NPS ರದ್ದು ಕೋರಿ ರಾಜ್ಯ ಸರ್ಕಾರಿ ನೌಕರರು ಬೀದಿಗಿಯಳಿಯಲು ತಯಾರಿ!
ಬೆಂಗಳೂರು, ಮೇ. 17: ಸರ್ಕಾರಿ ನೌಕರರ ನಿವೃತ್ತಿ ಜೀವನವನ್ನು ಅಭದ್ರತೆಗೆ ತಳ್ಳುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವಂತೆ ಸರ್ಕಾರಿ ನೌಕರರು ಬೀದಿಗೆ ಇಳಿಯಲು ತಯಾರಿ ನಡೆಸಿದ್ದಾರೆ. ರಾಷ್ಟ್ರೀಯ ಪಿಂಚಣಿ ಯೋಜನೆ ವಾಪಸಿಗೆ ಆಗ್ರಹಿಸಿ ಸರ್ಕಾರಿ ನೌಕರರು ಹೋರಾಟಕ್ಕೆ ಇಳಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಬಜೆಟ್ ಘೋಷಣೆ ಮುನ್ನ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘ ಮನವಿ ಮಾಡಿತ್ತು. ಛತ್ತೀಸ್ಘಡ ಮತ್ತು ರಾಜಸ್ಥಾನ ಮಾದರಿಯಲ್ಲಿ ಕರ್ನಾಟಕದಲ್ಲಿ ಎನ್ಪಿಎಸ್ ಯೋಜನೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದರು. ಆದರೆ ಬೊಮ್ಮಾಯಿ ಸರ್ಕಾರ ಎನ್ಪಿಎಸ್ ರದ್ದು ಮಾಡುವ ಪ್ರಸ್ತಾಪ ಬಜೆಟ್ನಲ್ಲಿ ಮಾಡಿರಲಿಲ್ಲ.
ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಸತತ ಏರಿಕೆ, ಕೋವಿಡ್ ನಂತರ ರಾಷ್ಟ್ರಗಳಲ್ಲಿ ತೋರಿರುವ ಆರ್ಥಿಕ ಬಿಕ್ಕಟ್ಟು ಜಾಗತಿಕ ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬಿದ್ದಿದೆ. ಇದರಿಂದ ಭಾರತದ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ವಿವಿಧ ಕಂಪನಿಗಳು ಹಾಗೂ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಬಂಡವಾಳ ಹಿಂತೆಯುತ್ತಿದ್ದಾರೆ. ಈ ಬೆಳವಣಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ನೌಕರರನ್ನು ಅತಂಕಕ್ಕೆ ತಳ್ಳಿದೆ. ಹೀಗಾಗಿ ರಾಜಸ್ಥಾನ ಮತ್ತು ಛತ್ತೀಸಘಡ ಮಾದರಿಯಲ್ಲಿ ಎನ್ಪಿಎಸ್ ರದ್ದು ಮಾಡಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಎನ್ಪಿಎಸ್ ನೌಕರರು ರಾಜ್ಯದಲ್ಲಿ ಹೋರಾಟ ನಡೆಸಲು ತಯಾರಿ ನಡೆಸಿದ್ದಾರೆ.
