ಹಾವೇರಿ ರೈಲ್ವೆ ನಿಲ್ದಾಣಕ್ಕೆ "ಮಹದೇವಪ್ಪ ಮೈಲಾರ" ಹೆಸರಿಡಲು ಕೇಂದ್ರ ಸೂಚನೆ
ಹಾವೇರಿ, ನವೆಂಬರ್ 21: ಹಾವೇರಿಯ ರೈಲ್ವೆ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಮಹದೇವಪ್ಪ ಮೈಲಾರ ಅವರ ಹೆಸರಿಡಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದೆ.
ಹಾವೇರಿ ರೈಲ್ವೆ ನಿಲ್ದಾಣವನ್ನು "ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣ" ಎಂದು ನಾಮಕರಣ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಹೊರಡಿಸಿದ್ದು, ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಹೆಸರು ನಾಮಕರಣ ಮಾಡಲು ಸೂಚಿಸಿದೆ.
ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮೀಜಿ ಹೆಸರು ನಾಮಕರಣ: ಕೇಂದ್ರ ಒಪ್ಪಿಗೆ
1911ರಲ್ಲಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ಜನಿಸಿದ ಮಹದೇವಪ್ಪ ಮೈಲಾರ ಅವರು ಮಹಾತ್ಮ ಗಾಂಧಿ ಅವರ ಅನುಯಾಯಿಯಾಗಿದ್ದರು. 16ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. 1930ರಲ್ಲಿ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಆರಂಭಗೊಂಡಾಗ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಮಹದೇವಪ್ಪ ಮೈಲಾರ ಅವರು ಭಾಗವಹಿಸಿ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದರು.
ಸ್ವಾತಂತ್ರ್ಯ ಹೋರಾಟಗಾರ ಮಹದೇವಪ್ಪ ಮೈಲಾರ ಅವರನ್ನು ಜೀವಂತವಾಗಿ ಹಿಡಿದುಕೊಟ್ಟರೆ 300 ರೂಪಾಯಿ ಬಹುಮಾನ ಕೊಡುವುದಾಗಿ 1942ರಲ್ಲಿ ಬ್ರಿಟಿಷರು ಘೋಷಣೆ ಮಾಡಿದ್ದರು. ಇದೀಗ ಮಹದೇವಪ್ಪ ಮೈಲಾರ ಅವರ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡುತ್ತಿರುವುದು ಹಾವೇರಿ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.