ಎಸಿಬಿ ರಚನೆ ರದ್ದು ವಿಚಾರ- ಕಾದು ನೋಡುವ ತಂತ್ರಕ್ಕೆ ಬೊಮ್ಮಾಯಿ ಸರ್ಕಾರ!
ಬೆಂಗಳೂರು, ಆಗಸ್ಟ್ 12: ಕರ್ನಾಟಕ ಹೈಕೋರ್ಟ್ ಎಸಿಬಿ ರಚನೆಯನ್ನು ರದ್ದು ಮಾಡಿ ಆದೇಶವನ್ನು ಹೊರಡಿಸಿದೆ. ಹೈಕೋರ್ಟ್ ಆದೇಶವನ್ನು ಕಾದು ನೋಡುವ ತಂತ್ರ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ. ಹೈಕೋರ್ಟ್ ಆದೇಶ ಪ್ರತಿಯನ್ನು ಸಂಪೂರ್ಣ ಓದಿ ಸಲಹೆಗಾರರು ನೀಡುವ ಸಲಹೆ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟದಲ್ಲಿ ಅಸ್ತು ಎನ್ನಲಾಗಿದೆ.
ಇನ್ನು ಆದೇಶವನ್ನು ಪ್ರಶ್ನಿಸಬೇಕೆಂದರೆ ಸರ್ಕಾರವೇ ಮೇಲ್ಮನವಿಯನ್ನು ಸಲ್ಲಿಸಬೇಕು. ಇಲ್ಲವೇ ಸುಪ್ರೀಂ ಮೊರೆಯನ್ನು ಹೋಗಬೇಕು. ಆದರೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಸಿಬಿ ರದ್ದು ಮಾಡಿ ಲೋಕಾಯುಕ್ತ ಬಲಪಡಿಸುವ ವಾಗ್ದಾನವನ್ನು ಮಾಡಿತ್ತು. ಇದೀಗ ಇಕ್ಕಟ್ಟಿಗೆ ಸಿಲುಕಿರೋ ಸರ್ಕಾರ ಕಾದು ನೋಡುವ ತಂತ್ರಕ್ಕೆ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.
ಎಸಿಬಿಯ ರಚನೆಯನ್ನು ಸಿದ್ದರಾಮಯ್ಯರವರ ಸರ್ಕಾರ ಮಾಡಿತ್ತು. ಲೋಕಾಯುಕ್ತ ಸಂಸ್ಥೆ ಎಸಿಬಿ ರಚನೆಯ ಬಳಿಕ ಹಲ್ಲು ಕಿತ್ತ ಹಾವಿನಂತಾಗಿತ್ತು. ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ಬಗ್ಗೆ ರಾಜ್ಯದ ಪ್ರಮುಖ ಮೂರು ಪಕ್ಷಗಳು ಬಾಯಿ ಮಾತಿನಲ್ಲಿ ಮಾತನಾಡುತ್ತಿದ್ದವೇ ವಿನಃ ಕೃತಿಯಲ್ಲಿ ಮಾಡುತ್ತಿರಲಿಲ್ಲ. ಮೂರು ಪಕ್ಷಕ್ಕೆ ಎಸಿಬಿ ರದ್ದು ಮಾಡುವುದು ಇಷ್ಟವಿರಲಿಲ್ಲ. ಇದಕ್ಕಾಗಿ ಕುಮಾರಸ್ವಾಮಿ ಸರ್ಕಾರವೂ ಮೌನವಹಿಸಿತ್ತು, ಯಡಿಯೂರಪ್ಪ ಸರ್ಕಾರವೂ ಮೌನ ವಹಿಸಿತ್ತು, ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದರು ಮೌನವನ್ನು ವಹಿಸಿತ್ತು. ಆದರೆ ಹೈಕೋರ್ಟ್ ತೀರ್ಪು ಮೂರು ಪಕ್ಷಕ್ಕೆ ಏನೂ ಮಾತನಾಡದ ಸ್ಥಿತಿಯನ್ನು ತಂದಿಟ್ಟಿದೆ.
ಕಾನೂನು ಸಚಿವರು, ಸಲಹೆಗಾರರು ಸಲಹೆ ಕೊಡ್ತಾರೆ
"ಎಸಿಬಿ ರಚನೆಯನ್ನು ರದ್ದು ಮಾಡಿರುವ ಹೈಕೋರ್ಟ್ ಆದೇಶದ ಪ್ರತಿಯನ್ನು ಸಂಪೂರ್ಣವಾಗಿ ತಿಳಿಯಬೇಕಿದೆ. ಕಾನೂನು ಸಚಿವರ ಮತ್ತು ಸಲಹೆಗಾರರು ಸಲಹೆಯನ್ನು ನೀಡುತ್ತಾರೆ. ನಾವು ಯಾವ ರೀತಿಯಲ್ಲಿ ಮುಂದುವರೆಯಬೇಕು ಎಂದು ಆ ಬಳಿಕ ತೀರ್ಮಾನಿಸುತ್ತೇವೆ. ಪ್ರಣಾಳಿಕೆ ಆಧಾರಿಸಿಯೇ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಸಭೆಯ ಬಳಿಕ ತಿಳಿಸಿದ್ದಾರೆ.
