ಮಹತ್ವದ ನಿರ್ಧಾರ: ಮೇ ನಾಲ್ಕರಿಂದ KSRTC ಬಸ್ ಸಂಚಾರ ಆರಂಭ
ಬೆಳಗಾವಿ, ಮೇ 2: ಕಂಟೇನ್ಮೆಂಟ್ ಮತ್ತು ರೆಡ್ ಝೋನ್ ತಾಲೂಕುಗಳನ್ನು ಹೊರತು ಪಡಿಸಿ, ಇತರ ಕಡೆ ಸೋಮವಾರದಿಂದ (ಮೇ 4) ಬಸ್ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡುತ್ತಿದ್ದ ಸವದಿ, "ಕೆಎಸ್ಆರ್ಟಿಸಿ ದುಪ್ಪಟ್ಟು ದರ ತೆಗೆದುಕೊಂಡಿರುವುದು ಸಂವಹನ ಕೊರತೆಯಿಂದ. ಸಾರ್ವಜನಿಕರ ಹಿತದೃಷ್ಟಿಯಿಂದ ಸಿಂಗಲ್ ಫೇರ್ ತೆಗೆದುಕೊಂಡು ಪ್ರಯಾಣಿಕರನ್ನು ಕಳುಹಿಸಿಕೊಡಲಾಗಿದೆ" ಎಂದು ಹೇಳಿದ್ದಾರೆ.
ಸರ್ಕಾರಿ ಬಸ್ ಚಾಲಕರಿಗೆ ಬಹುಮಾನ ಘೋಷಿಸಿದ ಸಚಿವರು
"ಈಗಾಗಲೇ ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಸೋಂಕು ಇರುವ ತಾಲೂಕುಗಳಲ್ಲಿ ಮುಂದಿನ ಆದೇಶದವರೆಗೆ ಬಸ್ ಸಂಚಾರ ಇರುವುದಿಲ್ಲ. ಮಿಕ್ಕ ಕಡೆ, ಬಸ್ ಸಂಚಾರವನ್ನು ಮೇ ನಾಲ್ಕರಿಂದ ಆರಂಭಿಸಲಿದ್ದೇವೆ"ಎಂದು ಸವದಿ ಹೇಳಿದ್ದಾರೆ.
"ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬಸ್ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ. ಗ್ರಾಮೀಣ ಭಾಗದಿಂದ, ತಾಲೂಕು ಕೇಂದ್ರಗಳಿಗೆ ಸಾರಿಗೆ ವ್ಯವಸ್ಥೆ ಆರಂಭವಾಗಲಿದೆ"ಎಂದು ಉಪಮುಖ್ಯಮಂತ್ರಿಯೂ ಆಗಿರುವ ಸವದಿ ಹೇಳಿದ್ದಾರೆ.
"ಬೇರೆ ಬೇರೆ ಊರಿನಲ್ಲಿ ಸಿಲುಕಿ ಹಾಕಿಕೊಂಡಿರುವ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿ ಕೊಡುವ ವ್ಯವಸ್ಥೆ ಆರಂಭವಾಗಿದೆ. ಅವರಿದ್ದ ಸ್ಥಳಕ್ಕೆ ಬಿಟ್ಟು ಬಸ್ಸುಗಳು ಖಾಲಿಯಾಗಿ ಬರಬೇಕಿದೆ. ಆದರೂ, ಆ ಹೊರೆಯನ್ನು ಸರಕಾರವೇ ಭರಿಸಿಕೊಳ್ಳಲಿದೆ"ಎಂದು ಸವದಿ ಹೇಳಿದ್ದಾರೆ.
ಟೋಲ್ ಗಳಲ್ಲಿ ಸರ್ಕಾರಿ ಸಾರಿಗೆಗೆ ವಿನಾಯಿತಿ ನೀಡಲು ಸವದಿ ಮನವಿ
"ಕೊರೊನಾ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿದೆ. ಆಗಿರುವ ನಷ್ಟವನ್ನು ಎಲ್ಲರೂ ಸ್ವಲ್ಪವಾದರೂ ಹೊರಬೇಕಾಗುತ್ತದೆ" ಎನ್ನುವ ಮೂಲಕ, ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.