ಕೋವಿಡ್ ಆಸ್ಪತ್ರೆಯಿಂದ ಯಡಿಯೂರಪ್ಪ ಡಿಸ್ಚಾರ್ಜ್: ಸರ್ಕಾರದ ಸ್ಪಷ್ಟನೆ
ಬೆಂಗಳೂರು, ಆ. 07: ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೊನಾ ವೈರಸ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಯಡಿಯೂರಪ್ಪ ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದರೂ ವಯಸ್ಸಿನ ಹಿನ್ನೆಲೆಯಲ್ಲಿ ಕಳೆದ ಭಾನುವಾರವೇ ಆಸ್ಪತ್ರೆಗೆ ದಾಖಲಾಗಿದ್ದರು.
Recommended Video
ಸಿಎಂ ಯಡಿಯೂರಪ್ಪ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾದ ಮರುದಿನವೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದೀಗ ಬಿಎಸ್ವೈ ಅವರು ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆಂಬ ಸುದ್ದಿ ಬಂದಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟನೆ ಕೊಟ್ಟಿದೆ.
ಸಿಎಂ ಡಿಸ್ಚಾರ್ಜ್?
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಣಿಪಾಲ್ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂಬ ದಿಢೀರ್ ಸುದ್ದಿ ಕೆಲವು ವಾಹಿನಿಗಳಲ್ಲಿ ಪ್ರಸಾರವಾಗಿದೆ. ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊಟ್ಟಿರುವ ಕೋವಿಡ್ ಪಾಸಿಟಿವ್ ಸಂಖ್ಯೆಯನ್ನು ತಪ್ಪಾಗಿ ಬಿತ್ತರಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಯಡಿಯೂರಪ್ಪ ಆಸ್ಪತ್ರೆಯಿಂದಲೇ ಕಾರ್ಯನಿರ್ವಹಿಸಬೇಕಾಗಿದೆ
ಆರೋಗ್ಯ ಇಲಾಖೆ ದಿನಾಂಕ 04.08.2020 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದೆ ಎಂದು ತಪ್ಪು ಸುದ್ದಿ ಪ್ರಸಾರ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಆದರೆ ಸಿಎಂ ಯಡಿಯೂರಪ್ಪ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಗುರುತಿನ ಸಂಖ್ಯೆ
ಈ ಮೂಲಕ ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಮಾಧ್ಯಮಗಳಿಗೆ ತಿಳಿಯ ಪಡಿಸುವುದೇನೆಂದರೆ, ಇಲಾಖೆಯು ಸೋಂಕಿತ ರೋಗಿಗೆ 2 ಗುರುತಿನ ಸಂಖ್ಯೆಯನ್ನು ನೀಡುತ್ತದೆ. ಒಂದು ರಾಜ್ಯದ ಗುರುತಿನ ಸಂಖ್ಯೆ (State Identification Number), ಎರಡನೆಯದ್ದು ಆಯಾ ಜಿಲ್ಲೆಗಳ ಗುರುತಿನ ಸಂಖ್ಯೆ (District Identification Number).
TV ಮಾಧ್ಯಮಗಳಲ್ಲಿ ರೋಗಿಯೊಬ್ಬರ ರಾಜ್ಯ ಗುರುತಿನ ಸಂಖ್ಯೆ 61718ಯನ್ನು (52 ವರ್ಷ, ಪುರುಷ, ಬೆಂಗಳೂರು) ಮುಖ್ಯಮಂತ್ರಿ ಯಡಿಯೂರಪ್ಪ ಗುರುತಿನ ಸಂಖ್ಯೆಯೊಂದಿಗೆ ತಪ್ಪಾಗಿ ಹೋಲಿಕೆ ಮಾಡಿ, ತಪ್ಪು ಮಾಹಿತಿ ಪ್ರಸಾರ ಮಾಡಲಾಗುತ್ತಿದೆ.
ಸಿಎಂ ಗುರುತಿನ ಸಂಖ್ಯೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಲಾಗಿರುವ ಜಿಲ್ಲಾ ಗುರುತಿನ ಸಂಖ್ಯೆ (Bengaluru Identification Number) 61718 ಆಗಿದ್ದು, ರಾಜ್ಯ ಗುರುತಿನ ಸಂಖ್ಯೆಯೂ ಬೇರೆ ಇದೆ.
ಕೋವಿಡ್ ಸೋಂಕು; ಬಿ. ಎಸ್. ಯಡಿಯೂರಪ್ಪ ಹೆಲ್ತ್ ಬುಲೆಟಿನ್
ಈ ಮೂಲಕ ಮಾಧ್ಯಮಗಳು ಸೂಕ್ಷ್ಮ ವಿಚಾರಗಳನ್ನು ಪ್ರಸಾರ ಮಾಡುವ ಮೊದಲು ಇಲಾಖೆಯೊಂದಿಗೆ ಪರಿಶೀಲಿಬೇಕು. ರಾಜ್ಯದ ಜನರಿಗೆ ಸರಿಯಾದ ಮಾಹಿತಿಯನ್ನು ಕೊಡಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಶಾಸಕರ ನಿಧನ ಸುದ್ದಿ
ಕಳೆದ ನಾಲ್ಕು ದಿನಗಳ ಹಿಂದೆ, ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಸತ್ಯನಾರಾಯಣ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ನಿಧನ ಹೊಂದಿದ್ದಾರೆ ಎಂಬ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ವಾಹಿನಿಗಳಲ್ಲಿ ಬಂದಿದ್ದ ಸುದ್ದಿಯನ್ನು ಗಮನಿಸಿ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಬಹುತೇಕ ನಾಯಕರು ಸಂತಾಪ ಸೂಚಿಸಿದ್ದರು.
ಅದಾದ ಬಳಿಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯರು ಶಾಸಕ ಸತ್ಯನಾರಾಯಣ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಪ್ರಯತ್ನ ನಡೆಸಿದ್ದಾರೆಂದು ಸ್ಪಷ್ಟನೆ ಕೊಟ್ಟಿದ್ದರು. ಅದಾದ ಮರುದಿನ ಶಾಸಕ ಸತ್ಯನಾರಾಯಣ ಅವರು ಮೃತಪಟ್ಟಿದ್ದರು.