ಹೊಗೆ ಹೊರಸೂಸುವ ಪಟಾಕಿಗಳ ನಿಷೇಧಕ್ಕೆ ಕರ್ನಾಟಕ ಸರ್ಕಾರ ಚಿಂತನೆ
ಬೆಂಗಳೂರು, ನವೆಂಬರ್ 04: ದೀಪಾವಳಿ ಸನ್ನಿಹಿತವಾಗುತ್ತಿದೆ, ಪಟಾಕಿಗಳ ಹೊಗೆಯಿಂದ ಪರಿಸರವನ್ನು ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆ.
ಹೀಗಿರುವಾಗ ಕನಾಟಕ ಸರ್ಕಾರ ಕೂಡ ಹೊಗೆ ಹೊರಸೂಸುವ ಪಟಾಕಿಗಳ ಮಾರಾಟವನ್ನು ನಿಷೇಧಿಸಲು ಚಿಂತನೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜಸ್ಥಾನದಲ್ಲಿ ಪಟಾಕಿ ಮಾರಾಟ ನಿಷೇಧಿಸಿದ ಸರ್ಕಾರ
ಈಗಾಗಲೇ ರಾಜಸ್ತಾನ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಹರಿಯಾಣ ರಾಜ್ಯಗಳಲ್ಲಿ ಪಟಾಕಿಗಳ ಮಾರಾಟವನ್ನು ನಿಷೇಧಿಸಲಾಗಿದೆ.
ಈ ಸಂಬಂಧ ಕೊವಿಡ್ -19 ಕುರಿತ ತಾಂತ್ರಿಕ ಸಮಿತಿಯ ಸದಸ್ಯರು ಸೇರಿದಂತೆ ಆರೋಗ್ಯ ತಜ್ಞರೊಂದಿಗೆ ಸರ್ಕಾರ ಹಲವು ಸುತ್ತಿನ ಸಭೆಗಳನ್ನೂ ನಡಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಿರುವ ಆರೋಗ್ಯ ಸಚಿವರು ನಂತರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸಾಕಷ್ಟು ತಜ್ಞರು ಪಟಾಕಿಗಳು ಈಗಾಗಲೇ ಸೋಂಕಿಗೆ ಒಳಗಾದವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿಯೇ ರಾಜ್ಯದಾದ್ಯಂತ ಹೊಗೆ ಹೊರಸೂಸುವ ಪಟಾಕಿಗಳನ್ನು ನಿಷೇಧಿಸುವ ಸಾಧ್ಯತೆಗಳಿವೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊವಿಡ್ -19 ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ, ವೈರಸ್ನಿಂದ ಚೇತರಿಸಿಕೊಂಡವರು ಪಟಾಕಿಗಳು ಹೊರಸೂಸುವ ಹೊಗೆಯಿಂದ ಮತ್ತಷ್ಟು ದುರ್ಬಲರಾಗುತ್ತಾರೆ.
ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ರೋಗನಿರೋಧಕ ಶಕ್ತಿ ಮತ್ತು ಉಸಿರಾಟದ ವ್ಯವಸ್ಥೆಯು ಇನ್ನೂ ದುರ್ಬಲಗೊಂಡಿರುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ ಹೊಗೆ ಹೊರಸೂಸುವ ಪಟಾಕಿಗಳನ್ನು ಹೊಡೆಯುವುದು ಅಪಾಯಕಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಿಎಂ ಅವರೊಂದಿಗೆ ಸಭೆ ನಿಗದಿಪಡಿಸಲಾಗಿದ್ದು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Recommended Video
ತಜ್ಞರ ಅಭಿಪ್ರಾಯದ ಪರವಾಗಿರುವ ಸಚಿವ ಸುಧಾಕರ್ ಅವರು ಇದೀಗ ಇನ್ನೆರೆಡು ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಮಾತುಕತೆ ನಡೆಸಲಿದ್ದು, ಪಟಾಕಿ ಮಾರಾಟ ನಿಷೇಧಿಸುವ ಕುರಿತು ಚರ್ಚಿಸಲಿದ್ದಾರೆಂದು ಮೂಲಗಳು ತಿಳಿಸಿವೆ.