ಯುವಕರ ಅಭಿಪ್ರಾಯ ಆಧರಿಸಿಯೇ ರಾಜ್ಯದಲ್ಲಿ ಯುವ ಸಮೀಕ್ಷೆ ಜಾರಿ
ಬೆಂಗಳೂರು, ಡಿ. 04: ರಾಜ್ಯದಲ್ಲಿ ಯುವಕ, ಯುವತಿಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಂಬಂಧ ಕ್ರೀಡಾ, ಯುವ ಜನ ಸಬಲೀಕರಣ ಇಲಾಖೆ ಯುವ ನೀತಿ ಜಾರಿಗೆ ತರಲು ಮುಂದಾಗಿದೆ. ಈ ಸಂಬಂಧ ಯುವಕರ ಮನಸ್ಥಿತಿ ಅರಿಯಲು ಯುವ ನೀತಿ ಸಮೀಕ್ಷಾ ಅಭಿಯಾನಕ್ಕೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ.
ರಾಜ್ಯದಲ್ಲಿ ಯುವ ನೀತಿ ಜಾರಿ ಸಂಬಂಧ ಮೊದಲು ಯುವಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿಯಲು ಯುವ ಜನ ಸೇವಾ ಇಲಾಖೆ ಮುಂದಾಗಿದೆ. ಇದರ ಭಾಗವಾಗಿ 43 ಅಂಶಗಳನ್ನು ಮುಂದಿಟ್ಟು ಪ್ರಶ್ನಾವಳಿ ಸಿದ್ದಪಡಿಸಿ ಯುವಕರ ಅಭಿಪ್ರಾಯ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದ ಯುವ ಸಮೂಹ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಕೇಳಲಾಗಿದೆ. ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಈ ಪ್ರಶ್ನಾವಳಿಯನ್ನು ಕಳುಹಿಸಲಾಗಿದೆ.
ಯುವ ನೀತಿ ಜಾರಿ ಸಂಬಂಧ ಚಾಲನೆ ಕೊಟ್ಟಿರುವ ಯುವ ನೀತಿ ಸಮೀಕ್ಷೆಯಲ್ಲಿ ಯುವಕರು ಪಾಲ್ಗೊಳ್ಳುವ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಪ್ರಶ್ನಾವಳಿ ತುಂಬಿ ಯುವ ಜನ ಸಬಲೀಕರಣ ಇಲಾಖೆಗೆ ಕಳುಹಿಸಲು ಸೂಚಿಸಲಾಗಿದೆ.
ಮೊದಲನೇ ವರ್ಗದಲ್ಲಿ ಸಾಮಾನ್ಯ ಮಾಹಿತಿ, ಶೈಕ್ಷಣಿಕ ಸ್ಥಿತಿ, ಉದ್ಯೋಗ ಮತ್ತು ಉದ್ಯಮ ಶೀಲತೆ, ಅರೋಗ್ಯ ಮತ್ತು ದೈಹಿಕ ಸದೃಢತೆ, ಯುವ ನಾಯಕತ್ವ ಮತ್ತು ಅಭಿವೃದ್ಧಿ ಆಧಾರಿತ ಪ್ರಶ್ನೆಗಳನ್ನು ಕೇಳಲಾಗಿದೆ. ರಾಜ್ಯದ ಯುವ ಸಮೂಹ ಈ ಸಮೀಕ್ಷೆಯಲ್ಲಿ ಭಾಗವಹಿಸಿ ಮುಕ್ತ ಅಭಿಪ್ರಾಯ ಹಂಚಿಕೊಳ್ಳಬಹುದು. (https://www.surveymonkey.com/r/WC6DRB2 https://www.surveymonkey.com/r/N6K325) ಆನ್ ಲೈನ್ ಮೂಲಕವೂ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.