ಉಳುವ ಯೋಗಿಗಾಗಿ ಸಾವಯವ ಭಾಗ್ಯ ಯೋಜನೆ
ಬೆಂಗಳೂರು, ಜೂ.18: ಸಾವಯವ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ತಂದಿರುವ ಸಾವಯವ ಭಾಗ್ಯ ಯೋಜನೆಯ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿ ಇದರ ಲಾಭವನ್ನು ರೈತರು ಪಡೆದುಕೊಳ್ಳಬೇಕೆಂದು ರಾಜ್ಯ ಸರ್ಕಾರ ಹೇಳಿದೆ.
ರಾಜ್ಯ ಸರ್ಕಾರ ಈ ಹಿಂದೆ ಜಿಲ್ಲಾ ಹಾಗೂ ತಾಲ್ಲೂಕಿಗೊಂದರಂತೆ 100 ಹೆಕ್ಟೆರ್ ಪ್ರದೇಶವನ್ನು ಆಯ್ಕೆಮಾಡಿ ಸರ್ಕಾರೇತರ ಸಂಸ್ಥೆಗಳ ಮೂಲಕ ಸಾವಯವ ಭಾಗ್ಯ ಯೋಜನೆ ಅನುಷ್ಠಾನಗೊಳಿಸಿತ್ತು.[ಮುಂಗಾರು-2014: 25 ಬೆಳೆಗಳಿಗೆ ಕೃಷಿ ವಿಮೆ ಭಾಗ್ಯ]
ಈ ಯೋಜನೆ ಯಶಸ್ವಿಯಾದ ಹಿನ್ನಲೆಯಲ್ಲಿ 2013-14 ನೇ ಸಾಲಿನಿಂದ ಪ್ರತಿ ಹೋಬಳಿಯಲ್ಲಿ 100 ಹೆಕ್ಟರ್ ಪ್ರದೇಶವನ್ನು ಗುರುತಿಸಿ ಸರ್ಕಾರೇತರ ಸಂಸ್ಥೆಗಳ ಮುಖಾಂತರ ಸಾವಯವ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಸರ್ಕಾರ ಈ ಬಗ್ಗೆ ರೈತರಿಗೆ ಮಾಹಿತಿ ನೀಡಿದರೂ ಕೆಲ ರೈತರಲ್ಲಿ ಈ ಯೋಜನೆ ಗೊಂದಲವಿರುವ ಈ ಹಿನ್ನಲೆಯಲ್ಲಿ ಈ ಯೋಜನೆಗೆ ಸಂಬಂಧಿಸಿದ ಕಿರು ಮಾಹಿತಿಗಳನ್ನು ಇಲ್ಲಿ ಪ್ರಕಟಿಸಲಾಗಿದೆ.[ರೈತರ ಮನೆ ಬಾಗಿಲಿಗೆ ಸೇವೆ ನೀಡುವ ವೆಬ್ ಸೈಟ್]
* ಪ್ರತಿ ಹೋಬಳಿಯ 100 ಹೆಕ್ಟರ್ ಪ್ರದೇಶವನ್ನು ಸಾವಯವ ಕೃಷಿಗೆ ಪರಿವರ್ತಿಸುವ ಯೋಜನೆ ಇದಾಗಿದ್ದು, ಯೋಜನಾ ಪ್ರದೇಶದ ಹೊರಗಿನ ರೈತರು ಸಹ ಭಾಗವಹಿಸಲು ಅವಕಾಶವಿದೆ.
* ಸಾವಯವ ಭಾಗ್ಯ ಯೋಜನೆಯ ಅನುಷ್ಠಾನ ಪ್ರದೇಶಗಳಿಗೆ ರೈತರು ಭೇಟಿ ನೀಡಿ ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
* ರೈತರಿಗೆ ರಿಯಾಯಿತಿ ದರದಲ್ಲಿ ಹಸಿರೆಲೆ ಗೊಬ್ಬರ ಬೀಜ, ಎರೆಹುಳು ಗೊಬ್ಬರ, ಆಗ್ರಿಗೋಲ್ಡ್, ಜೈವಿಕ ಗೊಬ್ಬರಗಳು, ಸಸ್ಯ ಮೂಲ ಕೀಟನಾಶಕಗಳನ್ನು ಪೂರೈಸಲಾಗುತ್ತಿದೆ.
* ಸಾವಯವ ಗೊಬ್ಬರ ಉತ್ಪಾದನೆಗೆ ಪೂರಕವಾಗುವ ಘಟಕಗಳಾದ ಕಾಂಪೋಸ್ಟ್ ಘಟಕ, ಎರೆಹುಳು ಘಟಕ, ಬಯೋಡೈಜೆಸ್ಟ್ರ್ ಘಟಕಗಳ ನಿರ್ಮಾಣಕ್ಕೆ ನೀಡಲಾಗುತ್ತಿದೆ.
* ಕ್ಷೇತ್ರಗಳನ್ನು ಸಾವಯವ ಪ್ರಮಾಣೀಕರಣಕ್ಕೆ ನೊಂದಾಯಿಸಿಕೊಳ್ಳಲು ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ (ಮೊಬೈಲ್ ಸಂಖ್ಯೆ 9448990382)
* ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಸಕ್ತ ರೈತರುಗಳು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 15 ಗ್ರಾಮಗಳ 11 ಹೋಬಳಿಗಳ 100 ಹೆಕ್ಟೇರ್ ಪ್ರದೇಶವನ್ನು ಆಯ್ಕೆ ಮಾಡಲಾಗಿದ್ದು ಸಾವಯವ ಕೃಷಿ ಪದ್ಧತಿಯ ಅಳವಡಿಕೆಗಾಗಿ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ, ಸ್ವಯಂಸೇವಾ ಸಂಸ್ಥೆಗಳ ಮೂಲಕ ಸಾವಯವ ಭಾಗ್ಯ ಯೋಜನೆ ಅನುಷ್ಠಾನಗೊಳ್ಳಲಿದೆ.