ವಲಸೆ ಕಾರ್ಮಿಕರಿಗಾಗಿ ಬೇಡಿಕೆ ಇಟ್ಟಿದ್ದ ರೈಲು ರದ್ದುಗೊಳಿಸಿದ ಕರ್ನಾಟಕ
ಬೆಂಗಳೂರು, ಮೇ 06 : ವಲಸೆ ಕಾರ್ಮಿಕರನ್ನು ತವರು ರಾಜ್ಯಕ್ಕೆ ಕಳಿಸಲು ಕರ್ನಾಟಕ ಸರ್ಕಾರ ರೈಲುಗಳಿಗಾಗಿ ಬೇಡಿಕೆ ಇಟ್ಟಿತ್ತು. ಆದರೆ, ಈಗ ರೈಲುಗಳ ಅವಶ್ಯಕತೆ ಇಲ್ಲ ಎಂದು ಇಲಾಖೆಗೆ ಪತ್ರ ಬರೆದಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಲಯದ ಜನರಲ್ ಮ್ಯಾನೇಜರ್ಗೆ ಈ ಕುರಿತು ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗದಂತೆ ಮನವಿ ಮಾಡಿದ್ದರು.
'ಶ್ರಮಿಕ್ ವಿಶೇಷ ರೈಲು' ವಿವಾದ ಎಬ್ಬಿಸಿದ್ದು ಏಕೆ?
ದಿನಕ್ಕೆ 2 ರೈಲುಗಳಂತೆ 5 ದಿನಗಳ ಕಾಲ ಹತ್ತು ರೈಲುಗಳನ್ನು ಓಡಿಸುತ್ತೇವೆ ಎಂದು ಕರ್ನಾಟಕ ಸರ್ಕಾರ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿತ್ತು. ಬುಧವಾರದಿಂದ ನಮಗೆ ರೈಲುಗಳು ಬೇಡ. ನಮ್ಮ ವಿನಂತಿಯನ್ನು ವಾಪಸ್ ಪಡೆಯುತ್ತೇವೆ ಎಂದು ಮಂಗಳವಾರ ಪತ್ರ ಬರೆಯಲಾಗಿದೆ.
ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಲ್ಡರ್ ಮತ್ತು ಗುತ್ತಿಗೆದಾರರ ಜೊತೆ ಮಂಗಳವಾರ ಸಂಜೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಆಧರಿಸಿ ರೈಲುಗಳನ್ನು ರದ್ದುಪಡಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕಾರ್ಮಿಕರು, ವಲಸಿಗರ ಪಾಲಿನ ಸಾರಥಿ ಶ್ರಮಿಕ ರೈಲು
ಸಭೆಯಲ್ಲಿ ಪಾಲ್ಗೊಂಡಿದ್ದ ಬಿಲ್ಡರ್ಗಳು ನಿರ್ಮಾಣ ಚಟುವಟಿಕೆಗಳನ್ನು ಪುನಃ ಆರಂಭಿಸಲು ನಮಗೆ ಕಾರ್ಮಿಕರು ಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ರೈಲುಗಳನ್ನು ರದ್ದುಪಡಿಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಈಗಾಗಲೇ ಮೂರು ರೈಲುಗಳಲ್ಲಿ ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಬಿಹಾರಕ್ಕೆ ತೆರಳಲು 53 ಸಾವಿರ ವಲಸೆ ಕಾರ್ಮಿಕರು ಹೆಸರು ನೋಂದಣಿ ಮಾಡಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ನಮ್ಮ ಮೆಟ್ರೋ, ವಿವಿಧ ಅಪಾರ್ಟ್ಮೆಂಟ್, ಬಿಬಿಎಂಪಿಯ ಹಲವು ಕಾಮಗಾರಿಯಲ್ಲಿ ಸಾವಿರಾರು ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ರೈಲುಗಳನ್ನು ಬುಕ್ ಮಾಡಿ ಇವರನ್ನು ವಾಪಸ್ ಕಳಿಸಿದರೆ ಬೆಂಗಳೂರು ನಗರದಲ್ಲಿ ನಿರ್ಮಾಣ ಚಟುವಟಿಕೆಗೆ ಕಾರ್ಮಿಕರ ಕೊರತೆ ಎದುರಾಗಲಿದೆ.