ರಾಜ್ಯ ಸರ್ಕಾರದ ಶೂನ್ಯ ಬಡ್ಡಿ ದರದಲ್ಲಿ ಸಾಲ ಯೋಜನೆ ಜಾರಿಗೆ
ಬೆಂಗಳೂರು, ಸೆ. 16: ಕೋವಿಡ್ ಸಂಕಷ್ಟದಿಂದ ಹೊರ ಬರಲು ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿಗಳ ವರೆಗೆ ಸಾಲ ಕೊಡುವ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದರು. ಸಾಲ ಮೇಳದಲ್ಲಿ ಪ್ರಮುಖವಾಗಿ 3 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಸರ್ಕಾರ ಮುಂದಾಗಿದೆ. 3 ಲಕ್ಷದಿಂದ 10 ಲಕ್ಷ ರೂ.ವರೆಗಿನ ಸಾಲಗಳಿಗೆ ಶೇ 3 ರಷ್ಟು ಬಡ್ಡಿ ವಿಧಿಸಲಾಗುತ್ತದೆ.
ಭಾರತದಲ್ಲಿ ಸಹಕಾರಿ ಚಳವಳಿ ಹೆಮ್ಮರವಾಗಿ ಬೆಳೆದಿದೆ. ಬಡವರಿಗೆ, ಹೆಣ್ಣುಮಕ್ಕಳಿಗೆ, ರೈತರಿಗೆ ಸಹಕಾರಿಯಾಗಿ ನಿಂತಿದೆ. ಕೃಷಿ ಹಾಗೂ ಕೃಷಿಯೇತರ ಕ್ಷೇತ್ರಕ್ಕೆ 39,300 ಕೋಟಿ ರೂಪಾಯಿ ಸಾಲವನ್ನು ನೀಡಲು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ಕರ್ನಾಟಕ ಸರ್ಕಾರದಿಂದ ಸಾಲದ ಮೇಳ: 3 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ
ಸಹಕಾರ ಇಲಾಖೆ ವತಿಯಿಂದ ಕೋವಿಡ್ 19 ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಆರ್ಥಿಕ ಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ 19 ರ ಸಂಕಷ್ಟಗಳ ಕಾಲದಲ್ಲಿ ಸಹಕಾರ ಇಲಾಖೆ ವತಿಯಿಂದ 53 ಕೋಟಿ ರೂ. ದೇಣಿಗೆ ನೀಡಿರುವುದಕ್ಕೆ ಸಹಕಾರ ಸಚಿವರಾದ ಸೋಮಶೇಖರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೈನುಗಾರಿಕೆ, ಮೀನುಗಾರಿಕೆ ಸಾಲಕ್ಕಾಗಿ 2020-21 ನೇ ಸಾಲಿನಲ್ಲಿ 38 ಸಾವಿರ ಜನರಿಗೆ 100 ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಈವರೆಗೆ 34,927 ಜನರಿಗೆ 60.30 ಕೋಟಿ ರೂ. ವಿತರಿಸಲಾಗಿದೆ ಎಂದು ತಿಳಿಸಿದರು.
ರೈತರು, ಸ್ಟಾರ್ಟ್ ಅಪ್ಗಳಿಗೆ ಆರ್ಬಿಐನಿಂದ ಸುಲಭ ಸಾಲದ ಟಾನಿಕ್
ಕೋವಿಡ್ 19 ರ ಸನ್ನಿವೇಶದಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಆತ್ಮನಿರ್ಭರ ಭಾರತ ಯೋಜನೆಯಡಿ 20 ಲಕ್ಷ ಕೋಟಿ ರೂಪಾಯಿಯನ್ನು ಕೊಟ್ಟಿದ್ದಾರೆ. ಇನ್ನು ಸಣ್ಣ, ಮಧ್ಯಮ ಹಾಗೂ ಅತಿ ಸಣ್ಣ ರೈತರಿಗೆ ಸಾಲ ನೀಡಬೇಕು ಎಂಬ ನಿಟ್ಟಿನಲ್ಲಿ ಈಗ ಆರ್ಥಿಕ ಸ್ಪಂದನ ಕಾರ್ಯಕ್ರಮದಡಿ ಸುಮಾರು 39 ಸಾವಿರ ಕೋಟಿ ರೂಪಾಯಿ ನೀಡುವ ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಚಾಲನೆ ನೀಡಿದ್ದಾರೆ.
ನಾಲ್ಕು ವಲಯಗಳಲ್ಲಿ ಸಾಲ
ಸಾಲ ಮೇಳವನ್ನು ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗಾವಿ ಎಂಬ ನಾಲ್ಕು ಪ್ರದೇಶಗಳಲ್ಲಿ ಆಯೋಜಿಸಲಾಗುವುದು. ವಿವಿಧ ಸಹಕಾರಿ ಬ್ಯಾಂಕುಗಳು ಸಾಲದ ಮೊತ್ತವನ್ನು ವಿತರಿಸಲಿವೆ.