ಎನ್ಪಿಎಸ್ ಯೋಜನೆಗೆ ನೌಕರರ ವಿರೋಧ ಯಾಕೆ:
ರಾಜ್ಯದಲ್ಲಿ 2006 ರಲ್ಲಿ ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ರಾಜ್ಯದ 2.54 ಲಕ್ಷ ನೌಕರರಿಂದ ಕಡಿತ ಮಾಡುವ ವಂತಿಗೆಯನ್ನು ಹಾಗೂ ಸರ್ಕಾರದ ಪಾಲನ್ನು (ಪೆನ್ಷನ್ ಫಂಡ್ ) ಪೆನ್ಷನ್ ಫಂಡ್ ರೆಗ್ಯುಲೇಟರಿ ಅಥಾರಿಟಿ ಮೂಲಕ ಟ್ರಸ್ಟೀ ಬ್ಯಾಂಕ್ ಗೆ ಜಮೆ ಮಾಡಲಾಗಿದೆ. 2006 ರಿಂದ ನೇಮಕವಾದ ಸರ್ಕಾರಿ ನೌಕರರಿಗೆ NPS ಯೋಜನೆ ಅಡಿ ಪಿಂಚಣಿ ನಿಗದಿ ಗೊಳಿಸಲಾಗುತ್ತಿದೆ. ರಾಜ್ಯದ 2. 54 ಲಕ್ಷ ರಾಜ್ಯ ಸರ್ಕಾರಿ ನೌಕರರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ. ಈ ಯೋಜನೆಯಡಿ ಸರ್ಕಾರಿ ನೌಕರನ ಪಾಲು ಶೇ. 10 ರಷ್ಟು ಮತ್ತು ಸರ್ಕಾರದ ಪಾಲು ಶೇ. 14 ರಷ್ಟು ಕಟಾವು ಮಾಡಿ ಪೆನ್ಸನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಪ್ಮೆಂಟ್ ಅಥಾರಿಟಿಯ ನ್ಯಾಷನಲ್ ಸೆಕ್ಯುರಿಟಿ ಅಂಡ್ ಡೆವಲಪ್ ಮೆಂಟ್ ಲಿ. ಪಾವತಿಸಲಾಗಿದೆ. ಈವರೆಗೂ ಸುಮಾರು 17,000 ಕೋಟಿ ರೂ. ಪಾವತಿ ಮಾಡಲಾಗಿದೆ.
ಈ ಹಣವನ್ನು ನಿರ್ವಹಣೆ ಮಾಡುವ ಮೂರು ಸಂಸ್ಥೆಗಳು ಷೇರುಮಾರುಕಟ್ಟೆಯಲ್ಲಿ ಈ ಹಣವನ್ನು ಹೂಡಿಕೆ ಮಾಡಿ ಗಳಸಿದ ಆದಾಯವನ್ನು ನಿವೃತ್ತಿಯಾದ ಬಳಿಕ ನೌಕರರಿಗೆ ಪಾವತಿ ಮಾಡಲಾಗುತ್ತದೆ. ಹಳೇ ಪಿಂಚಣಿ ಯೋಜನೆಗೆ ಹೋಲಿಸಿದ್ರೆ ನೌಕರರು ಕೋಟ್ಯಾಧ್ಯೀಶರಾಗಲಿದ್ದಾರೆ. ಸರ್ಕಾರದ ಹಳೇ ಪಿಂಚಣಿ ಯೋಜನೆಯಲ್ಲಿ ಸಿಗುವ ಬಡ್ಡಿಗಿಂತಲೂ ನಾಲ್ಕು ಪಟ್ಟು ಆದಾಯ ಹೆಚ್ಚು ಲಾಭ ಈ ಯೋಜನೆಯಿಂದ ಬರಲಿದೆ ಎಂದೇ ಬಿಂಬಿಸಲಾಗಿತ್ತು.
ಎನ್ಪಿಎಸ್ ರದ್ದತಿಗೆ ರಾಷ್ಟ್ರ ಮಟ್ಟದಲ್ಲಿ ಹೋರಾಟ:
ಇನ್ನು ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದು ಮಾಡುವಂತೆ ಅನೇಕ ಸಲ ಸರ್ಕಾರಕ್ಕೆ ಮನವಿ ಮಾಡಿದೆ. ಎನ್ಪಿಎಸ್ ಯೋಜನೆಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲೇ ಇಲ್ಲ. ಎನ್ಪಿಎಸ್ ಯೋಜನೆ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹೋರಾಟ ಆರಂಭವಾಗುತ್ತಿದ್ದಂತೆ ರಾಜಸ್ತಾನ ಮತ್ತು ಛತ್ತೀಸ್ ಘಡದಲ್ಲಿ ರದ್ದು ಮಾಡಲಾಗಿದೆ. ಇನ್ನು ಈ ರಾಷ್ಟ್ರಮಟ್ಟದಲ್ಲಿ ಎನ್ ಪಿಎಸ್ ಯೋಜನೆ ರದ್ದು ಮಾಡಬೇಕೆಂಬ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಕೆಲವು ರಾಜ್ಯಗಳಲ್ಲಿ ಸರ್ಕಾರಿ ನೌಕರರ ಹೋರಾಟಕ್ಕೆ ಮಣಿದು ಎನ್ಪಿಎಸ್ ರದ್ದು ಮಾಡಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ.
