"ಹಾಲಿನ ದರ ಏರಿಸಿಯೂ ಮೋಸ ಮಾಡುತ್ತಿರುವ ಸರ್ಕಾರ"
ಜನವರಿ, ಜನವರಿ, 05: ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿದ್ದರೂ ಅದರಿಂದ ರೈತರಿಗೆ ಯಾವ ಲಾಭವಾಗುತ್ತಿಲ್ಲ. ಆಡಳಿತ ವೆಚ್ಚ ಸರಿದೂಗಿಸಲು ಹೆಚ್ಚಳ ಮಾಡಿದೆಯೇ ವಿನಃ ರೈತರಿಗೆ ನೆರವು ನೀಡಲು ಅಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಾಲಿಗೆ ವೈಜ್ಞಾನಿಕ ಬೆಲೆ ಕೊಡುವುದಾದರೆ ಲೀಟರ್ ಒಂದಕ್ಕೆ 101 ರೂಗಳನ್ನು ನೀಡಿ ಎಂದು ಆಗ್ರಹಿಸಿದ್ದಾರೆ.[ಹಾಲಿನ ದರ 4 ರೂ ಏರಿಕೆ, ಎಲ್ಲಿ ದರ ಎಷ್ಟಿದೆ?]
ಸರ್ಕಾರಿ ನೌಕರರಿಗೆ 6ನೇ ವೇತನ ಅಯೋಗ 7ನೇ ವೇತನ ಅಯೋಗ ಜಾರಿ ಗೊಳಿಸುವ ಸರ್ಕಾರಕ್ಕೆ ರೈತರ ಪರವಾಗಿ ನಿಜ ಕಾಳಜಿ ಇಲ್ಲ. ಹೆಚ್ಚುವರಿ ಸಂಗ್ರಹವಾಗುವ ಹಣವನ್ನು ಸಂಸ್ಥೆಯ ಆಡಳಿತ ವೆಚ್ಚಕ್ಕೆ ಬಳಕೆ ಮಾಡಿ ಉಳಿದರೆ ಅದನ್ನು ರೈತರಿಗೆ ನೇರವಾಗಿ ತಲುಪಿಸಬೇಕೆಂದು ಸರ್ಕಾರ ತೀರ್ಮಾನ ಅವೈಜ್ಞಾನಿಕ ಎಂದು ದೂರಿದ್ದಾರೆ.
ರೈತರ ಉತ್ಪಾದನಾ ವೆಚ್ಚ ಮತ್ತು ನಷ್ಟವನ್ನು ಸರಿದೂಗಿಸಲು ಸರ್ಕಾರ ಪ್ರಯತ್ನ ಮಾಡಲೇ ಇಲ್ಲ. ಪಂಜಾಬ್ ನಲ್ಲಿ ರೈತರಿಗೆ ಒಂದು ಲೀಟರಿಗೆ 50 ರೂ ನೀಡುತ್ತಿದ್ದಾರೆ. ಆಂಧ್ರ ಹಾಗೂ ತಮಿಳುನಾಡುಗಳಲ್ಲಿ 39-40 ರೂಗಳು ನೀಡುತ್ತಿದ್ದಾರೆ. ಸರ್ಕಾರ ಇಲ್ಲಿ ಗ್ರಾಹಕರ ಜೇಬಿಗೂ ಕತ್ತರಿ ಹಾಕಿ, ರೈತರಿಗೂ ಮೋಸ ಮಾಡಿ, ಆಡಳಿತ ವೆಚ್ಚ ಮಾಡಲು ಪ್ರತಿ ಸಾರಿ ಬೆಲೆ ಹೆಚ್ಚು ಮಾಡುತ್ತಿರುವುದು ತಪ್ಪು ಎಂದು ಚಂದ್ರಶೇಖರ್ ವಾದ ಮುಂದಿಟ್ಟಿದ್ದಾರೆ.[ಲೀಟರ್ ಹಾಲಿಗೆ 30 ರು. ಕೊಟ್ಟರೆ ಸಾಕು]
ರಾಜ್ಯದಲ್ಲಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅತ್ಮಹತ್ಯೆಯ ದಾರಿ ಹಿಡಿಯುತ್ತಿರುವುದನ್ನು ತಪ್ಪಿಸಲು ರೈತರ ನೆರವಿಗೆ ಬರಬೇಕಾದ ಸರ್ಕಾರ ರೈತರನ್ನು ಮೋಸ ಮಾಡುತ್ತಿರುವುದು ದುರದೃಷ್ಟವೇ ಸರಿ. ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆ ತುಂಬಾ ಕಡಿಮೆ ಇದ್ದರು, ಈಗ ಏರಿಸಿರುವ ಬೆಲೆಯನ್ನು ವಿರೋಧಿಸಿ ಮೊನ್ನೆ ಚಳವಳಿ ಮಾಡಿದವರಿಗೂ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಕಾಣುತ್ತಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.