ಏಪ್ರಿಲ್ 7 ರಂದು ಸಾರಿಗೆ ನೌಕರರ "ಗಾಂಧಿಗಿರಿ ಹೋರಾಟ" ಪಕ್ಕಾ
ಬೆಂಗಳೂರು, ಏಪ್ರಿಲ್ 05: ರಾಜ್ಯದ ನಾಲ್ಕು ನಿಗಮದ ಸಾರಿಗೆ ನೌಕರರು ಏಪ್ರಿಲ್ 7 ರಂದು ಮತ್ತೆ ಹೋರಾಟಕ್ಕೆ ಇಳಿಯಲು ಸಕಲ ಸಿದ್ಧತೆ ನಡೆಸಿದ್ದಾರೆ. ಆರನೇ ವೇತನ ಆಯೋಗದ ಶಿಫಾರಸಿನಂತೆ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡುವ ಸಂಬಂಧ ರಾಜ್ಯ ಸರ್ಕಾರ ಇನ್ನೆರಡು ದಿನದಲ್ಲಿ ತನ್ನ ತೀರ್ಮಾನ ಪ್ರಕಟಿಸದಿದ್ದರೆ ಮತ್ತೆ ಹೋರಾಟಕ್ಕೆ ಇಳಿಯಲು ತೀರ್ಮಾನಿಸಿದ್ದಾರೆ. ಸಾರಿಗೆ ನೌಕರರು ಬಸ್ ಸೇವೆ ಸ್ಥಗಿತಗೊಳಿಸಿದರೆ ಸಾರಿಗೆ ಇಲಾಖೆ ಖಾಸಗಿ ಬಸ್ ಸೇವೆ ಇಳಿಸುವ ಚಿಂತನೆ ನಡೆಸಿದೆ. ಇದಕ್ಕೆ ಟಾಂಗ್ ಕೊಡಲಿಕ್ಕೆ ಗಾಂಧಿಗಿರಿ ವಿನೂತನ ಮಾದರಿ ಹೋರಾಟ ನಡೆಸಲು ಸಾರಿಗೆ ನೌಕರರು ಚಿಂತನೆ ನಡೆಸಿದ್ದು, ಏಪ್ರಿಲ್ 7 ರಿಂದ ರಾಜ್ಯದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಸೌಲಭ್ಯ ನೀಡಬೇಕು ಎಂಬ ಬಹುಮುಖ್ಯ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ನಿಗಮದ 1.35 ಲಕ್ಷ ನೌಕರರು ಹೋರಾಟಕ್ಕೆ ಇಳಿದಿದ್ದರು. ಬಸ್ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಇಡೀ ರಾಜ್ಯದ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು. ನಾಲ್ಕು ದಿನಗಳ ಬಳಿಕ ನಡೆಸದ ಸಂಧಾನ ಯಶಸ್ವಿ ಹಿನ್ನೆಲೆಯಲ್ಲಿ ಮುಷ್ಕರವನ್ನು ಸಾರಿಗೆ ನೌಕರರು ವಾಪಸು ಪಡೆದಿದ್ದರು.
ಏ.7 ರಿಂದ ಸಾರಿಗೆ ಮುಷ್ಕರ; ಖಾಸಗಿ ವಾಹನ ಸಂಚಾರಕ್ಕೆ ಅವಕಾಶ
ಆದರೆ, ಸರ್ಕಾರ ನೀಡಿದ ಭರವಸೆಯಂತೆ ಈವರೆಗೂ ಸಾರಿಗೆ ನೌಕರರ ಬೇಡಿಕೆ ಈಡೇರಿಸಲಿಲ್ಲ. ಇನ್ನು ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಂಬಂಧ ಪ್ರಸ್ತಾಪ ಮಾಡಿದಾಗಲೆಲ್ಲಾ, ಸಾರಿಗೆ ನಿಗಮಗಳು ಸಾಲದಲ್ಲಿ ಸಿಲುಕಿವೆ ಎಂಬ ಉತ್ತರವನ್ನು ಸಾರಿಗೆ ಸಚಿವರು ಹೇಳಿಕೊಂಡಿದ್ದಾರೆ. ಸರ್ಕಾರದ ಈ ನಡೆಯ ಬಗ್ಗೆ ಸಾರಿಗೆ ನೌಕರರಲ್ಲಿ ಆಕ್ರೋಶ ಬುಗಿಲೆದ್ದಿದೆ. ಕಳೆದ ಸಲ ನಡೆದ ಹೋರಾಟಕ್ಕೂ ಭಿನ್ನವಾಗಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.
