ಕಾಲೇಜು ಮತ್ತೆ ಆರಂಭ: ತರಗತಿಗಳು ಹೇಗೆ ನಡೆಯಲಿವೆ? ಇಲ್ಲಿದೆ ವಿವರ
ಬೆಂಗಳೂರು, ಅಕ್ಟೋಬರ್ 23: ನವೆಂಬರ್ 17 ರಿಂದ ಪದವಿ ಕಾಲೇಜುಗಳನ್ನು ಪುನರಾರಂಭಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.
ನವೆಂಬರ್ 17ರಿಂದ ಪದವಿ ತರಗತಿಗಳು, ಎಂಜನಿಯರಿಂಗ್ ಹಾಗೂ ಡಿಪ್ಲೊಮಾ ಕಾಲೇಜುಗಳಲ್ಲಿ ಪಠ್ಯ ಚಟುವಟಿಕೆಗಳನ್ನು ಆರಂಭಿಸಲಾಗುವುದು ಎಂದು ಅಶ್ವತ್ಥ ನಾರಾಯಣ ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಆದರೆ ವಿದ್ಯಾರ್ಥಿಗಳು ಪಾಠ ಕೇಳಲು ತರಗತಿಗೆ ಹಾಜರಾಗುವುದು ಕಡ್ಡಾಯವಲ್ಲ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಪದವಿ ಕಾಲೇಜುಗಳನ್ನು ಪ್ರಾರಂಭಿಸುವ ಕುರಿತಂತೆ ಚರ್ಚಿಸಲು ಇಂದು ಗೃಹ ಕಛೇರಿ ಕೃಷ್ಣಾದಲ್ಲಿ ಸಭೆ ಜರುಗಿತು. ನವೆಂಬರ್ 17ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಡಿಸಿಎಂ ಅಶ್ವಥ್ ನಾರಾಯಣ್, ಶಿಕ್ಷಣ ಸುಧಾರಣೆಗಳ ಸಲಹೆಗಾರ ಹಾಗೂ ಶಿಕ್ಷಣ ತಜ್ಞ ಪ್ರೊ.ಎಂ.ಆರ್. ದೊರೆಸ್ವಾಮಿ, ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಎನ್. ಕುಮಾರ್ ನಾಯಕ್, ಶಿಕ್ಷಣ ಆಯುಕ್ತ ಪ್ರದೀಪ್ ಕುಮಾರ್ ಭಾಗವಹಿಸಿದ್ದರು. ಮುಂದೆ ಓದಿ.
ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದು
ಕಾಲೇಜಿಗೆ ಬಂದು ಪಾಠ ಕೇಳುವುದು ವಿದ್ಯಾರ್ಥಿಗಳ ಇಚ್ಛೆಗೆ ಬಿಟ್ಟಿರುತ್ತದೆ. ಸ್ವಯಂ ಪ್ರೇರಣೆಯಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬಹುದು. ಅದಕ್ಕೆ ಅವರು ಒಪ್ಪಿಗೆ ಪತ್ರವನ್ನು ನೀಡಬೇಕು. ವಿದ್ಯಾರ್ಥಿಗಳು ಮತ್ತು ಪೋಷಕರು ಒಪ್ಪಿಗೆ ಇದ್ದರೆ ಮಾತ್ರ ಕಾಲೇಜಿಗೆ ಬರಬಹುದು. ಯಾರಿಗೂ ಕಾಲೇಜಿಗೆ ಬರುವಂತೆ ಬಲವಂತ ಮಾಡುವುದಿಲ್ಲ ಎಂದು ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಅನ್ಲೈನ್ ತರಗತಿಗೆ ಹಾಜರಾಗಬಹುದು
ಕಾಲೇಜಿಗೆ ಬರಲು ಬಯಸದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಹಾಜರಾಗಬಹುದು. ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಶಿಫ್ಟ್ ಅಥವಾ ಬ್ಯಾಚ್ ಆಧಾರದಲ್ಲಿ ತರಗತಿಗಳನ್ನು ನಡೆಸುವ ಬಗ್ಗೆ ತೀರ್ಮಾನ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರತಿ ಕಾಲೇಜಲ್ಲೂ ಟಾಸ್ಕ್ ಫೋರ್ಸ್
