ಶೇ.30ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸಿದ ಸರ್ಕಾರಿ ನೌಕರರು!
ಬೆಂಗಳೂರು, ಸೆ. 12: ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿರುವ ಶ್ರೀನಿವಾಸಮೂರ್ತಿ ನೇತೃತ್ವದ ಆರನೇ ವೇತನ ಆಯೋಗದ ಅವಧಿಯನ್ನು 2018ರ ಜನವರಿ 31ರವರೆಗೆ ವಿಸ್ತರಿಸಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ಆದರೆ, ವೇತನ ಪರಿಷ್ಕರಣೆ ವಿಳಂಬವಾಗಲಿದ್ದು, ಮಧ್ಯಂತರ ಪರಿಹಾರ ರೂಪದಲ್ಲಿ ಶೇ.30ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ.
ಸಿಬ್ಬಂದಿಗಳಿಗೆ ಸಂಬಳ ನೀಡುವುದರಲ್ಲಿ ಬೆಂಗಳೂರಿಗರೇ ಮುಂದು!
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಅವರು ಈ ಬಗ್ಗೆ ಮಾತನಾಡಿ, ಇತ್ತೀಚೆಗೆ ವೇತನ ಆಯೋಗ ಮತ್ತೆ ನಾಲ್ಕು ತಿಂಗಳು ಸಮಯ ನೀಡುವಂತೆ ಕೋರಿದೆ ಮತ್ತು ಸರ್ಕಾರ ಆಯೋಗದ ಅವಧಿಯನ್ನು ಈಗ ವಿಸ್ತರಿಸಿದೆ. ಮಧ್ಯಂತರ ಪರಿಹಾರಕ್ಕೆ ನಾಲ್ಕು ತಿಂಗಳು ಕಾಯುವಂತೆ ನಮಗೆ ಹೇಳಲಾಗಿತ್ತು. ಆದರೆ ಹೊಸ ವಿಸ್ತರಣೆಯ ಯೋಜನೆಯ ಅನ್ವಯ ಸರ್ಕಾರಕ್ಕೆ ಮಧ್ಯಂತರ ಪರಿಹಾರವಾಗಿ ಇದೇ ವರ್ಷ ಏಪ್ರಿಲ್ 01ರಿಂದ ಶೇ.30ರಷ್ಟು ವೇತನಗಳನ್ನು ಹೆಚ್ಚಿಸಲು ಕೋರುತ್ತಿದ್ದೇವೆ ಎಂದರು.
ಐಎಎಸ್ ನಿವೃತ್ತ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ಇದೇ ವರ್ಷದ ಜೂನ್ 1ರಂದು ವೇತನ ಆಯೋಗ ರಚಿಸಿ ಆದೇಶ ಹೊರಡಿಸಿದ್ದ ಸರ್ಕಾರ, ನಾಲ್ಕು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಈಗ ನವೆಂಬರ್ ತಿಂಗಳೊಳಗೆ ವರದಿ ಸಲ್ಲಿಸಲಿ ಹಾಗೂ ಈಗ ಮಧ್ಯಂತರ ಪರಿಹಾರ ನೀಡಲಿ ಎಂದು 6.4 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರ ಪರವಾಗಿ ಬಿಪಿ ಮಂಜೇಗೌಡ ಅವರು ವಾದಿಸಿದ್ದಾರೆ.