ಪರಿಸರವಾದಿಗಳಿಗೆ ದೊಡ್ಡ ಜಯ, ಹುಬ್ಳಿ- ಅಂಕೋಲಾ ರೈಲಿಗೆ ತಡೆ
ಬೆಂಗಳೂರು, ಜೂನ್ 19: ಹುಬ್ಬಳ್ಳಿ- ಅಂಕೋಲಾ ನಡುವಿನ ಪ್ರಸ್ತಾವಿತ ರೈಲು ಯೋಜನೆಗೆ ಕರ್ನಾಟಕ ಹೈಕೋರ್ಟ್ ಗುರುವಾರದಂದು ತಡೆಯಾಜ್ಞೆ ನೀಡಿದೆ. ಈ ಮೂಲಕ ಪರಿಸರವಾದಿಗಳ ಹೋರಾಟಕ್ಕೆ ಜಯ ಸಂದಿದೆ. ರಾಜ್ಯ ವನ್ಯಜೀವಿ ಮಂಡಳಿಯಿಂದ ಈ ವಿವಾದಿತ ಯೋಜನೆಗೆ ಸಿಕ್ಕಿದ್ದ ಕ್ಲಿಯರೆನ್ಸ್ ಆದೇಶಕ್ಕೆ ಕೋರ್ಟ್ ತಡೆ ನೀಡಿದೆ.
Recommended Video
ಹುಬ್ಬಳ್ಳಿ- ಅಂಕೋಲಾ ನಡುವಿನ 168 ಕಿಲೋ ಮೀಟರ್ ದೂರದ ಈ ರೈಲು ಯೋಜನೆಯು ಧಾರವಾಡ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಮೂಲಕ ಹಾದು ಹೋಗಲಿದೆ. ಇದರಿಂದ ಪಶ್ಚಿಮಘಟ್ಟದ ಅಪಾರ ಪ್ರಮಾಣದ ಕಾಡು, ವನ್ಯಜೀವಿ ಸಂಪತ್ತು ನಾಶವಾಗಲಿದೆ ಎಂದು ಪರಿಸರವಾದಿಗಳು ವಾದಿಸಿದ್ದರು.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕನಸು ನನಸಾಗುವುದೇ?
ಈ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಅನುಮತಿ ಸಿಕ್ಕಿದ್ದರೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಕ್ಲಿಯೆರೆನ್ಸ್ ಸಿಕ್ಕಿರಲಿಲ್ಲ. ಈ ಬಗ್ಗೆ ಕೂಡಾ ಕೋರ್ಟ್ ನಿರ್ದೇಶನ ನೀಡಿದ್ದು, ರಾಜ್ಯ ಮಂಡಳಿ ನೀಡಿದ ಅನುಮತಿಯನ್ನು ಪರಿಗಣಿಸದಂತೆ ಸೂಚಿಸಿದೆ.
ಬೆಂಗಳೂರು ಮೂಲದ ಪರಿಸರ ಸಂರಕ್ಷಕ ವಿಜಯ್ ನಿಶಾಂತ್
ಬೆಂಗಳೂರು ಮೂಲದ ಪರಿಸರ ಸಂರಕ್ಷಕ ವಿಜಯ್ ನಿಶಾಂತ್ ಅವರು ಈ ಯೋಜನೆಗೆ ತಡೆಕೋರಿ ವೃಕ್ಷ ಫೌಂಡೇಷನ್ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎಎಸ್ ಓಕಾ ಅವರಿದ್ದ ನ್ಯಾಯಪೀಠವು ಮೇಲ್ಕಂಡ ಆದೇಶ ನೀಡಿ, ಮುಂದಿನ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಿದೆ.
ಎರಡು ಬಾರಿ ಸಭೆಯಲ್ಲಿ ನಡೆದಿದ್ದೇನು?
