ಎಸಿಬಿ ರದ್ದು:ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ವಿಶ್ವಾಸ ಮೂಡಿದೆ
ಬೆಂಗಳೂರು ಆಗಸ್ಟ್ 11: ಸಾಮಾಜಿಕ ಹೋರಾಟಗಾರ ಎಸ್. ಆರ್. ಹಿರೇಮಠ ಸುಮಾರು ಆರು ವರ್ಷಗಳ ಸುದೀರ್ಘ ನ್ಯಾಯಾಂಗ ಹೋರಾಟದ ಫಲವಾಗಿ ಇಂದು ರಾಜ್ಯ ಹೈಕೋರ್ಟ್ 'ಎಸಿಬಿ'ಯನ್ನು ರದ್ದುಪಡಿಸಿ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ನಾಡಿನ ಜನರಿಗೆ ಭ್ರಷ್ಟಾಚಾರದ ವಿರುದ್ಧ ಒಂದಷ್ಟು ವಿಶ್ವಾಸ ಮೂಡಿಸಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.
ರಾಜ್ಯ ಹೈಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದು ಪಡಿಸಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ರವಿ ಕೃಷ್ಣಾರೆಡ್ಡಿ 'ಎಸಿಬಿ ರದ್ದುಪಡಿಸಿ, ಲೋಕಾಯುಕ್ತ ಬಲಪಡಿಸಿ' ಹೋರಾಟಕ್ಕೆ ಜನತಾ ನ್ಯಾಯಾಲಯದಲ್ಲಿ ಅಂತಹ ಬೆಂಬಲ ಸಿಕ್ಕಿರಲಿಲ್ಲ. ನಿರಂತರ ಹೋರಾಟದ ಫಲವಾಗಿ ಇಂದು ರಾಜ್ಯ ಹೈಕೋರ್ಟ್ ಎಸಿಬಿ ರದ್ದು ಮಾಡಿದೆ. ಈ ಕುರಿತು ಹೋರಾಡಿದ ಎಸ್. ಆರ್. ಹಿರೇಮಠಗೆ ರಾಜ್ಯದ ಜನತೆಯ ಪರವಾಗಿ ಅವರು ಅಭಿನಂದನೆ ತಿಳಿಸಿದರು.
ಎಸಿಬಿ ರಚನೆ ರದ್ದುಗೊಳಿಸಿದ ಹೈಕೋರ್ಟ್, ಹಿಂದಿನ ಕಾಂಗ್ರೆಸ್ ಸರ್ಕಾರದ ಕನಸು ಭಗ್ನ
ಕಾಂಗ್ರೆಸ್ನ ಭ್ರಷ್ಟ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ಲೋಕಾಯುಕ್ತವನ್ನು ನಾಶ ಮಾಡಿದ್ದರು. ಆ ಸಂದರ್ಭದಲ್ಲಿ ನಾನಿದ್ದ ಪಕ್ಷದ ವತಿಯಿಂದ ಎಂಟು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದೇವು. ನಮ್ಮ ಹೋರಾಟ ಸಾಕಷ್ಟು ಜನರನ್ನು ತಲುಪಿತ್ತು. ಇದನ್ನು ಗಮನಿಸಿಯೇ ಭ್ರಷ್ಟ ಬಿಜೆಪಿ ಸರ್ಕಾರ ತಾವು ಅಧಿಕಾರಕ್ಕೆ ಬಂದರೆ ಒಂದೇ ದಿನದಲ್ಲಿ ಎಸಿಬಿ ರದ್ದುಪಡಿಸಿ ಲೋಕಾಯುಕ್ತವನ್ನು ಬಲಪಡಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಆದರೆ ಎಂದಿನಂತೆ ಭ್ರಷ್ಟ ಬಿಜೆಪಿ ಸಹ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಾಯುಕ್ತದಲ್ಲಿ ಉತ್ತಮರು ಆಡಳಿತದಲ್ಲಿರಲಿ
ಲೋಕಾಯುಕ್ತ ಸಂಸ್ಥೆಗೆ ಅಧಿಕಾರ ಬಂದ ತಕ್ಷಣ ಎಲ್ಲವೂ ಬದಲಾಗುವುದಿಲ್ಲ. ಯೋಗ್ಯರಾದ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಅಧಿಕಾರ ವಹಿಸಿಕೊಂಡರೆ ಮಾತ್ರ ಅದು ಒಳ್ಳೆಯ ಸಂಸ್ಥೆಯಾಗಿ ಪರಿವರ್ತನೆ ಆಗಲಿದೆ. ಈ ಭಾಸ್ಕರ್ ರಾವ್ ನಂತಹ ಪರಮ ನೀಚ ಮತ್ತು ಅಯೋಗ್ಯ ಲೋಕಾಯುಕ್ತದಲ್ಲಿದ್ದರೆ ಆ ಸಂಸ್ಥೆ ಯಾವ ಕರಾಳತೆಯ ಹಂತ ಮುಟ್ಟಿತ್ತು ಎಂಬುದು ಎಲ್ಲಿರಿಗೂ ಗೊತ್ತಿದೆ. ಸದ್ಯ ಲೋಕಾಯುಕ್ತರ ಮೇಲೆ ಜನರಿಗೆ ಅಪಾರವಾದ ಜವಾಬ್ದಾರಿ ಇದೆ. ಅವರು ಎಷ್ಟು ಯೋಗ್ಯರು ಎನ್ನುವುದನ್ನು ಮುಂದಿನ ದಿನಗಳಲ್ಲಿ ನಾಡಿಗೆ ತಿಳಿಯಲಿದೆ ಎಂದು ಹೇಳಿದರು.
