35 ಸಾವಿರ ದೇಗುಲಗಳಲ್ಲಿ ಕುಂಕುಮ, ಗಂಧ ಬಳಕೆ ಬಗ್ಗೆ ಮಹತ್ವದ ಆದೇಶ
ಬೆಂಗಳೂರು, ಅಕ್ಟೋಬರ್ 31: ರಾಜ್ಯದ ಮುಜರಾಯಿ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಯಥೇಚ್ಛವಾಗಿ ಕಲಬೆರೆಕೆ ಕುಂಕುಮ, ಶ್ರೀಗಂಧ ಬಳಕೆ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ಕೊನೆಗೂ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ.
ದೇಹಕ್ಕೆ ಮಾರಕವಾಗಿರುವ ಕಲಬೆರಕೆ ಕುಂಕುಮ ಮತ್ತು ಶ್ರೀಗಂಧ ಮಾರಾಟ ಮತ್ತು ಬಳಕೆಯನ್ನು ನಿಷೇಧಕ್ಕೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆದೇಶ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ ಪೂಜಾರಿ, ಮೊದಲಿಗೆ ಮುಜರಾಯಿ ದೇವಾಲಯಗಳಲ್ಲಿ ಮೊದಲ ಹಂತದಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ, ಶ್ರೀಗಂಧ ಬಳಕೆ ಮತ್ತು ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗುವುದು, ಕುಂಕುಮ ಬಣ್ಣ ಹೆಚ್ಚಿಸಲು ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಬಂದಿರುವ ದೂರುಗಳನ್ನು ಪರಿಗಣಿಸಿ ಕ್ರಮ ತೆಗದುಕೊಳ್ಳಲಾಗುತ್ತಿದೆ ಎಂದರು.
ಮುಜರಾಯಿ ದೇವಾಲಯಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವ ವರದಿ ಬಂದಿದ್ದು, ಭದ್ರತೆ ಒದಗಿಸುವ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಸಭೆ ನಡೆಸಿ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 36 ಸಾವಿರಕ್ಕೂ ಅಧಿಕ ದೇಗುಲಗಳಿದ್ದು, ಈ ಪೈಕಿ 15 ಸಾವಿರ ದೇಗುಲಗಳಿಗೆ ಉತ್ತಮ ಆದಾಯವಿದೆ, ದೇಗುಲಗಳಲ್ಲಿ ಶುದ್ಧ ನೈಸರ್ಗಿಕವಾದ ಗಂಧ, ಕುಂಕುಮವನ್ನು ದೇವರ ಅರ್ಚನೆಗೆ, ಪ್ರಸಾದ ರೂಪದಲ್ಲಿ ನೀಡಲು ಬಳಸಬೇಕು ಎಂದು ಆದೇಶ ನೀಡಿದ್ದಾರೆ.