ಗಾಂಧಿಗಿರಿ ಹೋರಾಟದ ಸ್ವರೂಪ
ಮೊದಲ ಹಂತದಲ್ಲಿ ಸಾರಿಗೆ ನೌಕರರ ನ್ಯಾಯಬದ್ಧ ಬೇಡಿಕೆಗಳ ಬಗ್ಗೆ ಸಾರ್ವಜನಿಕರಿಗೆ ಕರ ಪತ್ರ ಹಂಚುವ ಚಳವಳಿ ಹಮ್ಮಿಕೊಂಡಿದ್ದಾರೆ. ಈಗಾಗಲೇ ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ನೌಕರರು ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ಹಂಚುವ ಚಳುವಳಿ ಹಮ್ಮಿಕೊಂಡಿದೆ. ಕಳೆದ ಎರಡು ದಿನದಿಂದ ತರಕಾರಿ ಮಾರ್ಕೆಟ್, ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಸಾರಿಗೆ ನೌಕರರ ಸಮಸ್ಯೆ ಕುರಿತು ಕರಪತ್ರಗಳನ್ನು ಹಂಚುತ್ತಿದ್ದಾರೆ. ಈ ಮೂಲಕ ನಮ್ಮ ನ್ಯಾಯ ಬದ್ಧ ಹೋರಾಟಕ್ಕೆ ನಿಮ್ಮ ಬೆಂಬಲ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.
ವಾಯುವ್ಯ ಸಾರಿಗೆ ಧಾರವಾಡ ಘಟಕದ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಪಿ.ಎಚ್. ನೀರಳಕೇರಿ ನೇತೃತ್ವದಲ್ಲಿ ಈಗಾಗಲೇ ಕರಪತ್ರಗಳನ್ನು ವಿತರಣೆ ಮಾಡುತ್ತಿದ್ದಾರೆ. ಇಂದು ನಾಲ್ಕು ಘಟಕದಲ್ಲಿ ಸಾರಿಗೆ ನೌಕರರು ಮುಷ್ಕರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಏ. 7 ರೊಳಗೆ ರಾಜ್ಯ ಸರ್ಕಾರ ನೌಕರರ ವೇತನ ವಿಚಾರದಲ್ಲಿ ಬೇಡಿಕೆ ಈಡೇರದಿದ್ದರೆ, ದೊಡ್ಡ ಮಟ್ಟದಲ್ಲಿ ಅನಿರ್ಧಿಷ್ಟ ಮುಷ್ಕರ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
ಆರನೇ ವೇತನ ಆಯೋಗ ಶಿಫಾರಸಿನಂತೆ ವೇತನಕ್ಕೆ ಬೇಡಿಕೆ
ಇನ್ನು ರಾಜ್ಯದ ನಾಲ್ಕು ಘಟಕಗಳ ಸಾರಿಗೆ ನೌಕರರ ಹೋರಾಟದ ಸ್ವರೂಪ ನೋಡಿಕೊಂಡು ಬಿಎಂಟಿಸಿ ನೌಕರರು ಗಾಂಧಿಗಿರಿ ಹೋರಾಟ ನಡೆಸುವ ಬಗ್ಗೆ ಚರ್ಚೆಗಳು ನಡೆದಿವೆ. ಹೋರಾಟ ನಡೆಸಲು ತುದಿಗಾಲಲ್ಲಿ ನಿಂತಿರುವ ನೌಕರರು ಈ ಬಾರಿ ತಮ್ಮ ಬೇಡಿಕೆ ಈಡೇರಿವ ವರೆಗೂ ಹೋರಾಟ ಕೈಬಿಡದಿರುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ. ಇನ್ನು ಹೋರಾಟ ಯಾವ ಸ್ವರೂಪದಲ್ಲಿ ನಡೆಸಬೇಕು ಎಂಬುದರ ಬಗ್ಗೆ ನಾನಾ ಆಯಾಮದಲ್ಲಿ ಚರ್ಚೆ ನಡೆಸಿದ್ದಾರೆ.