ಸರ್ಕಾರ ಮೇಲ್ಮನವಿಯನ್ನು ಸಲ್ಲಿಸಬೇಕು
ರಾಜ್ಯ ಬಿಜೆಪಿ ಸರ್ಕಾರ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ. ಒಂದೆಡೆ ಹೈಕೋರ್ಟ್ ಆದೇಶವನ್ನು ಪಾಲಿಸಬೇಕು, ಇಲ್ಲವೇ ಹೈಕೋರ್ಟ್ ಆದೇಶದ ವಿರುದ್ದ ಮೇಲ್ಮನವಿಯನ್ನು ಸಲ್ಲಿಸಬೇಕು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಕೆ ಮಾಡಿದರೇ ಜನರಿಗೆ ಕೊಟ್ಟಿದ್ದ ಪ್ರಣಾಳಿಕೆಯ ವಾಗ್ದಾನ ತಪ್ಪಿದಂತಾಗುತ್ತದೆ. ಇದಕ್ಕಾಗಿಯೇ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳದೇ ಕಾದು ನೋಡುವ ತಂತ್ರಕ್ಕೆ ಹೋಗಿದ್ದಾರೆ.
ಲೋಕಾಯುಕ್ತ ಸಂಸ್ಥೆಗೆ ಬೇಕಿರುವ ಸವಲತ್ತು ಕಲ್ಪಿಸಬೇಕು
ರಾಜ್ಯ ಬಿಜೆಪಿ ಸರ್ಕಾರ ಹೈಕೋರ್ಟ್ ಆದೇಶವನ್ನು ಒಪ್ಪಿಕೊಂಡಿದ್ದೇ ಆದರೆ ಲೋಕಾಯುಕ್ತ ಸಂಸ್ಥೆಗೆ ಮತ್ತಷ್ಟು ಅಧಿಕಾರವನ್ನು ನೀಡಬೇಕು. ಎಸಿಬಿಯನ್ನು ಲೋಕಾಯುಕ್ತದಲ್ಲಿ ಸೇರಿಸದ ಮೇಲೆ ಸಕಲ ಸವಲತ್ತನ್ನು ನೀಡಬೇಕು. ಎಸಿಬಿಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ತನಿಖೆಯನ್ನು ನಡೆಸಲು ಇವೆಲ್ಲಾವು ಅವಶ್ಯಕವಾಗಿದೆ. ಆದರೆ ಸರ್ಕಾರ ಗಟ್ಟಿ ತೀರ್ಮಾನವನ್ನು ಕೈಗೊಳ್ಳಲು ಮೀನಾ ಮೇಷ ಏಣಿಸುತ್ತಿರುವುದು ಏಕೆ ಎಂಬ ಅನುಮಾನವೂ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಮೂರು ಪಕ್ಷಕ್ಕೂ ನೆಪ ಮಾತ್ರಕ್ಕೆ ಬೇಕಿದ್ದ ಲೋಕಾಯುಕ್ತ ಸಂಸ್ಥೆ
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುತ್ತೇವೆ. ಎಸಿಬಿಯನ್ನು ರದ್ದು ಮಾಡುತ್ತೇವೆ ಎಂದು ಜನರಿಗೆ ಆಶ್ವಾಸನೆಯನ್ನು ನೀಡಿದ್ದರು. ಬಿಜೆಪಿ ಅತಿದೊಡ್ಡ ಪಕ್ಷವಾದರು ಕಾಂಗ್ರೆಸ್ ಮತ್ತು ಜೆಡಿಎಸ್ ಕೈ ಜೋಡಿಸಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಜೆಡಿಎಸ್ ಕಾಂಗ್ರೆಸ್ ಮರ್ಚಿನಲ್ಲಿದ್ದ ಕಾರಣ ಎಸಿಬಿ ತಂಟೆಗೆ ಹೋಗಲಿಲ್ಲ. ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಆಪರೇಷನ್ ಕಮಲದಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆಯು ಲೋಕಾಯುಕ್ತ ಸಂಸ್ಥೆಗೆ ಬಲವನ್ನು ತುಂಬುವ ಮಾತುಗಳು ಕೇಳಿಬಂದಿತ್ತು. ಆದರೆ ಇದಕ್ಕೆಲ್ಲಾ ಸರ್ಕಾರ ಜಾಣ ಮೌನವನ್ನು ತೋರಿಸಿ ಸುಮ್ಮನಾಗಿತ್ತು. ಬೊಮ್ಮಾಯಿ ಸರ್ಕಾರದಲ್ಲಿ ನೂತನ ಲೋಕಾಯುಕ್ತರನ್ನು ನೇಮಿಸಿದ್ದು ಬಿಟ್ಟರೇ ಲೋಕಾಯುಕ್ತ ಸಂಸ್ಥೆಗೆ ಬಲವನ್ನು ತುಂಬುವ ಕೆಲಸವಾಗಲಿಲ್ಲ. ಇದಕ್ಕಾಗಿಯೇ ಯಡಿಯೂರಪ್ಪ ಮಾಡುತ್ತೇವೆ ಎಂದಿದ್ದ ಕೆಲಸವನ್ನು ಹೈಕೋರ್ಟ್ ಮಾಡಿದೆ ಎಂದಿರುವುದು.
Recommended Video