ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೈ ತಪ್ಪಿದ 'ಕಾವೇರಿ'!
ಬೆಂಗಳೂರು, ಅಕ್ಟೋಬರ್ 27 : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 'ಕಾವೇರಿ' ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಕರ್ನಾಟಕ ಸರ್ಕಾರ ಸಿದ್ದರಾಮಯ್ಯಗೆ ಬೇರೆ ಬಂಗಲೆಯನ್ನು ಹಂಚಿಕೆ ಮಾಡಿದೆ. ಆದ್ದರಿಂದ, ಕಾವೇರಿ ಖಾಲಿ ಮಾಡುವುದು ಅನಿವಾರ್ಯವಾಗಿದೆ.
ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಮಾರಕೃಪಾ ಪೂರ್ವದ ನಂ. 1 ಬಂಗಲೆಯನ್ನು ಮರು ಹಂಚಿಕೆ ಮಾಡಲಾಗಿದೆ. 'ಕಾವೇರಿ' ನಿವಾಸದಲ್ಲಿ ಸಿದ್ದರಾಮಯ್ಯ ಕಳೆದ 6 ವರ್ಷಗಳಿಂದ ವಾಸ್ತವ್ಯ ಹೂಡಿದ್ದರು.
'ಕಾವೇರಿ' ಖಾಲಿ ಮಾಡಲು ಸಿದ್ದರಾಮಯ್ಯಗೆ 4 ದಿನದ ಗಡುವು
ನಂ. 1 ಬಂಗಲೆ ಮೊದಲು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಹಂಚಿಕೆಯಾಗಿತ್ತು. ಸಿದ್ದರಾಮಯ್ಯಗೆ ಮೊದಲು ಹಂಚಿಕೆಯಾಗಿದ್ದ ರೇಸ್ ಕೋರ್ಸ್ ರಸ್ತೆಯ ನಂ. 2 ರೇಸ್ ವ್ಯೂ ಬಂಗಲೆಯನ್ನು ಕಾಗೇರಿಗೆ ಹಂಚಿಕೆ ಮಾಡಲಾಗಿದೆ.
ಇನ್ನೂ ಸರ್ಕಾರಿ ಬಂಗಲೆ ಬಳಸುತ್ತಿರುವ ರಮೇಶ್ ಜಾರಕಿಹೊಳಿ
ಬಿಜೆಪಿ ಸರ್ಕಾರ ಕಾವೇರಿಯನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಹಂಚಿಕೆ ಮಾಡಿತ್ತು. ರೇಸ್ ವ್ಯೂ ಬಂಗಲೆಯನ್ನು ಸಿದ್ದರಾಮಯ್ಯಗೆ ಹಂಚಿಕೆ ಮಾಡಲಾಗಿತ್ತು. ಕುಮಾರ ಕೃಪಾ ಪೂರ್ವದ ನಂ.1 ಬಂಗಲೆಯನ್ನು ನೀಡುವಂತೆ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.
6 ವರ್ಷದ ಬಳಿಕ ಕಾವೇರಿ ತೊರೆಯುವ ಅನಿವಾರ್ಯತೆಯಲ್ಲಿ ಸಿದ್ದರಾಮಯ್ಯ
ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಕಾವೇರಿ ನಿವಾಸದಲ್ಲಿ ನೆಲೆಸಿದ್ದರು. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಚಿವ ಕೆ. ಜೆ. ಜಾರ್ಜ್ಗೆ ನಿವಾಸ ಹಂಚಿಕೆ ಮಾಡಲಾಗಿತ್ತು. ಆದರೆ, ಸಿದ್ದರಾಮಯ್ಯ ಅಲ್ಲೇ ವಾಸ್ತವ್ಯ ಹೂಡಿದ್ದರು.
ಈಗ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಗೆ ಬರಲು ತಡವಾಗುತ್ತಿದೆ ಎಂಬ ಕಾರಣಕ್ಕೆ ಸರ್ಕಾರ ಕಾವೇರಿಯನ್ನು ಅವರಿಗೆ ಹಂಚಿಕೆ ಮಾಡಿದೆ. ಡಾಲರ್ಸ್ ಕಾಲೋನಿ ಧವಳಗಿರಿಯಲ್ಲಿರುವ ಯಡಿಯೂರಪ್ಪ ಕಾವೇರಿಗೆ ಆಗಮಿಸಲಿದ್ದಾರೆ.