ಕರಪತ್ರ ಚಳವಳಿ
ಏ. 6 ರಂದು ಸಾರಿಗೆ ನೌಕರರಿಗೆ ಆಗಿರುವ ಅನ್ಯಾಯ, ಸರ್ಕಾರದ ಮುಂದಿಟ್ಟಿರುವ ಬೇಡಿಕೆ ಕುರಿತು ಪ್ರಯಾಣಿಕರಲ್ಲಿ ಅರಿವು ಮೂಡಿಸುವುದು. ಎರಡನೇ ಹಂತದಲ್ಲಿ ಡ್ಯೂಟಿಗೆ ವರದಿ ಮಾಡಿಕೊಂಡು ಪ್ರಯಾಣಿಕರಿಗೆ ಉಚಿತ ಸೇವೆ ಒದಗಿಸುವುದು. ಅಂದರೆ ಏ. 7ರ ನಂತರ ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರಿಂದ ಟಿಕೆಟ್ ದರ ವಸೂಲಿ ಮಾಡದೇ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಮೂಲಕ ಟಿಕೆಟ್ ನಿರಾಕರಣೆ ಚಳವಳಿ ಹಮ್ಮಿಕೊಳ್ಳುವ ಬಗ್ಗೆ ಸಾರಿಗೆ ನೌಕರರಲ್ಲಿ ಚರ್ಚೆ ನಡೆದಿದೆ.
ಸಾರಿಗೆ ನೌಕರರು ಮುಷ್ಕರ ಕೈಗೊಂಡರೆ ಖಾಸಗಿ ಬಸ್ ಸೇವೆ ಇಳಿಸುವ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿ ತಂತ್ರದ ಜತೆಗೆ ಸರ್ಕಾರಕ್ಕೆ ಹೋರಾಟದ ಬಿಸಿ ಮುಟ್ಟಿಸಲು ಪ್ರಯಾಣಿಕರಿಂದ ಟಿಕೆಟ್ ದರ ಪಡೆಯದೇ ನಿರಾಕರಣೆ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಆದರೆ, ಕೆಲವು ನೌಕರರು ಇದಕ್ಕೆ ಪ್ರತಿರೋಧ ತೋರಿದ್ದಾರೆ. ಈಗಲೇ ನಷ್ಟದಲ್ಲಿರುವ ಸಾರಿಗೆ ನಿಗಮಗಳಿಗೆ ಮತ್ತಷ್ಟು ನಷ್ಟವುಂಟು ಮಾಡುವುದು ಬೇಡ.
ಇದರ ಬದಲಾಗಿ ಈ ಹಿಂದಿನಂತೆ ಕರ್ತವ್ಯ ತ್ಯಜಿಸಿ ಅನಿರ್ಧಿಷ್ಟ ಮುಷ್ಕರ ಕೈಗೊಳ್ಳುವುದೇ ಸೂಕ್ತ ಎಂಬ ಅಭಿಪ್ರಾಯ ವ್ಕಕ್ತಪಡಿಸಿದ್ದಾರೆ. ಒಂದು ವೇಳೆ ಟಿಕೆಟ್ ನಿರಾಕರಣೆ ಮೂಲಕ ಗಾಂಧಿಗಿರಿ ಹೋರಾಟಕ್ಕೆ ಸಾರಿಗೆ ನೌಕರರು ಇಳಿದಿದ್ದೇ ಆದಲ್ಲಿ ಪ್ರಯಾಣಿಕರಿಗೆ ಉಚಿತ ಬಸ್ ಸೇವೆ ಸಿಗಲಿದೆ. ಕೆಲಸಕ್ಕೆ ಹಾಜರಾದಂಗೂ ಇರಬೇಕು. ಹೋರಾಟವೂ ಮುಂದುವರೆಯಬೇಕು ಎಂಬ ಉದ್ಧೇಶದಿಂದ ಈ ಪ್ರಸ್ತಾವನೆ ಬಗ್ಗೆ ಸಾರಿಗೆ ನೌಕರರು ಗಂಭೀರ ಚರ್ಚೆ ನಡೆಸಿದ್ದಾರೆ. ಈ ಕುರಿತ ಸಾಧ್ಯತೆ ಕುರಿತು ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ.
