ಮತ್ತೊಂದು ಕೇಸ್ನಲ್ಲಿ ದಂಡುಪಾಳ್ಯ ಗ್ಯಾಂಗ್ ಖುಲಾಸೆ, ಬಿಡುಗಡೆ?
ಬೆಂಗಳೂರು, ಸೆಪ್ಟೆಂಬರ್ 04 : ಗೀತಾ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ದಂಡುಪಾಳ್ಯ ಗ್ಯಾಂಗ್ನ ಐವರು ಸದಸ್ಯರನ್ನು ಖುಲಾಸೆಗೊಳಿಸಲಾಗಿದೆ. ಅಪರಾಧಿಗಳ ಬಂಧನ ಅಗತ್ಯವಿಲ್ಲದಿದ್ದಲ್ಲಿ ಬಿಡುಗಡೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.
ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರಿದ್ದ ವಿಭಾಗೀಯ ಪೀಠ ಗೀತಾ (35) ಕೊಲೆ ಪ್ರಕರಣದಲ್ಲಿ ಐವರನ್ನು ಖುಲಾಸೆಗೊಳಿಸಿದೆ. ದೊಡ್ಡ ಹನುಮ, ವೆಂಕಟೇಶ, ಮುನಿಕೃಷ್ಣ, ನಲ್ಲತಿಮ್ಮ ಮತ್ತು ಲಕ್ಷ್ಮಮ್ಮ ಖುಲಾಸೆಯಾದವರು.
ದಂಡುಪಾಳ್ಯ ಗ್ಯಾಂಗ್ನ ಐವರನ್ನು ಖುಲಾಸೆಗೊಳಿಸಿದ ಹೈಕೋರ್ಟ್
ಇದೇ ಪ್ರಕರಣದಲ್ಲಿ ಮೃತ ಮಹಿಳೆಯ ಒಡೆವೆ ದೋಚಿದ ಅಪರಾಧಕ್ಕೆ ತಂಡದ ನಾಲ್ವರಿಗೆ 7 ವರ್ಷ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಲಕ್ಷ್ಮಮ್ಮ ಖುಲಾಸೆಗೊಂಡಿದ್ದಾರೆ.
ಏನಿದು ಪ್ರಕರಣ? : ನವೆಂಬರ್ 7, 2000ದಂದು ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ವಾಸವಿದ್ದ ಜಯರಾಮಯ್ಯ ಅವರ ಪತ್ನಿ ಗೀತಾ ಅವರ ಚಿನ್ನಾಭರಣ ದೋಚಿ ಅವರನ್ನು ಹತ್ಯೆ ಮಾಡಿದ ಆರೋಪ ದಂಡುಪಾಳ್ಯ ಗ್ಯಾಂಗ್ ಸದಸ್ಯರ ಮೇಲಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಅಪರಾಧ ಸಾಬೀತಾಗಿದೆ ಎಂದು ಗಲ್ಲು ಶಿಕ್ಷೆ ವಿಧಿಸಿತ್ತು. ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಹೈಕೋರ್ಟ್ ಗಲ್ಲು ಶಿಕ್ಷೆ ತೃಪ್ತಿಕರವಾಗಿಲ್ಲ. ಪುನಃ ವಿಚಾರಣೆ ನಡೆಸಿ ಎಂದು ಸೂಚಿಸಿತ್ತು.
ಕುಖ್ಯಾತ ದಂಡುಪಾಳ್ಯ ಗ್ಯಾಂಗ್ನ ಐವರಿಗೆ ಜೀವಾವಧಿ ಶಿಕ್ಷೆ
ಪುನಃ ವಿಚಾರಣೆ ನಡೆಸಿದ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು. ಅಪರಾಧಿಗಳು ಈ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಚಿನ್ನಾಭರಣ ದೋಚಿದ್ದಕ್ಕೆ ಮಾತ್ರ ಸಾಕ್ಷಿ ಇದೆ. ಕೊಲೆ ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿರುವ ಹೈಕೋರ್ಟ್ 5 ಜನರನ್ನು ಖುಲಾಸೆಗೊಳಿಸಿದೆ.
ಬೇರೆ ಪ್ರಕರಣದಲ್ಲಿ ಅಪರಾಧಿಗಳ ಬಂಧನ ಅಗತ್ಯವಿಲ್ಲದಿದ್ದಲ್ಲಿ ಕೂಡಲೇ ಬಿಡುಗಡೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಅಪರಾಧಿಗಳ ಪರವಾಗಿ ಹಷ್ಮತ್ ಪಾಷಾ ವಾದ ಮಂಡನೆ ಮಾಡಿದ್ದರು. ದಂಡುಪಾಳ್ಯ ಗ್ಯಾಂಗ್ ಸದಸ್ಯರ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳಿವೆ.