ಬಿಪಿಎಲ್ ಕಾರ್ಡಿಗೆ ಹೆಸರು ಕಾಳು, ಮುಕ್ತ ಮಾರುಕಟ್ಟೆಗೆ ಬಿಳಿ ಸೀಮೆಎಣ್ಣೆ
ಬೆಂಗಳೂರು ಜನವರಿ 30: ಮುಕ್ತ ಮಾರುಕಟ್ಟೆಯಲ್ಲಿ ಬಿಳಿ ಸೀಮೆಎಣ್ಣೆ ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ ರಿಯಾಯಿತಿ ದರದಲ್ಲಿ ಹೆಸರುಕಾಳು ವಿತರಣೆಗೆ ರಾಜ್ಯ ಸರಕಾರ ಮುಂದಾಗಿದೆ. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮಾಹಿತಿ ನೀಡಿ, ಮುಕ್ತ ಮಾರುಕಟ್ಟೆಯಲ್ಲಿ ಲೀಟರ್ ಬಿಳಿ ಸೀಮೆಎಣ್ಣೆಯನ್ನು 17 ರೂಪಾಯಿಯಂತೆ ಒದಗಿಸಲು ಕ್ರಮ ವಹಿಸಲಾಗಿದೆ. ಜತೆಗೆ ಬಿಪಿಎಲ್ ಪಡಿತರದಾರರಿಗೆ ಹೆಸರು ಕಾಳನ್ನು ಕೆಜಿಗೆ 30 ರೂಪಾಯಿಯಂತೆ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಅಕ್ಕಿ, ಉಪ್ಪು, ಎಣ್ಣೆ ನೀಡುತ್ತಿರುವುದರ ಜತೆಗೆ ಇದನ್ನೂ ನೀಡಲಾಗುವುದು ಎಂದು ಹೇಳಿದ್ದಾರೆ.[ಎಪಿಎಲ್ ಪಡಿತರ ಚೀಟಿಗಾಗಿ ಇಂದಿನಿಂದಲೇ(ಜ.9) ಅರ್ಜಿ ಹಾಕಿ]
ಒಂದು ತಿಂಗಳು ಹೆಸರುಕಾಳು, ಮತ್ತೊಂದು ತಿಂಗಳು ತೊಗರಿಬೇಳೆ ವಿತರಿಸಲು ಕ್ರಮ ವಹಿಸಲಾಗಿದೆ.ಮಂಗಳವಾರ ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ಯೋಜನೆಗೆ ಚಾಲನೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿಗಳು ಚಾನಲೆ ನೀಡಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಅಪೌಷ್ಟಿಕತೆ ತಡೆಯಲು ಪಡಿತರ ವ್ಯವಸ್ಥೆಗೆ ದ್ವಿದಳಧಾನ್ಯ ವಿತರಣೆಗೆ ರಾಜ್ಯ ಸರ್ಕಾರ ಈ ಹಿಂದೆ ಮುಂದಾಗಿತ್ತು. ಆದರೆ ಬೇಳೆ ದರಗಳು ಗಗನ ಮುಖಿಯಾಗಿದ್ದರಿಂದ ರಾಜ್ಯ ಸರಕಾರ ವಿತರಣೆಗೆ ಹಿಂದೇಟು ಹಾಕಿತ್ತು. ಈಗ ಮತ್ತೆ ಬೇಳೆದ ಸರಗಳು ಕುಸಿತವಾಗಿದ್ದು ಸರಕಾರ ಧಾನ್ಯ ವಿತರಣೆಗೆ ಮುಂದಾಗಿದೆ.