ಟಿಪ್ಪು ಜಯಂತಿ ಆಚರಿಸುವ ಉದ್ದೇಶವೇನು: ಹೈಕೋರ್ಟ್ ಪ್ರಶ್ನೆ
ಬೆಂಗಳೂರು, ನವೆಂಬರ್, 2: ಟಿಪ್ಪು ಜಯಂತಿ ಆಚರಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರು ಪ್ರಶ್ನಿಸಿದ್ದು, ಟಿಪ್ಪು ಜಯಂತಿ ಹಿಂದಿನ ಉದ್ದೇಶವಾದರೂ ಏನು? ಎಂದು ವಿವರಣೆ ಕೇಳಿದ್ದಾರೆ.
ಬುಧವಾರ ಟಿಪ್ಪುಜಯಂತಿ ಆಚರಣೆ ಆಕ್ಷೇಪಿಸಿ ಮಂಜುನಾಥ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರು "ಟಿಪ್ಪು ಜಯಂತಿಯಿಂದ ರಾಜ್ಯಕ್ಕಾಗುವ ಪ್ರಯೋಜನವಾದರೂ ಏನು" ಎಂದು ಪ್ರಶ್ನಿಸಿದ್ದಾರೆ. [ಟಿಪ್ಪು ಜಯಂತಿ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ: ಮೋಹನ್ ದಾಸ್ ಪೈ]
"ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಹೇಗೆ ಪರಿಗಣಿಸುತ್ತೀರಿ? ಟಿಪ್ಪು ತನ್ನ ಸಂಸ್ಥಾನಕ್ಕಾಗಿ ಹೋರಾಡಿದ್ದಾರೆಯೇ ಹೊರತು ದೇಶಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿಲ್ಲ" ಎಂದು ಅಭಿಪ್ರಾಯ ಪಟ್ಟಿದ್ದಾರೆ. [ಟಿಪ್ಪು ಸುಲ್ತಾನ್ ನಿಜ ಇತಿಹಾಸ, ರಾಜಕಾರಣ ಹಾಗೂ ಸತ್ಯಾನ್ವೇಷಣೆ]
"ಬ್ರಿಟೀಷರ ವಿರುದ್ಧ ಇತರೆ ಸಂಸ್ಥಾನಗಳಂತೆ ಹೈದರಾಬಾದಿನ ನಿಜಾಮರೂ ಸಹ ಹೋರಾಡಿದ್ದಾರೆ. ಅವರನ್ನೂ ಸಹ ಸ್ವಾತಂತ್ರ್ಯ ಹೋರಾಟಗಾರರೆಂದು ಪರಿಗಣಿಸಲು ಸಾಧ್ಯವೇ?" ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಟಿಪ್ಪು ಜಯಂತಿ ಆಚರಣೆಯಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚು ತಲೆನೋವು ಎಂದು ಮುಖ್ಯನ್ಯಾಯಮೂರ್ತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಟಿಪ್ಪು ಜಯಂತಿ ಆಚರಣೆಯನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು "ಟಿಪ್ಪು ಜಯಂತಿ ಕಾನೂನು ಬಾಹಿರವಾಗಿದ್ದು, ಸರ್ಕಾರ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಿಸಬಾರದು" ಎಂದು ವಾದ ಮಂಡಿಸಿದ್ದಾರೆ.
ವಿಚಾರಣೆಯನ್ನು ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.