ಮಾರ್ಚ್ 9ರಂದು ವನ್ಯಜೀವಿ ಮಂಡಳಿಯು ಯಾವುದೇ ಚರ್ಚೆ ಪರಾಮರ್ಶನೆಯಿಲ್ಲದೆ ಯೋಜನೆಗೆ ಅನುಮತಿ ನೀಡದಿರಲು ನಿರ್ಧರಿಸಲಾಗಿತ್ತು. ಅದರೆ, 11ದಿನಗಳ ಬಳಿಕ ಈ ಬಗ್ಗೆ ನಡೆದ ಎರಡನೇ ಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಮಾಜಿ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ, ಕರ್ನಾಟಕದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ಭಾಗವಹಿಸಿದ್ದರು. ಈ ಸಭೆಯಲ್ಲಿ ಯೋಜನೆಗೆ ಅನುಮತಿ ನೀಡಲು ಸಮ್ಮತಿಸಲಾಗಿತ್ತು. ಈ ಎರಡು ಸಭೆಯ ಮುಖ್ಯಾಂಶಗಳನ್ನು ಪರಿಶೀಲಿಸಿದ ನ್ಯಾ. ಓಕಾ ಅವರು ಯೋಜನೆಗೆ ಸಮ್ಮತಿಸಲು ಬೇಕಾದ ಯಾವುದೇ ಅಂಶಗಳು ಇಲ್ಲ ಎಂದು ಪರಿಗಣಿಸಿದರು ಎಂದು ವೃಕ್ಷಾ ಫೌಂಡೇಶನ್ ಪರ ವಕೀಲೆ ಶ್ರೀಜಾ ಚಕ್ರವರ್ತಿ ತಿಳಿಸಿದರು.
ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗಿಲ್ಲ ಅನುಮತಿ: ಇಲ್ಲಿದೆ ಕಾರಣ
ವಿವಾದಿತ ಯೋಜನೆ
ವಿವಾದಿತ ಯೋಜನೆ: ಉತ್ತರ ಕರ್ನಾಟಕ ಜಿಲ್ಲೆಗಳನ್ನು ಕರಾವಳಿ ಭಾಗಕ್ಕೆ ಸಂಪರ್ಕಿಸಲು ಉದ್ದೇಶಿಸಿರುವ ಹುಬ್ಬಳ್ಳಿ ಹಾಗೂ ಅಂಕೋಲಾ ನಡುವಿನ ರೈಲು ಯೋಜನೆ ಜಾರಿಗೊಂಡರೆ ಕನಿಷ್ಠ 2 ಲಕ್ಷಕ್ಕೂ ಅಧಿಕ ಮರಗಳು ನಾಶವಾಗಲಿದೆ ಎಂದು ಅಂದಾಜಿಸಲಾಗಿದೆ. ಯೋಜನೆಯಿಂದ ಕಾಳಿ ಹುಲಿ ಅಭಯಾರಣ್ಯ ಹಾಗೂ ಬೇಡ್ತಿ ಸಂರಕ್ಷಣಾ ಅಭಯಾರಣ್ಯಕ್ಕೂ ಹಾನಿ ಸಂಭವಿಸಲಿದೆ ಎಂದು ಪರಿಸರವಾದಿಗಳು ಕಳೆದ 20 ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ಸುಪ್ರೀಂಕೋರ್ಟ್ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದಲೂ ಈ ಯೋಜನೆಗೆ ವಿರೋಧ ವ್ಯಕ್ತವಾಗಿದೆ.
ಕೇಂದ್ರ ಉನ್ನತಾಧಿಕಾರ ಸಮಿತಿ ನೀಡಿದ ವರದಿ
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ತಂದರೆ ಪಶ್ಚಿಮಘಟ್ಟದ ಅರಣ್ಯ ನಾಶವಾಗುತ್ತದೆ. ಕರಡಿ, ಆನೆ, ಹುಲಿಯಂತಹ ಪ್ರಾಣಿಗಳ ಜೀವಕ್ಕೆ ಸಂಚಕಾರ ಉಂಟಾಗುತ್ತದೆ, ಯೋಜನೆಯಿಂದ ಎನ್ಎಂಪಿಟಿ, ವಿದ್ಯುತ್ ಉತ್ಪಾದನಾ ಘಟಕ, ಸೀಬರ್ಡ್ ನೌಕಾನೆಲೆ ಸೇರಿದಂತೆ ಅನೇಕ ಉದ್ಯಮಗಳಿಗೆ ನೆರವಾಗಲಿದೆ, ಒಟ್ಟು 2 ಲಕ್ಷ ಚ.ಕಿ.ಮೀ. ವ್ಯಾಪ್ತಿಯ ಪ್ರದೇಶಗಳಿಗೆ ಸಂಪರ್ಕ ಸಾಧಿಸಬಹುದು. ಇದರಿಂದ ವಾಣಿಜ್ಯೋದ್ಯಮ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭವೃದ್ಧಿಗೆ ಸಹಾಯಕವಾಗುತ್ತದೆ ಎಂದು ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಸುಪ್ರೀಂಕೋರ್ಟ್ಗೆ ವರದಿ ನೀಡಿದ್ದು ಇಲ್ಲಿ ಮುಖ್ಯವಾಗಲಿದೆ