ಕಾಲೇಜು ವಿದ್ಯಾರ್ಥಿಗಳಿಗೆ ಹಣಕಾಸು ಜಾಗೃತಿ ಕಾರ್ಯಕ್ರಮ: NSE ಜೊತೆ ಉನ್ನತ ಶಿಕ್ಷಣ ಪರಿಷತ್ ಒಡಂಬಡಿಕೆ
ಬೆಂಗಳೂರು, ಡಿ.8: ರಾಜ್ಯದ ಕಾಲೇಜು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯನ್ನು ಸಾಧ್ಯವಾಗಿಸುವ ಗುರಿಯುಳ್ಳ ಹಣಕಾಸು ವಿಚಾವಾರಗಳ ಜಾಗೃತಿ ಕಾರ್ಯಕ್ರಮವನ್ನು ಜಾರಿ ಮಾಡುವ ಸಂಬಂಧ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ಎಸ್ಇ) ಮತ್ತು ಉನ್ನತ ಶಿಕ್ಷಣ ಇಲಾಖೆಯ ಭಾಗವಾಗಿರುವ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಒಡಂಬಡಿಕೆ ಮಾಡಿಕೊಳ್ಳಲು ತೀರ್ಮಾನಿಸಿವೆ.
ಈ ಸಂಬಂಧ ಬುಧವಾರ ನಡೆದ ವರ್ಚುಯಲ್ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, 'ಎನ್ಎಸ್ಇ ರೂಪಿಸಿರುವ ಈ ಕಾರ್ಯಕ್ರಮದ ಬಗ್ಗೆ ರಾಜ್ಯ ಸರಕಾರವು ಮುಕ್ತವಾಗಿದೆ. ಇಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರಿಂದ ಅವರಿಗೆಲ್ಲ ಆರ್ಥಿಕ ತಿಳಿವಳಿಕೆ, ಉದ್ಯಮಶೀಲತೆ ಕುರಿತು ವೈಜ್ಞಾನಿಕ ತಿಳಿವಳಿಕೆ ಮತ್ತು ಆರ್ಥಿಕ ನಿರ್ವಹಣೆ ಕೌಶಲ್ಯಗಳು ಸುಲಭವಾಗಿ ಸಿಗಲಿವೆ' ಎಂದರು.
ಆರ್ಥಿಕ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಎನ್ಎಸ್ಇ ಅಕಾಡೆಮಿ ಮತ್ತು ರಾಜ್ಯದ ಕಾಲೇಜುಗಳ ನಡುವೆ ಬೋಧಕ ವೃಂದ ಮತ್ತು ವಿದ್ಯಾರ್ಥಿಗಳ ಪರಸ್ಪರ ವಿನಿಮಯ ನಡೆಯಲಿದೆ. ಇದರ ಜತೆಗೆ ಸಮಗ್ರ ತರಬೇತಿಯನ್ನೂ ನೀಡಲಾಗುವುದು. ಅಲ್ಲದೆ, ವಿದ್ಯಾರ್ಥಿಗಳಲ್ಲಿ ಆರ್ಥಿಕ ಜಾಗೃತಿ ಮತ್ತು ಸರ್ಟಿಫಿಕೇಶನ್ ಕೂಡ ಇರಲಿದೆ. ಇದರಲ್ಲಿ ಆರ್ಥಿಕ ನೀತಿಗಳು, ಫಿನ್-ಟೆಕ್, ಬಂಡವಾಳ ಮಾರುಕಟ್ಟೆ, ಜಾಗತಿಕ ಮತ್ತು ಸ್ಥಳೀಯ ವಾಣಿಜ್ಯ ಸಂಸ್ಕೃತಿ, ಕೇಂದ್ರೀಯ ಬ್ಯಾಂಕುಗಳು, ಯೋಜನಾಬದ್ಧ ವೆಚ್ಚ ಮುಂತಾದವುಗಳ ಅರಿವು ಸಿಗಲಿದೆ ಎಂದು ಅವರು ಮಾಹಿತಿ ನೀಡಿದರು.
ಎನ್ಎಸ್ಇ ಅಕಾಡೆಮಿಯು ದೇಶದ ಏಳು ರಾಜ್ಯಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು, 70 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. ಇಂತಹ ಕಾರ್ಯಕ್ರಮವನ್ನು ರಾಜ್ಯದಲ್ಲೂ ಜಾರಿಗೆ ತಂದರೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆರ್ಥಿಕ ಜಾಗೃತಿಯ ತರಬೇತಿ ಸುಲಭವಾಗಿ ಸಿಗಲಿದೆ ಎಂದು ಅವರು ತಿಳಿಸಿದರು.
ಈ ವರ್ಚುಯಲ್ ಸಭೆಯಲ್ಲಿ ಎನ್ ಎಸ್ ಇ ಅಕಾಡೆಮಿ ಸಿಇಒ ಅಭಿಲಾಷ ಮಿಶ್ರಾ, ಸಹ ಉಪಾಧ್ಯಕ್ಷ ಡಾ.ಅಗ್ನಾ ಫರ್ನಂಡೇಜ್, ಮುಖ್ಯ ವ್ಯವಸ್ಥಾಪಕ ಎಸ್. ರಂಗನಾಥನ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಡಾ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ರಾಣಿಚೆನ್ನಮ್ಮ ವಿವಿ ಕುಲಪತಿ ಪ್ರೊ ರಾಮಚಂದ್ರಗೌಡ ವರ್ಚುವಲ್ ನಲ್ಲಿ ಭಾಗವಹಿಸಿದ್ದರು.
