ಮೇಕೆದಾಟು ಯೋಜನೆ : ಕರ್ನಾಟಕ ಸರ್ಕಾರದಿಂದ ಡಿಪಿಆರ್ ಸಲ್ಲಿಕೆ
ಬೆಂಗಳೂರು, ಜನವರಿ 22 : ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ಕರ್ನಾಟಕ ಸರ್ಕಾರ ಡಿಪಿಆರ್ ಸಲ್ಲಿಕೆ ಮಾಡಿದೆ. ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ.
ಕೇಂದ್ರ ಜಲ ಆಯೋಗದ ಆದೇಶದಂತೆ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಡಿಪಿಆರ್ ಅನ್ನು ಆಯೋಗದ ಯೋಜನಾ ಮೌಲ್ಯಮಾಪನ ಮುಖ್ಯ ಇಂಜಿನಿಯರ್ಗೆ ಸಲ್ಲಿಸಿದೆ. ಜನವರಿ 18ರಂದು ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಡಿಪಿಆರ್ ಸಲ್ಲಿಸಿದ್ದಾರೆ.
ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಾಣಕ್ಕೆ ಒಪ್ಪಿಗೆ ನೀಡಿಲ್ಲ : ಕೇಂದ್ರ ಸರ್ಕಾರ
ಮೇಕೆದಾಟು ಯೋಜನೆಯ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಯನ್ನು ತಮಿಳುನಾಡು, ಪುದುಚೇರಿ, ಕೇರಳ ರಾಜ್ಯಗಳಿಗೂ ಸಲ್ಲಿಸಲಾಗಿದೆ. ಆ ರಾಜ್ಯಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕರ್ನಾಟಕ ಸರ್ಕರ ಜಲ ಆಯೋಗಕ್ಕೆ ಮಾಹಿತಿ ನೀಡಿದೆ.
ಚಿತ್ರಗಳು : ಮೇಕೆದಾಟುಗೆ ಸಚಿವ ಡಿ.ಕೆ.ಶಿವಕುಮಾರ್ ಭೇಟಿ
ಯೋಜನೆಯ ಡಿಪಿಆರ್ ಬಗ್ಗೆ ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಮುಂದೆ ಇಡಲಾಗುತ್ತದೆ. ಪ್ರಾಧಿಕಾರದ ಒಪ್ಪಿಗೆ ಸಿಕ್ಕಿದ ಬಳಿಕ ಕೇಂದ್ರ ಜಲಸಂಪನ್ಮೂಲ ಇಲಾಖೆಯ ಸಲಹಾ ಸಮಿತಿ ಎದುರು ಇಡಲಾಗುತ್ತದೆ.
ಮೇಕೆದಾಟು ಯೋಜನೆ : ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹೇಳಿದ್ದೇನು?
ಕಾವೇರಿ ಜಲಾನಯನ ಪ್ರದೇಶದಲ್ಲಿ ಮೇಕೆದಾಟು ಯೋಜನೆ ಜಾರಿಗೊಳಿಸಲು ಕರ್ನಾಟಕ ಸರ್ಕಾರ ಬಯಸಿದೆ. ಕೇಂದ್ರ ಜಲ ಆಯೋಗ ಮೊದಲು ಯೋಜನೆಯ ಡಿಪಿಆರ್ ಸಲ್ಲಿಸಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿತ್ತು.
ತಮಿಳುನಾಡು ಸರ್ಕಾರ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಮೇಕೆದಾಟು ಯೋಜನೆ ಜಾರಿಯಾದರೆ ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂಬುದು ತಮಿಳುನಾಡು ಸರ್ಕಾರದ ವಾದವಾಗಿದೆ.
ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ತಮಿಳುನಾಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಸುಪ್ರೀಂಕೋರ್ಟ್ಗೆ ಸಹ ಅರ್ಜಿಯನ್ನು ಸಲ್ಲಿಸಿ ಯೋಜನೆ ಜಾರಿಯಾಗದಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮೇಕೆದಾಟು ಯೋಜನೆ ಪೂರ್ಣಗೊಂಡರೆ 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು ಮತ್ತು ಬೆಂಗಳೂರಿಗೆ 17 ಟಿಎಂಸಿ ನೀರು ಸಿಗಲಿದೆ ಎಂಬುದು ಕರ್ನಾಟಕ ಸರ್ಕಾರದ ವಾದವಾಗಿದೆ.