ಮೈಸೂರು ಲ್ಯಾಂಪ್ಸ್: ಅಂತಿಮ ಬೀಗ ಜಡಿದ ಕೋರ್ಟ್
ಬೆಂಗಳೂರು, ಜು 29: ರಾಜ್ಯ ಸರಕಾರಿ ಸ್ವಾಮ್ಯದ ಮೈಸೂರು ಲ್ಯಾಂಪ್ಸ್ ಕಾರ್ಖಾನೆಯನ್ನು ಮುಚ್ಚಲು ರಾಜ್ಯ ಉಚ್ಚ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಈ ಮೂಲಕ ದಶಕಗಳಿಂದ ಬಾಕಿ ಉಳಿದಿದ್ದ ಪ್ರಕರಣಕ್ಕೆ ನ್ಯಾಯಾಲಯ ಮಂಗಳ ಹಾಡಿದೆ.
ನಷ್ಟದಲ್ಲಿದ್ದ ಕಂಪೆನಿ ಮುಚ್ಚಲು ಜನವರಿ 2002ರಲ್ಲಿ ರಾಜ್ಯ ಸರಕಾರ ನಿರ್ಧರಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ. ರಾಮ ಮೋಹನ್ ರೆಡ್ಡಿ ಅವರಿದ್ದ ನ್ಯಾಯಪೀಠ ಮೈಸೂರು ಲ್ಯಾಂಪ್ಸ್ ಸಂಸ್ಥೆಯನ್ನು ಮುಚ್ಚಲು ತನ್ನ ಸಮ್ಮತಿ ಸೂಚಿಸಿದೆ.
ಕಂಪೆನಿಯ ಪುನಶ್ಚೇತನಕ್ಕೆ ಸರಕಾರಕ್ಕೆ ಹಲವು ಕಾಲಾವಕಾಶಗಳನ್ನು ಕೋರ್ಟ್ ನೀಡಿತ್ತು. ಆದರೆ ಸರಕಾರ ಸುಮ್ಮನೆ ಕಾಲಹರಣ ಮಾಡಿಕೊಂಡು ತನ್ನ ಪ್ರತಿಕ್ರಿಯೆ ನೀಡಲು ವಿಫಲವಾಗಿದೆ ಎಂದು ನ್ಯಾ. ರೆಡ್ಡಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಕಂಪೆನಿ ಮುಚ್ಚವ ಸಮಯದಲ್ಲಿ ಸುಮಾರು 1600 ನೌಕರರು ಇದ್ದರು. ಇದರಲ್ಲಿ ಹಲವಾರು ಸಿಬ್ಬಂದಿಗಳು ಸ್ವಯಂ ನಿವೃತ್ತಿಯನ್ನು ಪಡೆದಿದ್ದರೆ, ಮತ್ತಷ್ಟು ಜನರಿಗೆ ರಾಜ್ಯ ಸರಕಾರ ತನ್ನ ಇತರ ಇಲಾಖೆಯಲ್ಲಿ ನೌಕರಿ ನೀಡಿತ್ತು.
ಕೋರ್ಟ್ ಆದೇಶ ಹೊರಡಿಸಿದ ಸೋಮವಾರಕ್ಕೆ (ಜು 28), ಸಂಸ್ಥೆಯಲ್ಲಿ ಸುಮಾರು ನೂರು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಇವರನ್ನೆಲ್ಲಾ ಸರಕಾರ ತನ್ನ ಸೇವೆಗೆ ತೆಗೆದುಕೊಳ್ಳಲು ಕೋರ್ಟ್ ಆದೇಶ ನೀಡಿದೆ.
ಕೈಗಾರಿಕಾ ಹಣಕಾಸು ಮತ್ತು ಪುನರುಜ್ಜೀವನ ಸಂಸ್ಥೆ (ಬಿಐಎಫ್ಆರ್) ತೀರ್ಪಿಗೆ ಅನುಗುಣವಾಗಿ ರಾಜ್ಯ ಸರಕಾರ 2002ರಲ್ಲಿ ಮೈಸೂರು ಲ್ಯಾಂಪ್ಸ್ ಸಂಸ್ಥೆ ಮುಚ್ಚವ ತೀರ್ಮಾನ ಕೈಗೊಂಡಿತ್ತು.
ಮೈಸೂರು ಲ್ಯಾಂಪ್ಸ್ನಲ್ಲಿರುವ ಕೆಲಸಗಾರರನ್ನು ತೆಗೆದು ಹಾಕದೆ ಸ್ವಯಂ ನಿವೃತ್ತಿ ಯೋಜನೆಯನ್ನು ಸರಕಾರ ಘೋಷಿಸಿತ್ತು. ಸರಕಾರವೂ ಅನೇಕ ಬಾರಿ ಆರ್ಥಿಕ ನೆರವು ನೀಡಿದ್ದರೂ ಕಾರ್ಖಾನೆಯ ಆರ್ಥಿಕ ಸ್ಥಿತಿ ಸುಧಾರಿಸಿರಲಿಲ್ಲ.
ಒಂದು ಹಂತದಲ್ಲಿ ಖಾಸಗಿಯವರಿಗೆ ಈ ಕಾರ್ಖಾನೆಯನ್ನು ವಹಿಸಿಕೊಡಲು ಸರಕಾರ ಮುಂದೆ ಬಂದಿದ್ದರೂ ಯಾವುದೇ ಖಾಸಗಿ ಕಂಪೆನಿಗಳೂ ಖರೀದಿಗೆ ಆಸಕ್ತಿ ತೋರಿಸಿರಲಿಲ್ಲ. ಈ ಹಂತದಲ್ಲಿ ಮತ್ತೆ ಕಾರ್ಖಾನೆಯ ಪುನಶ್ಚೇತನ ಕಾರ್ಯಕ್ಕೆ ಕೈ ಹಾಕುವ ಸ್ಥಿತಿಯಲ್ಲಿ ಸರಕಾರ ಇಲ್ಲ ಎಂದು ತಿಳಿಸಿತ್ತು.