ಬಂಡಾಯ ಶಮನಕ್ಕಾಗಿ ಜೂನ್ 17ರಂದು ಸಚಿವ ಸಂಪುಟ ವಿಸ್ತರಣೆ
ಬೆಂಗಳೂರು, ಜೂನ್ 14: ಅಂದುಕೊಂಡಂತೆ ನಡೆದರೆ ಇದೇ ಜೂನ್ 17ರಂದು ಭಾನುವಾರ ಎಚ್.ಡಿ. ಕುಮಾರಸ್ವಾಮಿ ಸರಕಾರದ ಸಂಪುಟ ವಿಸ್ತರಣೆ ನಡೆಯಲಿದೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಗಳಿಗೆ ಲಗಾಮು ಹಾಕಲು ಈ ನಿರ್ಧಾರಕ್ಕೆ ಬರಲಾಗಿದೆ.
ಒಟ್ಟು ಜೆಡಿಎಸ್ ಖೋಟಾದಲ್ಲಿ 1 ಮತ್ತು ಕಾಂಗ್ರೆಸ್ ಖೋಟಾದಲ್ಲಿ 6 ಸಚಿವ ಸ್ಥಾನಗಳು ಖಾಲಿ ಇವೆ. ಇದರಲ್ಲಿ ಕಾಂಗ್ರೆಸ್ ತನ್ನ ಖೋಟಾದ 4 ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗಿದೆ ಎಂದು ಮೂಲಗಳು ಹೇಳಿವೆ.
ತಮ್ಮ ಪಕ್ಷದಲ್ಲಿ ಬಂಡಾಯ ಚಟುವಟಿಕೆಗಳು ಜೋರಾಗಿರುವುದನ್ನು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗಮನಕ್ಕೆ ತಂದಿರುವುದಲ್ಲದೆ, ಸಚಿವ ಸಂಪುಟ ವಿಸ್ತರಣೆಗೆ ಅವರ ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ಇದೇ ಭಾನುವಾರ ಮತ್ತೊಂದು ಸುತ್ತಿನ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ನಿಂದ ಯಾರೆಲ್ಲಾ ಸಚಿವರಾಗುತ್ತಾರೆ? ಅತೃಪ್ತ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಎಚ್.ಕೆ. ಪಾಟೀಲ್ ರಂಥ ಪ್ರಮುಖರಿಗೆ ಮಣೆ ಹಾಕ್ತಾರಾ ಕಾದು ನೋಡಬೇಕಿದೆ.