ಕೆರೆ ಡಿನೋಟಿಫಿಕೇಶನ್ ಕೈಬಿಟ್ಟಿದ್ದೇವೆ : ರಾಜ್ಯಪಾಲರಿಗೆ ಸಿಎಂ ಪತ್ರ
ಬೆಂಗಳೂರು, ಆಗಸ್ಟ್ 30: ಕೆರೆಗಳ ಡಿನೋಟಿಫಿಕೇಷನ್ ಪ್ರಸ್ತಾಪವನ್ನು ಕೈಬಿಟ್ಟಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ಹಲವು ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಘ ಸಂಸ್ಥೆಗಳು ಕೆರೆ ಡಿನೋಟಿಫಿಕೇಷನ್ ಪ್ರಸ್ತಾಪ ಕೈ ಬಿಡಲು ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ಈ ಸಂಬಂಧ ರಾಜ್ಯ ಸರ್ಕಾರದ ತೀರ್ಮಾನವನ್ನು ಕೇಳಿ ರಾಜ್ಯಪಾಲರು ರಾಜ್ಯ ಸರಕಾರಕ್ಕೆ 18 ಆಗಸ್ಟ್ 2017ರಂದು ಪತ್ರ ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರಕಾರ, 'ಕೆರೆ ಡಿನೋಟಿಫಿಕೇಷನ್ ಪ್ರಸ್ತಾಪ ಕೈ ಬಿಟ್ಟಿರುವುದಾಗಿ' ಹೇಳಿದೆ.
ಈ ಕುರಿತು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, "1964ರ ಭೂ ಕಂದಾಯ ಕಾಯಿದೆಯ ಸೆಕ್ಷನ್ 68ಕ್ಕೆ ತಿದ್ದುಪಡಿ ತರಲು ರಾಜ್ಯ ಸರಕಾರ ಹೊರಟಿತ್ತು. ಪುನರುಜ್ಜೀವನಗೊಳಿಸಲಾಗದ ಕೆರೆಗಳ ಜಮೀನನ್ನು ಜನರಿಗೆ ಉಪಯೋಗಕ್ಕೆ ಸಿಗುವಂತೆ ಮಾಡುವ ಉದ್ದೇಶದಿಂದ ಈ ತಿದ್ದುಪಡಿಗೆ ಸರಕಾರ ಮುಂದಾಗಿತ್ತು," ಎಂದು ಹೇಳಿದ್ದಾರೆ.
ಈ ಕುರಿತು ಅಭಿಪ್ರಾಯ ಕೋರಿ ಕರಡು ತಿದ್ದುಪಡಿಯನ್ನು ವಿವಿಧ ಇಲಾಖೆಗಳಿಗೆ ಕಳುಹಿಸಿಕೊಡಲಾಗಿತ್ತು. ಇಲಾಖೆಗಳ ಅಭಿಪ್ರಾಯದ ಮೇಲೆ ಡಿನೋಟಿಫಿಕೇಶನ್ ಕೈ ಬಿಟ್ಟಿರುವುದಾಗಿ ಮುಖ್ಯಮಂತ್ರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಹೀಗಾಗಿ ಯಾವುದೇ ಕಾಯಿದೆಗಳಿಗೆ ತಿದ್ದುಪಡಿ ತರುತ್ತಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.