ಬಿಜೆಪಿಗೆ, ಸಿದ್ದರಾಮಯ್ಯಗೆ ಜನ ಬುದ್ಧಿ ಕಲಿಸಬೇಕು
ಎಸಿಬಿ ರಚನೆ ಮೂಲಕ ಜನದ್ರೋಹಿ, ವಿಶ್ವಾಸದ್ರೋಹಿ ಹಾಗೂ ಕಾನೂನುಬಾಹಿರ ಕೃತ್ಯ ಎಸಗಿದ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು. ಜತೆಗೆ ಜನರು ಅವರಿಗೆ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಸೋಲಿಸುವ ಮೂಲಕ ಸೂಕ್ತ ಶಿಕೆ ನೀಡಬೇಕು. ಅಲ್ಲದೇ ಎಸಿಬಿ ರದ್ದು ಮಾಡಿ, ಲೋಕಾಯುಕ್ತಕ್ಕೆ ಬಲ ತುಂಬುತ್ತೇವೆ ಎಂದು ಅಧಿಕಾರಕ್ಕೆ ಬರುವ ಸಂಬಂಧ ಸುಳ್ಳು ಆಶ್ವಾಸನೆ ಕೊಟ್ಟ 40ಪರ್ಸೆಂಟ್ ಕಮೀಷನ್ನ ಬಿಜೆಪಿಗೂ ತಕ್ಕ ಪಾಠ ಕಲಿಸಬೇಕು ಎಂದು ಅವರು ಕರೆ ನೀಡಿದರು.
ಜನರಿಗೆ ಕೆಎಸ್ಆರ್ ಪಕ್ಷ ಪರ ಒಲವಿದೆ
ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ರಾಜ್ಯದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ , ಶಿಸ್ತುಬದ್ಧವಾಗಿ ಹೋರಾಡುತ್ತಿರುವುದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಎಸ್ಆರ್). ಇಂದಿನ ಹೈಕೋರ್ಟ್ ತೀರ್ಪಿನ ಹಿಂದೆಯು ನಮ್ಮ ಪಕ್ಷದ ಹೋರಾಟದ ಫಲವಿದೆ. ಕೆಎಸ್ಆರ್ ಪಕ್ಷದ ಹೋರಾಟದ ಬಗ್ಗೆ ಜನರಿಗೆ ಅರಿವಿದೆ ಎಂದು ಹೇಳಿದರು.
ಸಿದ್ದರಾಮಯ್ಯ ರಚಿಸಿದ್ದ ಎಸಿಬಿ ರದ್ದು
2016ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ಸಿದ್ದರಾಮಯ್ಯ ಅವರು ರಚನೆ ಮಾಡಿದ್ದರು. ಇದೊಂದು ರಾಜ್ಯ ಸರ್ಕಾರದ ವಿಶೇಷ ಸಂಸ್ಥೆಯಾಗಿತ್ತು. ಇದೀಗ ಎಸಿಬಿಯನ್ನು ರದ್ದು ಮಾಡುವ ಮೂಲಕ ಹೈಕೋರ್ಟ್ನ ನ್ಯಾಯಮೂರ್ತಿ.ಬಿ .ವೀರಪ್ಪ ಅವರಿದ್ದ ವಿಭಾಗೀಯ ಪೀಠ ಲೋಕಾಯುಕ್ತವನ್ನು ಬಲಗೊಳಿಸಲು ಮಹತ್ವದ ಆದೇಶ ಹೊರಡಿಸಿದೆ.