ರಾಜ್ಯದಲ್ಲಿ 5,000 ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ ಒಪ್ಪಂದ
ಬೆಂಗಳೂರು, ಜ. 13: ರಾಜ್ಯದಲ್ಲಿ ಕಂಡುಬರುತ್ತಿರುವ ವಿದ್ಯುತ್ ಕೊರತೆ ನೀಗಿಸಲು ನವೀಕರಿಸಬಹುದಾದ ಶಕ್ತಿ ಮೂಲಗಳೇ ಪರಿಹಾರ ಎಂಬುದನ್ನು ರಾಜ್ಯ ಸರ್ಕಾರ ಈಗಾಗಲೇ ಅರಿತಿದೆ. ಆದ್ದರಿಂದ ಸೌರಶಕ್ತಿ ಹಾಗೂ ಪವನಶಕ್ತಿಗೆ ಸಾಕಷ್ಟು ಬೆಂಬಲ ನೀಡುತ್ತಿದೆ.
ರಾಜ್ಯ ಸರ್ಕಾರದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್ಇಡಿಎಲ್) ಸಂಸ್ಥೆಯು ಸೌರಶಕ್ತಿ ಉತ್ಪಾದಿಸುವ ಸನ್ಎಡಿಸನ್ ಕಂಪನಿಯೊಂದಿಗೆ ರಾಜ್ಯದಲ್ಲಿ ಐದು ಗಿಗಾವ್ಯಾಟ್ (5,000 ಮೆ.ವ್ಯಾಟ್) ನವೀಕರಿಸುವ ವಿದ್ಯುತ್ ಉತ್ಪಾದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. [ವಿದ್ಯುತ್ ಸಂಪರ್ಕ ಇದ್ದರೆ ಸೀಮೆಎಣ್ಣೆ ಕೊಡಲ್ಲ?]
ಉದ್ದೇಶಿತ ಯೋಜನೆಯಿಂದ ಉತ್ಪಾದನೆಗೊಳ್ಳುವ ವಿದ್ಯುತ್ ಸಹಾಯಧನ ಮತ್ತು ಪ್ರೋತ್ಸಾಹಧನ ಇಲ್ಲದೆಯೂ ಕಲ್ಲಿದ್ದಲು ಮೂಲದಿಂದ ತಯಾರಾಗುವ ವಿದ್ಯುತ್ಗಿಂತ ಕಡಿಮೆ ದರದಲ್ಲಿ ಸಿಗಲಿದೆ. ಅಲ್ಲದೆ, ಕರ್ನಾಟಕದಲ್ಲಿರುವ ವಿದ್ಯುತ್ ಕೊರತೆ ನೀಗಿಸುವ ಸಾಮರ್ಥ್ಯ ಹೊಂದಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ಹೇಳಿದೆ. [ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ]
ಒಪ್ಪಂದದ ಷರತ್ತೇನು? : ಒಪ್ಪಂದದ ಪ್ರಕಾರ ಕರ್ನಾಟಕದಲ್ಲಿ ಸನ್ಎಡಿಸನ್ ಕಂಪನಿಯು ಪವನಶಕ್ತಿ ಮತ್ತು ಸೌರಶಕ್ತಿ ಸ್ಥಾವರಗಳನ್ನು ನಿರ್ಮಿಸಲಿದೆ. ಪ್ರಸ್ತುತ ಜಾರಿಯಲ್ಲಿರುವ ಕಾನೂನು ಪ್ರಕಾರ ಉತ್ಪಾದನೆಗೊಂಡ ವಿದ್ಯುಚ್ಛಕ್ತಿಯನ್ನು ಕಂಪನಿಯು ವಿದ್ಯುತ್ ಖರೀದಿ ಒಪ್ಪಂದದ ಮೂಲಕ ರಾಜ್ಯದ ವಿತರಣೆ ಕಂಪನಿಗಳಿಗೆ, ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ ಹಾಗೂ ರಾಜ್ಯ ಮತ್ತು ಹೊರಗಿನ ಮೂರನೇ ವ್ಯಕ್ತಿಗೆ ಮಾರಬಹುದು. [ರಾಜ್ಯದಲ್ಲಿ ಹರ್ಭಜನ್ ಸೌರ ಘಟಕ]
ಯೋಜನೆಗಾಗಿ ರಾಜ್ಯದಲ್ಲಿ ಲಭ್ಯವಿರುವ ಸೂಕ್ತ ಸರ್ಕಾರಿ ಭೂಮಿಯನ್ನು ಗುರುತಿಸಿ ಕಂಪನಿಗೆ ನೀಡಲಾಗುವುದು. ಅವಶ್ಯಕ ವಿದ್ಯುತ್ ಮಾರ್ಗ ಹಾಗೂ ಗ್ರಿಡ್ ಕೇಂದ್ರ ಸ್ಥಾಪಿಸಲು ಸಹಕರಿಸಲಾಗುವುದು. 2016ರ ಡಿಸೆಂಬರ್ 31ರೊಳಗೆ 1,000 ದಿಂದ 1,500 ಮೆ. ವ್ಯಾಟ್ ಸಾಮರ್ಥ್ಯದ ಸ್ಥಾವರ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಕರ್ನಾಟಕ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.