ಬಿಎಂಟಿಸಿಯಿಂದ ಉಚಿತ ಸೇವೆ
ಸಾರಿಗೆ ನೌಕರರು ಮತ್ತೊಮ್ಮೆ ಬಸ್ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟ ಮುಷ್ಕರ ಕೈಗೊಂಡೆ ಎಸ್ಮಾ ಜಾರಿ, ಖಾಸಗಿ ಬಸ್ ಸೇವೆ ಕಲ್ಪಿಸುವ ಮೂಲಕ ನೌಕರರ ಹೋರಾಟಕ್ಕೆ ಟಾಂಗ್ ಕೊಡಲು ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಈ ಕುರಿತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡ ಅನೇಕ ಬಾರಿ ಸ್ಪಷ್ಟನೆ ನೀಡಿದ್ದಾರೆ. ಖಾಸಗಿ ಬಸ್ ಸೇವೆ ಕಲ್ಪಿಸಿದ್ದೇ ಆದಲ್ಲಿ, ಸಾರಿಗೆ ನೌಕರರು ಹೋರಾಟದ ಸ್ವರೂಪ ಬದಲಿಸುವ ಬಗ್ಗೆ ಇನ್ನೆರಡು ದಿನದಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಾರಿಗೆ ನೌಕರರ ಒಕ್ಕೂಟದ ಮುಖಂಡರೊಬ್ಬರು ತಿಳಿಸಿದ್ದಾರೆ.
ನಾಯಕತ್ವ ಗೊಂದಲಕ್ಕೆ ತೆರೆ
ಇನ್ನೂ ಸಾರಿಗೆ ನೌಕರರ ಹೋರಾಟದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪಾಲ್ಗೊಂಡಿದ್ದರು. ಇದು ಕಳೆದ ಭಾರಿ ಹೋರಾಟದ ವೇಳೆ ವಿವಾದಕ್ಕೆ ನಾಂದಿ ಹಾಡಿತ್ತು. ಆದರೆ ಈ ಭಾರಿ ಸಾರಿಗೆ ನೌಕರರು ಮುಖಂಡರ ಮಾತಿಗೆ ಹೆಚ್ಚು ಆದ್ಯತೆ ಕೊಡಬಾರದು. ಕೇವಲ ಸರ್ಕಾರದ ಭರವಸೆಗೆ ತೃಪ್ತಿ ಪಡದೇ ಆರನೇ ವೇತನ ಆಯೋಗದಂತೆ ವೇತನ ಪರಿಷ್ಕರಣೆ ಆದೇಶ ಮಾಡುವ ವರೆಗೂ ಹೋರಾಟ ಕೈ ಬಿಡಬಾರದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ಈ ಸಲ ಸಾರಿಗೆ ನೌಕರರ ಸಾಮೂಹಿಕ ನಾಯಕತ್ವದಡೆ ಕಾಲಿಟ್ಟಿದ್ದಾರೆ. ಅಂತೂ ಏಪ್ರಿಲ್ 7 ರಂದು ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವುದು ಖಚಿತ.
Recommended Video
ಕಾನೂನು ತಜ್ಞರ ಅಭಿಪ್ರಾಯ
ಸಾರಿಗೆ ನೌಕರರು ಪ್ರಯಾಣಿಕರಿಂದ ಟಿಕೆಟ್ ಪಡೆಯದೇ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಡುವ ಮೂಲಕ ಗಾಂಧಿಗಿರಿ ಹೋರಾಟ ನಡೆಸುವ ಬಗ್ಗೆ ಕಾನೂನು ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ತವ್ಯಕ್ಕೆ ಹಾಜರಾದ ನೌಕರ ಸಂಸ್ಥೆಗೆ ನಷ್ಟ ವುಂಟು ಮಾಡುವುದು ಅಪರಾಧವಾಗುತ್ತದೆ. ನಷ್ಟವನ್ನು ಸಾರಿಗೆ ನೌಕರರಿಂದಲೇ ಭರಿಸುವಂಥ ತೀರ್ಮಾನ ಸರ್ಕಾರ ಕೈಗೊಳ್ಳಬಹುದು. ಹೀಗಾಗಿ ಸಾರಿಗೆ ನೌಕರರು ಈ ರೀತಿಯ ಹೋರಾಟ ಮಾಡಲು ಅವಕಾಶವಿಲ್ಲ. ಒಂದು ವೇಳೆ ಮಾಡಿದರೂ ಸರ್ಕಾರ ಕೈಗೊಳ್ಳುವ ತೀರ್ಮಾನದ ಮೇಲೆ ಆಧಾರ ಪಟ್ಟಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.