ರಾಜ್ಯದಲ್ಲಿ ಶೈಕ್ಷಣಿಕ ಕ್ಯಾಂಪಸ್ ಆರಂಭಕ್ಕೆ ಫ್ರಾನ್ಸ್ ಒಲವು
ಫ್ರಾನ್ಸ್ ಸರಕಾರವು ರಾಜ್ಯದಲ್ಲಿ ಇಂಡೋ-ಫ್ರೆಂಚ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಉತ್ಸುಕವಾಗಿದ್ದು, ಆರೋಗ್ಯ, ಇಂಡಸ್ಟ್ರಿ 4.0 ಮತ್ತು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಅವಳಿ ಪದವಿ ನೀಡಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಭಾರತದಲ್ಲಿ ಫ್ರಾನ್ಸ್ ದೇಶದ ನೂತನ ಕಾನ್ಸುಲ್ ಜನರಲ್ ಆಗಿ ನೇಮಕಗೊಂಡಿರುವ ಥಿಯರಿ ಬರ್ತೆಲೋಟ್ ಅವರು ಬುಧವಾರ ತಮ್ಮನ್ನು ಭೇಟಿಯಾದಾಗ ಈ ಸಂಬಂಧ ಅವರು ಈ ಕುರಿತು ಮಾತುಕತೆ ನಡೆಸಿದರು. ಈ ಕ್ಯಾಂಪಸ್ಸನ್ನು ಆರಂಭಿಸಲು ಬೆಂಗಳೂರು ನಗರ ವಿಶ್ವವಿದ್ಯಾಲಯವು ಸೂಕ್ತವಾಗಿದೆ ಎಂದು ಫ್ರೆಂಚ್ ನಿಯೋಗಕ್ಕೆ ತಿಳಿಸಲಾಗಿದೆ ಎಂದರು.
ನಂತರ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳು, ಔಷಧ ವಿಜ್ಞಾನ ನಿರ್ವಹಣೆ, ಸುಧಾರಿತ ಫಾರ್ಮಸುಟಿಕಲ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ, ಇಂಡಸ್ಟ್ರಿ 4.0 ಅಡಿಯಲ್ಲಿ ಸೈಬರ್ ಸೆಕ್ಯುರಿಟಿ, ಡೇಟಾ ಅನಲಿಟಿಕ್ಸ್, ಮಶೀನ್ ಲರ್ನಿಂಗ್ ಮುಂತಾದ ವಿಭಾಗಗಳಲ್ಲಿ ಮತ್ತು ಪರಿಸರ ಶಾಸ್ತ್ರದಲ್ಲಿ ಜೀವವೈವಿಧ್ಯ, ಹವಾಮಾನ ಬದಲಾವಣೆ, ಪರಿಸರಸ್ನೇಹಿ ಆರ್ಥಿಕತೆ ವಿಭಾಗಗಳಲ್ಲಿ ಉದ್ದೇಶಿತ ಕ್ಯಾಂಪಸ್ಸಿನಲ್ಲಿ ಅವಳಿ ಪದವಿ (ಇಂಡೋ-ಫ್ರೆಂಚ್ ಡಿಗ್ರಿ)ಗಳನ್ನು ನೀಡಲಾಗುವುದು ಎಂದು ವಿವರಿಸಿದರು.
ಮುಂದಿನ ದಿನಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ಇಂಡೋ-ಫ್ರೆಂಚ್ ಸಹಯೋಗದ ಕ್ಯಾಂಪಸ್ಸಿನಲ್ಲಿ ಪಠ್ಯಕ್ರಮ ಇತ್ಯಾದಿಗಳನ್ನು ಕೈಗಾರಿಕೆಗಳಿಗೆ ಇರುವ ಅಗತ್ಯದಂತೆ ರೂಪಿಸಲಾಗುವುದು. ಜತೆಗೆ ಸಂಶೋಧನಾ ಸಂಸ್ಥೆ ಮತ್ತು ಇನ್ಕ್ಯುಬೇಟರುಗಳನ್ನು ಸ್ಥಾಪಿಸಲು ಒತ್ತು ಕೊಡಲಾಗುವುದು. ಈ ಮೂಲಕ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಕೌಶಲ್ಯಗಳನ್ನು ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಶಿಕ್ಷಣದಲ್ಲಿ ಜಾಗತಿಕ ಗುಣಮಟ್ಟಕ್ಕೆ ಆದ್ಯತೆ ಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಪದವೀಧರರಾದರೆ ಸಾಲದು, ಅವರು ಸಮಕಾಲೀನ ವೃತ್ತಿಗಳಿಗೆ ಬೇಕಾದ ಅತ್ಯಾಧುನಿಕ ಕೌಶಲ್ಯಗಳನ್ನು ಕೂಡ ಕಲಿಸಲಾಗುವುದು. ಈ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವತ್ತ ದಾಪುಗಾಲಿಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಉದ್ಯೋಗದಾತ ಕಂಪನಿಗಳ ಅಗತ್ಯ ಮತ್ತು ಬೇಡಿಕೆಯನ್ನು ಬೆರಳತುದಿಯಲ್ಲಿ ತಿಳಿದುಕೊಳ್ಳಲೆಂದೇ ಕೈಗಾರಿಕೆಗಳನ್ನು ಶಿಕ್ಷಣ ಸಂಸ್ಥೆಗಳೊಂದಿಗೆ ಬೆಸೆಯಲಾಗುತ್ತಿದೆ. ಇನ್ನುಮುಂದೆ ಶೈಕ್ಷಣಿಕ ವರ್ಷವಿಡೀ ಈ ಕಂಪನಿಗಳು ಶಿಕ್ಷಣ ಸಂಸ್ಥೆಗಳೊಂದಿಗೆ ಸಕ್ರಿಯ ಸಂಬಂಧ ಹೊಂದಿರಲಿದೆ ಎಂದು ಅವರು ನುಡಿದರು.
Recommended Video