2500 ರೂ. ಬರುತ್ತೆ ನಿವೃತ್ತಿ ಬಳಿಕ ಪಿಂಚಣಿ!
"ವಾಸ್ತವದಲ್ಲಿ ಹನ್ನೆರಡು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ನೌಕರರು ಮಾಸಿಕ ಪಿಂಚಣಿ 978 ರೂ. ರಿಂದ 2500 ರೂ. ಪಡೆಯುತ್ತಿದ್ದಾರೆ. ಎನ್ಪಿಎಸ್ ಯೋಜನೆ ಐಎಎಸ್ ಐಪಿಎಸ್ ಅಧಿಕಾರಿಗಳಿಗೆ ಅನ್ವಯವಾಗಲ್ಲ. ಹೂಡಿಕೆ ಮಾಡಿದ ಹಣಕ್ಕೆ ಖಾತ್ರಿ ಇಲ್ಲ. ನಿಶ್ಚಿತ ಪಿಂಚಣಿ ಬರುವ ನಂಬಿಕೆಯೂ ಇಲ್ಲ. ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸದರೆ ಹಣ ವಾಪಸು ಸಿಗುವ ನಂಬಿಕೆಯೂ ಇಲ್ಲ. ಹೀಗಾಗಿ ಎನ್ಪಿಎಸ್ ನೌಕರರು ಅಭದ್ರತೆಗೆ ಒಳಗಾಗಿದ್ದು, ರಾಜ್ಯದಲ್ಲಿ ಎನ್ ಪಿಎಸ್ ಯೋಜನೆಯನ್ನು ರದ್ದು ಮಾಡಬೇಕು," ಎಂದು ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹಳೇ ಪಿಂಚಣಿ ಯೋಜನೆಯಲ್ಲಿ ಬಡ್ಡಿ ಖಾತ್ರಿ:
ಹಳೇ ಪಿಂಚಣಿ ಯೋಜನೆಯಲ್ಲಿ ನಿವೃತ್ತಿ ನೌಕರರು ನೆಮ್ಮದಿ ಜೀವನ ಸಾಗಿಸುತ್ತಿದ್ದರು. ನೂತನ ಪಿಂಚಣಿ ಯೋಜನೆಯಿಂದ ಬಿಡಿಗಾಸು ಬರುತ್ತಿಲ್ಲ. ಹೂಡಿಕೆ ಮಾಡಿದ ಹಣಕ್ಕೂ ಖಾತ್ರಿಯಿಲ್ಲ. ನಿವೃತ್ತಿ ಹೊಂದಿದ ನೌಕರರಿಗೆ ಸರಿಯಾದ ಪಿಂಚಣಿ ಸಿಗದೇ ನಿವೃತ್ತ ನೌಕರರು ಮತ್ತು ಅವರ ಅವಲಂಬಿತರು ನಿಕೃಷ್ಟ ಜೀವನ ನಡೆಸುತ್ತಿದ್ದಾರೆ. ಈ ಎನ್ಪಿಎಸ್ ಯೋಜನೆಯಿಂದ ನಿವೃತ್ತ ನೌಕರರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಸೂದೆಯ ಪ್ರಕಾರ ನೌಕರರ ವಂತಿಗೆ ಹಣಕ್ಕೆ ಯಾವುದೇ ಭದ್ರತೆ ಒದಗಿಸಿಲ್ಲ ಇದರಿಂದ ನೌಕರರು ನಿವೃತ್ತಿ ಬಳಿಕ ಅಭದ್ರತೆಗೆ ಒಳಗಾಗುತ್ತಿದ್ದಾರೆ ಎಂದು ಎನ್ ಪಿಎಸ್ ಯೋಜನೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಎನ್ಪಿಎಸ್ ನೌಕರರ ಸಂಘ ತಮ್ಮ ಅಳಲು ತೋಡಿಕೊಂಡಿದೆ.