ಯುಜಿಸಿ ನೀಡಿರುವ ಮಾರ್ಗಸೂಚಿಗಳು ಹಾಗೂ ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ತರಗತಿಗಳನ್ನು ನಡೆಸಲಾಗುತ್ತದೆ. ಕಾಲೇಜುಗಳ ನಿರ್ವಹಣೆ ಬಗ್ಗೆ ಪ್ರತಿ ಕಾಲೇಜಿನಲ್ಲಿಯೂ ಟಾಸ್ಕ್ ಫೋರ್ಸ್ ರಚನೆಗೆ ಸೂಚಿಸಲಾಗಿದೆ. ಹಾಸ್ಟೆಲ್ಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪಠ್ಯ ಕಡಿತ ಇಲ್ಲ
ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ತರಗತಿಗಳನ್ನು ನಡೆಸಲಾಗುತ್ತದೆ. ಪ್ರಸಕ್ತ ಸಾಲಿನ ಪದವಿ ತರಗತಿಗಳ ಪಠ್ಯ ಕ್ರಮದಲ್ಲಿ ಕಡಿತ ಮಾಡುವುದಿಲ್ಲ. ಸಾಕಷ್ಟು ಪೂರ್ವಭಾವಿ ಸಭೆಗಳನ್ನು ನಡೆಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ವಾರಾಂತ್ಯದಲ್ಲಿ ಪ್ರಾಕ್ಟಿಕಲ್ ತರಗತಿ
ಒಂದು ಬೆಂಚ್ನಲ್ಲಿ ಗರಿಷ್ಠ ಮೂರು ವಿದ್ಯಾರ್ಥಿಗಳು ಮಾತ್ರ ಕೂರಬಹುದು. ಹಾಗೆಯೇ ಒಂದು ತರಗತಿಯಲ್ಲಿ ಗರಿಷ್ಠ 50 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಹೆಚ್ಚಿನ ವಿದ್ಯಾರ್ಥಿಗಳಿದ್ದರೆ ತರಗತಿ ವಿಂಗಡಣೆ ಮಾಡಬೇಕು. ತರಗತಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ಸ್ಯಾನಿಟೈಸರ್ ಮತ್ತು ಮಾಸ್ಕ್ ಕಡ್ಡಾಯವಾಗಿರಲಿದೆ. ಪ್ರಾಕ್ಟಿಕಲ್ ತರಗತಿಗಳಿಗೆ ವಾರಾಂತ್ಯದಲ್ಲಿ ಮಾತ್ರ ಅವಕಾಶ. ವಿದ್ಯಾರ್ಥಿಗಳು ಗುಂಪಗೂಡುವುದನ್ನು ತಡೆಯಬೇಕು ಎಂದು ನಿರ್ದೇಶನ ನೀಡಲಾಗಿದೆ.
ಆರೋಗ್ಯ ತಪಾಸಣೆ ಮಾಡಬೇಕು
ಎಲ್ಲ ಜಿಲ್ಲೆಗಳ ಡಿಸಿಗಳ ನೇತೃತ್ವದಲ್ಲಿ ಕಾಲೇಜು ನಿರ್ವಹಣೆ ನಡೆಸಬೇಕು. ಪರೀಕ್ಷೆಗಳನ್ನು ಮಾರ್ಚ್ ಅಂತ್ಯ ಅಥವಾ ಏಪ್ರಿಲ್ನಲ್ಲಿ ನಡೆಸಬಹುದು. ಕಾಲೇಜು ಆರಂಭಕ್ಕೂ ಮುನ್ನ ಆರೋಗ್ಯ ತಪಾಸಣೆ ಮಾಡಿಸಬೇಕು. ತರಗತಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಕಂಡುಬಂದರೆ ಅವರ ಪೋಷಕರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
Recommended Video
ಪಿಯು ತರಗತಿ ಸದ್ಯಕ್ಕಿಲ್ಲ
ರಾಜ್ಯದಲ್ಲಿ ಪಿಯುಸಿ ತರಗತಿಗಳನ್ನು ಮರು ಆರಂಭಿಸುವ ಪ್ರಸ್ತಾವ ಸದ್ಯಕ್ಕೆ ಇಲ್ಲ ಎಂದು ಸರ್ಕಾರ ತಿಳಿಸಿದೆ. ಇತ್ತೀಚೆಗಷ್ಟೇ ಪಿಯು ಪಠ್ಯಕ್ರಮದಲ್ಲಿ ಶೇ 30ರಷ್ಟು ಕಡಿತಗೊಳಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧಾರ ತೆಗೆದುಕೊಂಡಿತ್ತು. ಹೀಗಾಗಿ ಆನ್ಲೈನ್ ತರಗತಿಗಳು ಮಾತ್ರವೇ ಮುಂದುವರಿಯಲಿದೆ.