ ಅವರು ವಿಶ್ವನಾಥ್ ಅವರನ್ನು ಸುಮಾರು ನಲವತ್ತು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಯಾವುದೇ ವಿಧಾನಸಭಾ ಚುನಾವಣೆಯಲ್ಲಿ ಇದು ಅಗಾಧ ಅಂತರದ ಗೆಲುವು ಎಂದೇ ಹೇಳಬಹುದು.
ಅಂದು ಯಡಿಯೂರಪ್ಪನವರ ಮಾತನ್ನು ಕೇಳದೇ, ಈಗ ಚುನಾವಣಾ ಸೋಲಿಗೆ ಅವರು ಕಾರಣ, ಇವರು ಕಾರಣ ಎಂದು ಹೇಳಿಕೆ ನೀಡುತ್ತಿರುವ ಎಚ್.ವಿಶ್ವನಾಥ್ ಗೆ ಹೈಕೋರ್ಟ್ ಭಾರೀ ಶಾಕ್ ನೀಡಿದೆ. ವಿಶ್ವನಾಥ್ ಅವರು ನಾಮನಿರ್ದೇಶನಗೊಂಡ ವಿಧಾನಪರಿಷತ್ ಸದಸ್ಯರಾಗಿರುವುದರಿಂದ ಅವರು ಮಂತ್ರಿಯಾಗುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಹೈಕೋರ್ಟ್ ನೀಡಿದ ತೀರ್ಪು
ಮೇಲ್ನೋಟಕ್ಕೆ ಇದು ಬಿಜೆಪಿಗೆ ಹಿನ್ನಡೆಯಾದರೂ, ಮುಖ್ಯಮಂತ್ರಿ ಅಥವಾ ಬಿಜೆಪಿ, ಕೋರ್ಟ್ ಆದೇಶದಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಬದಲಿಗೆ, ಈ ತೀರ್ಪು ಬಿಜೆಪಿ ಮತ್ತು ಸಿಎಂ ಬಿಎಸ್ವೈಗೆ ವರದಾನವೇ ಆಗಿದೆ. ಮೇಲಿಂದ ಮೇಲೆ, ಸಚಿವ ಸ್ಥಾನಕ್ಕೆ ದಂಬಾಲು ಬೀಳುತ್ತಿದ್ದ ವಿಶ್ವನಾಥ್ ಅವರ ಒತ್ತಡದಿಂದ ಮುಖ್ಯಮಂತ್ರಿಗಳಿಗೆ ಮುಕ್ತಿ ಸಿಕ್ಕಂತಾಗಿದೆ.
ಆಪರೇಶನ್ ಕಮಲ
ಆಪರೇಶನ್ ಕಮಲ ಆರಂಭವಾದ ದಿನದಿಂದ ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದ ಎಚ್.ವಿಶ್ವನಾಥ್ ಗೆ ಎಂ.ಟಿ.ಬಿ ನಾಗರಾಜ್ ಮತ್ತು ಆರ್.ಶಂಕರ್ ಜೊತೆ, ಪರಿಷತ್ ಚುನಾವಣೆಗೆ ಬಿಜೆಪಿ ಟಿಕೆಟ್ ಸಿಕ್ಕಿರಲಿಲ್ಲ. ಆದರೂ, ಹಠ ಹಿಡಿದು ಸಾಹಿತಿ ಕೋಟಾದಿಂದ ಪರಿಷತ್ತಿಗೆ ವಿಶ್ವನಾಥ್ ನಾಮನಿರ್ದೇಶನಗೊಂಡರು.
ವಿಶ್ವನಾಥ್ ಜೊತೆಗಿದ್ದ ರಮೇಶ್ ಜಾರಕಿಹೊಳಿ, ಸೋಮಶೇಖರ್
ಅಂದು ಎಚ್.ವಿಶ್ವನಾಥ್ ಜೊತೆಗಿದ್ದ ರಮೇಶ್ ಜಾರಕಿಹೊಳಿ, ಸೋಮಶೇಖರ್, ಡಾ.ಸುಧಾಕರ್ ಆಗಲಿ ಈಗ ತಟಸ್ಥರಾಗಿದ್ದಾರೆ. ಕೋರ್ಟ್ ತೀರ್ಪಿನ ವಿರುದ್ದ ಮಾತನಾಡಲೂ ಆಗದೆ, ಯಾರೂ ವಿಶ್ವನಾಥ್ ಪರವಾಗಿ ನಿಂತಿಲ್ಲ ಎನ್ನುವುದು ಸ್ಪಷ್ಟ. ಕೋರ್ಟ್ ತೀರ್ಪು ಬರುವುದಕ್ಕಿಂತ ಮುಂಚಿತವಾಗಿಯೂ ಆಪರೇಶನ್ ಕಮಲ ಮಂಡಳಿ ಸದಸ್ಯರು ಎಚ್.ವಿಶ್ವನಾಥ್ ಅವರ ಪರವಾಗಿ ಲಾಬಿ ನಡೆಸಿದವರಲ್ಲ.
Recommended Video
ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಬಿಜೆಪಿಯಲ್ಲಿ ಮೂಕಹಕ್ಕಿಯಾದ ಕಥೆ
ಒಟ್ಟಿನಲ್ಲಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಏನು ವಿಶ್ವನಾಥ್ ಗೆ ಅನರ್ಹ ಎನ್ನುವ ಪಟ್ಟವನ್ನು ಕಟ್ಟಿದ್ದರೋ, ಅದು ಇನ್ನೂ ಮುಂದುವರಿದಿದೆ. ಅಂದು ಮುಖ್ಯಮಂತ್ರಿಯವರ ಮಾತನ್ನು ಕೇಳಿ, ಚುನಾವಣೆಗೆ ಸ್ಪರ್ಧಿಸದೇ ಇದ್ದಿದ್ದರೆ, ಎಂಟಿಬಿ, ಶಂಕರ್ ರೀತಿಯಲ್ಲಿ ಪರಿಷತ್ತಿಗೆ ಚುನಾವಣೆಯ ಮೂಲಕವೇ ಆಯ್ಕೆಯಾಗಬಹುದಾಗಿತ್ತು. ಇದೇ ಭರವಸೆಯನ್ನು ಸಿಎಂ ನೀಡಿದ್ದದ್ದು ಕೂಡಾ.. ಸದ್ಯ, ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಬಿಜೆಪಿಯಲ್ಲಿ ಮೂಕಹಕ್ಕಿ.