ಈ ಯೋಜನೆಯಡಿ ನಾಲ್ಕು ವಲಯಗಳಲ್ಲಿ ವಿತರಣೆ ಮಾಡಲಾಗುತ್ತಿದ್ದು, ಮೊದಲಿಗೆ ಬೆಂಗಳೂರು ವಲಯದಲ್ಲಿ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ರೈತರನ್ನು ಆರ್ಥಿಕ ಸಬಲರನ್ನಾಗಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಮೂರು ವಲಯಗಳಿಗೆ ಈ ಯೋಜನೆಯಡಿ ಸಾಲವನ್ನು ವಿತರಣೆ ಮಾಡಲಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಕುಡಿಯುವ ಹಾಲು ವಿತರಣೆ ಮಾಡಲು 79 ಕೋಟಿಯನ್ನು ಕೆಎಂಎಫ್ ಗೆ ಬಿಡುಗಡೆ ಮಾಡಿದ್ದೇವೆ. ಇನ್ನು ರೈತರಿಗೂ ಸಹ ಸಾಲ ಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. 15,300 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ಇದ್ದು, ಈವರೆಗೆ 12.11 ಲಕ್ಷ ರೈತರಿಗೆ 7929.30 ಕೋಟಿ ರೂಪಾಯಿ ಸಾಲವನ್ನು ಶೂನ್ಯ ಹಾಗೂ ಶೇ. 3ರ ಬಡ್ಡಿದರದಲ್ಲಿ ವಿತರಣೆ ಮಾಡಲಾಗಿದೆ ಎಂದರು.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ
ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ 53 ಕೋಟಿ ರೂಪಾಯಿ ದೇಣಿಗೆಯನ್ನು ಸಹಕಾರ ವಲಯ ಹಾಗೂ ಎಪಿಎಂಸಿಗಳ ಮೂಲಕ ಸಂಗ್ರಹಿಸಿ ಕೊಟ್ಟಿದ್ದೇನೆ. ಜೊತೆಗೆ ಕೊರೋನಾ ವಾರಿಯರ್ಸ್ ಗಳಾದ 12,608 ಆಶಾ ಕಾರ್ಯಕರ್ತೆಯರಿಗೆ 12.75 ಕೋಟಿ ರೂ. ಪ್ರೋತ್ಸಾಹಧನವನ್ನು ವಿತರಣೆ ಮಾಡಿದ್ದೇವೆ ಎಂದು ಸಚಿವ ಸೋಮಶೇಖರ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
1,885 ಕೋಟಿ ರೂಪಾಯಿ ಅನುದಾನವನ್ನು ಕೆಎಂಎಫ್ ನಡಿ ತಲಾ 5 ರೂ. ನಂತೆ ಪ್ರೋತ್ಸಾಹಧನ ಕೊಡುವ ಕೆಲಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿದ್ದಾರೆ. ಹೈನುಗಾರರಿಗೆ ಹಾಗೂ ಮೀನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ 2 ಲಕ್ಷ ರೂ. ಸಾಲ ಕೊಡುವ ಯೋಜನೆಯನ್ನು ಹೊಸದಾಗಿ ಪ್ರಾರಂಭಿಸಲಾಗಿದೆ. ಈ ಎಲ್ಲ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಸೋಮಶೇಖರ್ ತಿಳಿಸಿದರು.
ಸಾಂಕೇತಿಕ ಸಾಲ ವಿತರಣೆ
ಆರ್ಥಿಕ ಸ್ಪಂದನ ಕಾರ್ಯಕ್ರಮದಡಿ ವಿವಿಧ ಯೋಜನೆಯಲ್ಲಿ 50 ಫಲಾನುಭವಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಂಕೇತಿಕವಾಗಿ ಸಾಲದ ಚೆಕ್ ವಿತರಣೆ ಮಾಡಿದರು.
ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ ಅಂತ್ಯದಲ್ಲಿ ಲಾಕ್ಡೌನ್ ಘೋಷಣೆಯಾದಂದಿನಿಂದಲೂ, ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರು, ಮಹಿಳಾ ಸಹಾಯ ಗುಂಪುಗಳು, ಕೃಷಿ ಕಾರ್ಮಿಕರು, ಡೈರಿ ಮತ್ತು ರೇಷ್ಮೆ ರೈತರು ಮತ್ತು ಇನ್ನೂ ಅನೇಕರು ವ್ಯಾಪಾರವೂ ಇಲ್ಲದೆ ಭಾರೀ ಸಮಸ್ಯೆಯನ್ನು ಎದುರಿಸಿದ್ದಾರೆ. ಹೀಗಾಗಿ ಅವರಿಗೆ ಸಹಾಯವಾಗಲೆಂದು ಸಹಕಾರಿ ಬ್ಯಾಂಕುಗಳ ಮೂಲಕ ಸಾಲ ಕೊಡುವ ಯೋಜನೆ ಇದಾಗಿದೆ.
ಸಾಕ್ಷ್ಯಚಿತ್ರ
ಇದೇ ಸಂದರ್ಭದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮದ ಸಾಕ್ಷ್ಯಚಿತ್ರವನ್ನು ಅನಾವರಣಗೊಳಿಸಲಾಯಿತು. ಸಹಕಾರ ವಲಯದ ಮೂಲಕ ಯಾವೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರಿಗೆ ಯಾವೆಲ್ಲ ಯೋಜನೆಗಳಡಿ ಎಷ್ಟು ಸಾಲ ಕೊಡಲಾಗಿದೆ. ಸಹಕಾರ ಇಲಾಖೆಯಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಕೊಡಲಾಗಿದೆ.